ಮಳೆಯಲ್ಲಿ ಮೋಸ, ದೇವರಿಗೆ ಲೀಗಲ್ ನೋಟೀಸ್

ಈ ವಿದ್ಯಮಾನ ನಡೆದಿರುವುದು ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ. ಬೇರೆಡೆ ಸುರಿಸಿದ್ದರೂ ಈ ಜಿಲ್ಲೆಯಲ್ಲಿ ಯಾಕೆ ಮಳೆ ಸುರಿಸಿಲ್ಲ? ಮೂರು ದಿನದಲ್ಲಿ ಉತ್ತರ ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನೋಟೀಸ್ ನೀಡಲಾಗಿದೆ (ಮಳೆ ದೇವ ವರುಣ ಆಗಿದ್ದರೂ, ಅವರೆಲ್ಲರನ್ನು ನಿಯಂತ್ರಿಸುತ್ತಿರುವವನು ದೇವಲೋಕದ ಸಿಇಓ ಇಂದ್ರ ತಾನೆ?)
ಆ ಲೀಗಲ್ ನೋಟೀಸಿನಲ್ಲಿ ಮ್ಯಾಜಿಸ್ಟ್ರೇಟ್ ಅವರ ನಕಲಿ ಸಹಿ ಮಾಡಲಾಗಿದೆ. ಇಲ್ಲಿ ತಮಾಷೆ ಏನೇ ಇರಲಿ, ಇದು ವಸ್ತುಸ್ಥಿತಿಗೆ ಕನ್ನಡಿದೆ. ನೀರಿಲ್ಲದೆ ಜನರು ತತ್ತರಿಸಿದ್ದಾರೆ, ಬೆಳೆಗಳು ಕಮರಿ ಹೋಗುತ್ತಿವೆ, ಜಾನುವಾರುಗಳು ಕಸಾಯಿಖಾನೆಗೆ ಸಾಗಾಟವಾಗುತ್ತಿವೆ, ಜನ ಗುಳೆ ಹೊರಟಿದ್ದಾರೆ. ಮಳೆ ಸುರಿಸಲೆಂದು ದೇವಾಧಿದೇವತೆಗಳಿಗೆ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ, ಪರಿಪರಿಯಾಗಿ ಬೇಡಿಕೊಳ್ಳಲಾಗುತ್ತಿದೆ, ನಾಯಿ ನರಿ, ಕಪ್ಪೆಗಳ ಮದುವೆ ಮಾಡಲಾಗುತ್ತಿದೆ. ಆದರೂ, ದೇವರು ಕೆಲವೆಡೆ ಮಳೆ ಸುರಿಸುವ ಮನಸು ಮಾಡಿದರೆ, ಮತ್ತೊಂದೆಡೆ ತಾರತಮ್ಯ. ಇದ್ಯಾಕೆ ಹೀಗೆ?
ಕರ್ನಾಟಕದ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ, ಮಡಿಕೇರಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳ ಮೇಲೆ ವರುಣದೇವ ಅವಕೃಪೆ ತೋರಿದ್ದಾನೆ. ದಕ್ಷಿಣ ಕರ್ನಾಟಕದಲ್ಲಿ ಮೈಸೂರು, ಮಂಡ್ಯ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೆ, ರಾಯಚೂರು, ಬಳ್ಳಾರಿ, ಬೀದರ್, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ವರುಣದೇವ ಭಾರೀ ಮೋಸ ಮಾಡಿದ್ದಾನೆ.
ಜುಲೈ 27ರಂದು 17 ಕೋಟಿ ರು. ಖರ್ಚು ಮಾಡಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಲಂಚದ ರೂಪದಲ್ಲಿ ಪೂಜೆ ಸಲ್ಲಿಸಲಾಯಿತು. ಪರಿಣಾಮವೇನೋ ಎಂಬಂತೆ ಅನೇಕ ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ವರುಣ ವರ್ಷಧಾರೆ ಮಾಡಿದ. ಉಳಿದ ಜಿಲ್ಲೆಗಳಲ್ಲಿ ಕೊಟ್ಟಿದ್ದು ಸಾಕಾಗಲಿಲ್ಲವೋ ಅಥವಾ ಕೇಳಿಕೊಂಡಿದ್ದು ತಲುಪಲಿಲ್ಲವೋ ಅಥವಾ ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತಿದ್ದಾನೋ ಏನು ಕಥೆಯೋ ವರುಣ ಮುನಿಸಿಕೊಂಡುಬಿಟ್ಟಿದ್ದಾನೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಂದಲೂ ಇಂದ್ರನ ಬದಲಾಗಿ ವರುಣದೇವನಿಗೆ ನೇರವಾಗಿ ಲೀಗಲ್ ನೋಟೀಸ್ ಕಳಿಸಿದರೆ ಹೇಗೆ?












Click it and Unblock the Notifications