Get Updates
Get notified of breaking news, exclusive insights, and must-see stories!

ಜೆಪಿ ನಗರ ದಂಪತಿಯನ್ನು ಪ್ಲಂಬರ್ ಕೊಲೆ ಮಾಡಿದನೆ?

blore-jp-nagar-couple-murder-plumbers-hand-suspected
ಬೆಂಗಳೂರು, ಆ.11: ರಾಜಧಾನಿಯ ದಕ್ಷಿಣ ಭಾಗದ ಪ್ರಶಾಂತ ನಗರವಾದ ಜೆಪಿ ನಗರದ ಒಂದನೇ ಹಂತದಲ್ಲಿ 10ನೇ ಬಿ ಅಡ್ಡರಸ್ತೆ ನಿವಾಸಿ ವೆಂಕಟೇಶಯ್ಯ (76) ಮತ್ತು ಅವರ ಪತ್ನಿ ಸ್ವರ್ಣಾಂಬ (68) ಅವರ ಕೊಲೆಯಾಗಿದೆ.

ದಂಪತಿಯನ್ನು ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಿರುವ ದುಷ್ಕರ್ಮಿಗಳು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ದಂಪತಿ 34 ವರ್ಷಗಳ ಹಿಂದೆ ಜೆ.ಪಿ.ನಗರದಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡು ಅಲ್ಲಿಯೇ ವಾಸವಾಗಿದ್ದರು. ಆ ಮನೆಯ ಹಿಂದಿನ ಮನೆ ಮತ್ತು ಮೇಲ್ಭಾಗದ ಕೊಠಡಿಯನ್ನು ಬಾಡಿಗೆಗೆ ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿದ್ದ ವೆಂಕಟೇಶಯ್ಯ ಮೂಲತಃ ಆನೇಕಲ್ ತಾಲ್ಲೂಕಿನವರು. ಸ್ವರ್ಣಾಂಬ ದಂಪತಿಗೆ ಮಕ್ಕಳಿರಲಿಲ್ಲ. ದಂಪತಿ, ದೀಪ್ತಿ ಮತ್ತು ಪದ್ಮಾ ಎಂಬ ಮಹಿಳೆಯರನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು.

ಆದರೆ ಈ ಕೊಲೆಗೆ ಸೋಮವಾರ ಮಧ್ಯಾಹ್ನ ಮಹೂರ್ತ ಇಡಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಆ ಸಮಯದಲ್ಲಿ ಮನೆಯಾಕೆ ಸ್ವರ್ಣಾಂಬ ಅವರು ಮನೆಯ ಸಂಪ್ ಕ್ಲೀನ್ ಮಾಡಿಸಲು ಪ್ಲಂಬರುಗಳಿಗೆ ಗೊತ್ತು ಮಾಡಿಕೊಂಡಿದ್ದರು. ಅನುಮಾನದ ಮುಳ್ಳು ಈ ಪ್ಲಂಬರುಗತ್ತಲೇ ತಿರುಗಿರುವುದು.

ಆದರೆ ಆ ಪ್ಲಂಬರುಗಳು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ನಾಲ್ಕು ಮಂದಿ ಕೂಲಿ ಕೆಲಸಗಾರರಿಂದ ಮನೆಯ ನೀರಿನ ತೊಟ್ಟಿಯನ್ನು (ಸಂಪ್) ಸ್ವಚ್ಛ ಮಾಡಿಸುತ್ತಿದ್ದೇನೆ ಎಂದು ಸ್ವರ್ಣಾಂಬ ಅವರು ಚನ್ನಸಂದ್ರದಲ್ಲಿರುವ ತಮ್ಮ ನಾಲ್ಕನೆಯ ತಂಗಿ ಲಲಿತಾ ಅವರ ಮೊಬೈಲಿಗೆ ಕರೆ ಮಾಡಿ ತಿಳಿಸಿದ್ದಾರೆ. ಲಭ್ಯವಾಗಿರುವ ಖಚಿತ ಮಾಹಿತಿ ಇದೊಂದೇ. ಆನಂತರ ನಡೆದಿರುವುದೆಲ್ಲ ಅಪ್ಪಟ ಬೇಜವಾಬ್ದಾರಿತನವೆ.

