ರಾಜಕೀಯವಾಗಿ ಮುಗಿಸಲು ಬಿಎಸ್ವೈ ಸಂಚು : ಡಿವಿಎಸ್
"ಬೆಂಗಳೂರಿನಲ್ಲಿ ಮತ್ತು ನನ್ನ ತವರೂರಿನಲ್ಲಿರುವ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಯಡಿಯೂರಪ್ಪ ಹಿಂಬಾಲಕರು ಕಲೆಹಾಕುತ್ತಿರುವ ಮಾಹಿತಿ ನನಗೆ ತಿಳಿದುಬಂದಿದೆ. ಇದಕ್ಕಾಗಿ ನನ್ನ ವೈರಿಗಳ ಸಹಾಯವನ್ನು ಕೂಡ ಅವರು ಪಡೆಯುತ್ತಿದ್ದಾರೆ. ನನ್ನ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಕೇಸ್ ದಾಖಲಿಸಲು ಎಲ್ಲ ಯತ್ನ ನಡೆಸಿದ್ದಾರೆ" ಎಂದು ಡಿವಿಎಸ್ ಕಿಡಿಕಾರಿದರು.
"ಎಚ್ಎಸ್ಆರ್ ಬಡಾವಣೆಯಲ್ಲಿ ಅಕ್ರಮವಾಗಿ ಬಿಡಿಎ ಸೈಟ್ ಪಡೆದು ಕಟ್ಟಡ ನಿರ್ಮಿಸುತ್ತಿರುವುದಾಗಿ ನಾಗಲಕ್ಷ್ಮಿ ಬಾಯಿ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರ ಹಿಂದೆ ಯಡಿಯೂರಪ್ಪನವರ ಕೈವಾಡವಿತ್ತು. ಈಗ ಅದೇ ನಾಗಲಕ್ಷ್ಮಿ ಬಾಯಿಯ ಸಹಾಯ ಪಡೆದು ನನ್ನ ವಿರುದ್ಧ ಮತ್ತೆ ಸಂಚು ನಡೆಸಿದ್ದಾರೆ" ಎಂದು ಅವರು ಯಡಿಯೂರಪ್ಪ ವಿರುದ್ಧ ನೇರವಾಗಿ ಆರೋಪ ಮಾಡಿದರು.
"ನಾನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸ್ಪರ್ಧಾಳುವಾಗಿರುವುದು ಯಡಿಯೂರಪ್ಪನವರಿಗೆ ಸಹಿಸಲು ಆಗುತ್ತಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಪಕ್ಷದಲ್ಲಿ ಉನ್ನತ ಹುದ್ದೆ ತಪ್ಪಿಸಲು ಅವರು ನಡೆಸುತ್ತಿರುವ ವ್ಯವಸ್ಥಿತ ಸಂಚು. ನನ್ನನ್ನು ಅನ್ಯಾಯವಾಗಿ ಮುಖ್ಯಮಂತ್ರಿ ಪಟ್ಟದಿಂದ ಇಳಿಸಲು ಅವರು ಯಶಸ್ವಿಯಾದರು. ಈಗ ರಾಜಕೀಯವಾಗಿ ನನ್ನನ್ನು ಸಂಪೂರ್ಣವಾಗಿ ಮುಗಿಸಲು ಸಂಚು ನಡೆಸಿದ್ದಾರೆ. ಆದರೆ, ಈ ಸಂಚಿನಲ್ಲಿ ಅವರು ಜಯಶಾಲಿಯಾಗುವುದಿಲ್ಲ" ಎಂದು ಸದಾನಂದ ಗೌಡ ನುಡಿದರು.
ಇದರಿಂದಾಗಿ, ಸ್ನೇಹಿತರ ದಿನಾಚರಣೆಯಂದು ಇಬ್ಬರೂ ಒಟ್ಟಾಗಿ ಕನ್ನಡ ಚಿತ್ರ 'ಭಾಗೀರತಿ' ನೋಡಿ ತಮ್ಮಿಬ್ಬರ ನಡುವೆ ಸ್ನೇಹವಿದೆ ಎಂದು ಬಿಂಬಿಸಲು ಯತ್ನಿಸಿದ್ದು ಸುಳ್ಳು ಎಂದು ಮತ್ತೆ ಸಾಬೀತಾದಂತಾಗಿದೆ. ಸಿನೆಮಾ ನೋಡಿದ ದಿನವೇ ತಾವಿಬ್ಬರೂ ಸ್ನೇಹಿತರು, ದ್ವೇಷವೇನೂ ಇಲ್ಲ ಎಂದು ಸದಾನಂದ ಗೌಡ ನಗುತ್ತಲೇ ಹೇಳಿಕೆ ನೀಡಿದ್ದರು.
ಚಿತ್ರ ನೋಡಿದ ಎರಡು ದಿನದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸದಾನಂದ ಗೌಡರು ನಾಲಾಯಕ್ ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿದ ಬೆನ್ನಲ್ಲೇ ಯಡಿಯೂರಪ್ಪನವರು ತಮ್ಮ ರಾಜಕೀಯ ದಾಳಗಳನ್ನು ಮತ್ತೆ ಉರುಳಿಸಲು ಆರಂಭಿಸಿದ್ದಾರೆ.