ಪದಕ ವಿಜೇತ ಸುಬೇದಾರ್ ವಿಜಯ್ ಈಗ ಮೇಜರ್
ಹಿಮಾಚಲ ಪ್ರದೇಶದ ಹರ್ಸೌರ್ ಗ್ರಾಮದ ವಿಜಯ್ ಬರುವುದನ್ನೇ ಕಾಯುತ್ತಿರುವ ಅವರ ಕುಟುಂಬದವರು ವಿಜಯ್ ಗೆ ಮದುವೆ ಮಾಡಲು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಬೆಳ್ಳಿ ಪದಕ ಗೆದ್ದರೂ ಸೂಕ್ತ ಮನ್ನಣೆ ಗೌರವ ಸಿಗದ ಕಾರಣ ದುಃಖ ಕೊಂಡ ವಿಜಯ್ ಭಾರತೀಯ ಸೇನೆ ಹುದ್ದೆ ತ್ಯಜಿಸುವ ಇರಾದೆ ವ್ಯಕ್ತಪಡಿಸಿದ್ದರು.
ಭಾರತೀಯ ಸೇನೆಯ 16 ಡೊಗ್ರಾ ರೆಜಿಮೆಂಟ್ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ವಿಜಯಕುಮಾರ್ ಕಳೆದ 6 ವರ್ಷಗಳ ಅವಧಿಯಲ್ಲಿ ಈ ತನಕ ತನಗೆ ಒಂದು ಬಾರಿ ಕೂಡಾ ಭಡ್ತಿ ನೀಡಲಾಗಿಲ್ಲ ಎಂಬ ಕಾರಣಕ್ಕಾಗಿ ಸೇನೆ ತ್ಯಜಿಸುವ ನಿರ್ಧಾರವನ್ನು ವ್ಯಕ್ತಪಡಿಸಿದ್ದರು. ವಿಜಯ್ ಕುಮಾರ್ ಅವರ ತಂದೆ ಕೂಡಾ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ವಿಜಯ್ ಅವರು ಸೇನೆ ತ್ಯಜಿಸುವ ನಿರ್ಧಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸೇನೆಯು ಈಗಿರುವ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ವಿಜಯ್ಗೆ ಭಡ್ತಿ ನೀಡಲು ಯೋಚಿಸುತ್ತಿದೆ. ಸೇನಾ ಮುಖ್ಯಸ್ಥರು ಲಂಡನ್ನಿಂದ ಮರಳಿದ ಬಳಿಕ 30 ಲಕ್ಷ ರೂ. ಬಹುಮಾನವನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಒಲಿಂಪಿಕ್ಸ್ನಲ್ಲಿ ವಿಜಯಕುಮಾರ್ ತೋರಿರುವ ಸಾಧನೆಗೆ ಸೇನೆ ಹೆಮ್ಮೆ ಪಡುತ್ತಿದ್ದು, ಸರ್ವಿಸ್ ನಿಯಮದ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೌಲಭ್ಯ ನೀಡಲು ಯತ್ನಿಸಲಿದೆ. ಬುಧವಾರ ಬೆಳಗ್ಗೆ ಆಗಮಿಸಲಿರುವ ವಿಜಯ್ಗೆ ಭವ್ಯ ಸ್ವಾಗತ ನೀಡಲಾಗುವುದು ಎಂದು ಸೇನಾ ಮೂಲಗಳು ತಿಳಿಸಿದೆ.
26 ವರ್ಷದ ವಿಜಯ್ ರಾಯಲ್ ಆರ್ಟಿಲರಿ ಬರಾಕ್ ನಲ್ಲಿ ನಡೆದ ಪುರುಷರ 25 ಮೀ rapid ಫೈರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ವಿಜಯ್ ಕುಮಾರ್ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಭಾರತ ಸತತ ನಾಲ್ಕನೇ ಪದಕ ಗಳಿಸಿದ ಕೀರ್ತಿ ಪಡೆದಿದೆ. ರಾಜವರ್ಧನ್ ರಾಥೋರ್ (ಅಥೆನ್ಸ್, 2004), ಅಭಿನವ್ ಬಿಂದ್ರಾ(ಚಿನ್ನ, ಬೀಜಿಂಗ್ 2008) ಹಾಗೂ ಲಂಡನ್ ಒಲಿಂಪಿಕ್ಸ್ 2012ನಲ್ಲಿ ಗಗನ್ ನಾರಂಗ್ ಹಾಗೂ ವಿಜಯ್ ಕುಮಾರ್.
'ನನ್ನ ಮೊದಲ ಒಲಿಂಪಿಕ್ಸ್ ನಲ್ಲೇ ಪದಕ ಗೆದ್ದಿರುವುದು ಅತೀವ ಸಂತಸ ತಂದಿದೆ. ನನ್ನ ಮೇಲೆ ಅಪಾರ ನಿರೀಕ್ಷೆ, ಒತ್ತಡ ಇದ್ದಿದ್ದು ನಿಜ. ನಾನು ನನ್ನ ಪ್ಲ್ಯಾನ್ ಗೆ ಬದ್ಧನಾಗಿದ್ದೆ ಅದರಂತೆ ಆಟವಾಡಿದೆ'ಎಂದು ವಿಜಯ್ ಕುಮಾರ್ ಪದಕ ಗೆದ್ದ ನಂತರ ಪ್ರತಿಕ್ರಿಯಿಸಿದ್ದರು.
ಇದಕ್ಕೂ ಮುನ್ನ ಕಾಮನ್ ವೆಲ್ತ್ ಕ್ರೀಡೆಯಲ್ಲಿ ದಾಖಲೆಯ 5 ಚಿನ್ನದ ಪದಕ ಗೆದ್ದ ಸಾಧನೆ ಮೆರೆದಿದ್ದಾರೆ. 2010 ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ 2 ಚಿನ್ನ ಗೆದ್ದಿದ್ದರು. ಆದರೆ, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಸ್ವಲ್ಪದರಲ್ಲೇ ಕೈತಪ್ಪಿ ರಜತ ಪದಕ ಕೈ ಸೇರಿದೆ.
ವಿಜಯ್ ಸಾಧನೆ ಮೆಚ್ಚಿ ಕ್ರೀಡಾ ಸಚಿವಾಲಯ ಕೂಡಾ ನಗದು ಬಹುಮಾನ ಘೋಷಿಸುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ ಸರ್ಕಾರ ವಿಜಯ್ ಅವರಿಗೆ 1 ಕೋಟಿ ರು ನಗದು ಬಹುಮಾನ ಘೋಷಿಸಿದೆ.













Click it and Unblock the Notifications