ಸಾಮಾಜಿಕ ಬದ್ಧತೆ, ಕಾಳಜಿ, ಕಳಕಳಿಯ ಕಗ್ಗೊಲೆ: ಸಮಯಕ್ಕಿಂತ ವೇಗವಾಗಿ ಓಡುತ್ತಿರುವ ಇಂದಿನ ಜನರು ಕನಿಷ್ಠ ಸಾಮಾಜಿಕ ಬದ್ಧತೆ, ಕಳಕಳಿ, ಕಾಳಜಿಯನ್ನೂ ತೋರುತ್ತಿಲ್ಲ. ಈ ಪ್ರಕರಣದಲ್ಲಿ ಕೊಲೆಗೀಡಾದ ದಂಪತಿಯ ನಿರ್ಲಕ್ಷ್ಯ ಎಷ್ಟಿದೆಯೋ, ಉಳಿದವರ ಬೇಜವಾಬ್ದಾರಿತನವೂ ಅಷ್ಟೇ ಕೆಲಸ ಮಾಡಿದೆ. ಪಾತಕಿಗಳು ಇದನ್ನೇ ದುರುಪಯೋಗ ಮಾಡಿಸಿಕೊಂಡು ಸೈಲೆಂಟಾಗಿ ಹತ್ಯೆ ಮಾಡಿ ಹೋಗಿದ್ದಾರೆ.

ಬಹುಶಃ ಸೋಮವಾರವೇ ದಂಪತಿಯ ಹತ್ಯೆಯಾಗಿರಬಹುದು. ಆದರೆ ಇದು ಬೆಳಕಿಗೆ ಬಂದಿದ್ದು ಮಾತ್ರ ಶುಕ್ರವಾರ ಬೆಳಗ್ಗೆ ಅಂದರೆ ಜನ ಇನ್ನು ಯಾವ ಪಾಟಿ ತಮ್ಮ ಸುತ್ತಮುತ್ತಲ ಜನರ ಬಗ್ಗೆ ಅಸಡ್ಡೆ ಹೊಂದಿದ್ದಾರೋ ನೀವೇ ಯೋಚಿಸಿ. ಈ ಸುತ್ತಮುತ್ತಲ ಜನರ ಮೇಲೆ ಹೀಗೆ ಆರೋಪ ಮಾಡುವ ಮೊದಲು ಖುದ್ದು ಸಂಬಂಧಿತ ಕೇಂದ್ರ ವ್ಯಕ್ತಿಗಳ ಬಗ್ಗೆಯೇ ಮಾತನಾಡುವ ಜರೂರತ್ತು ಇದೆ.

ಏನಿಲ್ಲ, ನೀವು ಆಕಸ್ಮಾತ್ ವಠಾರದಲ್ಲಿದ್ದು ಅಕ್ಕ-ಪಕ್ಕದ ಮನೆಯೊಳಕ್ಕೆ ಒಂದು ಕ್ಷಣ ಇಣುಕಿ ನೋಡಿ, ಆ ಮನೆಯೊಳಗಿರುವವರು ನಿಮ್ಮನ್ನು ಕ್ಯಾಕರಿಸಿಕೊಂಡು ನೋಡಿದಿದ್ದರೆ ಕೇಳಿ. ಈ ಜನರಿಗೆ ಅಕ್ಕ-ಪಕ್ಕ, ನೆರೆ-ಹೊರೆ ಯಾರೂ ಬೇಡವಾಗಿದ್ದಾರೆ. ತಾವಾಯಿತು, ತಮ್ಮ ಪಾಡಾಯಿತು ಅಂತ ಇದ್ದುಬಿಡುತ್ತಾರೆ.

ಏನು ಹಾಗೆ ನಮ್ಮನ್ನೇ ದುರೆಗುಟ್ಟಿಕೊಂಡು ನೋಡ್ತಿದ್ದಾರೆ. ಇವರಿಗ್ಯಾಕೆ ನಮ್ಮ ಊಸಾಬರಿ? ನಮ್ಮ ಪಾಟಿಗೆ ನಾವಿರೋವಾಗ? ಇವರೇನು ಬಂದು ನಮ್ಮ ಮನೆ ಕಾಯಬೇಕಾ? ಅಂತೆಲ್ಲ ರೊಳ್ಳೆ ತೆಗೆಯುತ್ತಾರೆ. ಈ ನೆರೆ-ಹೊರೆಯವರನ್ನು ಬಿಡಿ. ಇಂತಹ ಜನರು (ಈ ಜನ ಅಂದರೆ ನಾವೂ-ನಾವೇ, ಬೇರೆ ಯಾರೂ ಅಲ್ಲ ತಿಳಿಕೊಳ್ಳಿ) ಸಮೀಪದ ಬಂಧುಗಳನ್ನು ತಮ್ಮ ಸಮೀಪಕ್ಕೂ ಬಿಟ್ಟುಕೊಂಡಿರುವುದಿಲ್ಲ.

ಈ ಪ್ರಕರಣದಲ್ಲಂತೂ ಅಕ್ಕಪಕ್ಕದವರು ತೀರಾ ಅಸಡ್ಡೆತನ ತೋರಿರುವುದು ವ್ಯಕ್ತವಾಗುತ್ತದೆ. ಕೊಲೆಯಾದ ನಾಲ್ಕೈದು ದಿನಗಳ ನಂತರ ಪಕ್ಕದ ಮನೆಯತ್ತ ಇವರು ಇಣುಕಿ ನೊಡಿದ್ದಾರೆ. ಅದೂ ಹೊರಗಿನ ಕೆಲಸದಾಳು ಬಂದು ಹೇಳಿದಾಗಲೇ ಇವರ ಅರಿವಿಗೆ ಬಂದಿರುವುದು. ನಾಲ್ಕು ದಿನಗಳಿಂದ ಹಿರಿಯ ದಂಪತಿಗಳು ಕಾಣಿಸುತ್ತಿಲ್ಲ, ಏನಾದರೂ, ಎಲ್ಲಿಗೆ ಹೋದರು ಎಂಬ ಅನುಮಾನದ ವಾಸನೆಯೂ ಇವರಿಗೆ ಬಡಿದಿಲ್ಲ.

ಐದು ದಿನಗಳ ನಂತರ ಹೊರಗಿನವರು ಬಂದು ಹೇಳಿದಾಗಲೇ ಇವರ ಮೂಗಿಗೆ ಹೆಣಗಳ ವಾಸನೆ ಬಡಿದಿದೆ. ಆಗ ಮೂಗು ಮುಚ್ಚಿಕೊಂಡು ಇಣುಕಿ ನೋಡಿದ್ದಾರೆ. ನೆರೆಹೊರೆಯವರು ಈ ಪಾಟಿ ಜಡ್ಡುಗಟ್ಟಿ ಹೋದರೆ ಹೇಗೆ? ಇಲ್ಲಿ ಯಾರನ್ನೂ ದೂಷಿಸಲು ಹೀಗೆ ಹೇಳುತ್ತಿಲ್ಲ.

ಬದಲಿಗೆ ಸ್ವಲ್ಪವಾದರೂ ಸಾಮಾಜಿಕ ಕಾಳಜಿ ವ್ಯಕ್ತಪಡಿಸಿ, ಮತ್ತು ಆ ನೆರೆಹೊರೆಯವರು ಅಕಸ್ಮಾತ್ ನಿಮ್ಮ ಬಗ್ಗೆ ತುಸು ಹೆಚ್ಚೇ ಕಳಕಳಿ ತೋರಲು ಬಂದಾಗ ಹಚ್ಚಾ ಎಂದು ಅವರನ್ನು ದೂರವಿಡಬೇಡಿ.

ಸೈಲೆಂಟ್ ಕಿಲ್ಲರ್ಸ್: ಇನ್ನು, ಮತ್ತೆ ಕೇಸಿನ ವಿಷಯಕ್ಕೆ ಬಂದಾಗ ಅನುಮಾನದ ಮುಳ್ಳು ಪ್ಲಂಬರುಗಳತ್ತ ತಿರುಗಿರುವಾಗ ಪೊಲೀಸರನ್ನು ಹಂತಕರತ್ತ ಕೊಂಡೊಯ್ಯಬೇಕಾಗಿರುವುದು ದೂರವಾಣಿ ಕರೆಗಳು ಅನಿಸುತ್ತಿದೆ. ಈ ದಂಪತಿ ಸ್ಥಿರ ದೂರವಾಣಿ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

ಅಕಸ್ಮಾತ್ ದೂರವಾಣಿ ಕರೆ ಮಾಡಿ ಪ್ಲಂಬರುರುಗಳನ್ನು ಮನೆಗೆ ಕರೆಸಿಕೊಂಡಿದ್ದರೆ ಪಾತಕಿಗಳು ಪಾತಾಳದಲ್ಲೇ ಇದ್ದರೂ ಪೊಲೀಸರು ಹಿಡಿದು ತರಬಲ್ಲರು. ಅಷ್ಟು ಚಾಕಚಕ್ಯತೆ, ತಂತ್ರಜ್ಞಾನ ನಮ್ಮ ಪೊಲೀಸರಲ್ಲಿದೆ. ಮತ್ತು ನಮ್ಮೀ ಪೊಲೀಸರು ಈಗಾಗಲೇ 'ಸಾವಿನ ಕರೆಯ' ಬೆನ್ನುಹತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ದಂಪತಿ ದೂರವಾಣಿ ಮೂಲಕ ತಮ್ಮ ಸಾವಿಗೆ ಕರೆ ಮಾಡಿದ್ದರು ಎಂಬುದು ಖಚಿತವಾಗಬೇಕಷ್ಟೇ.

ಮನೆಯ ಮುಂಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿದೆ. ಹಿಂದಿನ ಬಾಗಿಲನ್ನು ಹೊರಗಿನಿಂದ ಲಾಖ್ ಮಾಡಿಕೊಂಡು ಹೋಗಿದ್ದಾರೆ. ಅಲ್ಲಿಗೆ ಅಷ್ಟೋ ಇಷ್ಟೋ ಪರಿಚಯಸ್ಥರೇ ಮನೆಯೊಳಕ್ಕೆ ಸಾವಕಾಶವಾಗಿ ಬಂದು ಹತ್ಯೆಗಳನ್ನು ಮಾಡಿಹೋಗಿದ್ದಾರೆ ಅನಿಸುತ್ತದೆ.

ಮೃತ ವೆಂಕಟೇಶಯ್ಯ ಮತ್ತು ಸ್ವರ್ಣಾಂಬ ಅವರಿಗೆ ಯಾರೂ ಶತ್ರುಗಳಿರಲಿಲ್ಲ. ಸೌಮ್ಯ ಸ್ವಭಾವದವರಾದ ಅವರು ಯಾರೊಂದಿಗೂ ಹಣಕಾಸು ವ್ಯವಹಾರ ಸಹ ಇಟ್ಟುಕೊಂಡಿರಲಿಲ್ಲ' ಎಂಬುದೂ ಇಲ್ಲಿ ಮುಖ್ಯವಾಗುತ್ತದೆ.

ಅನಾಯಾಸವಾಗಿ ಮನೆಯೊಳಕ್ಕೆ ಬಂದ ಪ್ಲಂಬರುಗಳು ದಂಪತಿಯ ಚಲನವಲನವನ್ನು ಕಣ್ಣಳತೆಯಲ್ಲೇ ಗಮನಿಸಿ ಹಣದಾಸೆಗಾಗಿ ದಿಢೀರನೆ ಈ ಪಾತಕ ಕೃತ್ಯವೆಸಗಿರಬಹುದು ಅನಿಸುತ್ತಿದೆ. ಹೇಗಾದರಾಗಲಿ, ನೆರೆಹೊರೆಯವರ ಬಗ್ಗೆ ಇನ್ನಾದರೂ ಒಂದಷ್ಟು ಕನಿಷ್ಠ ಕಾಳಜಿ ಹೊಂದಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+