ಕೇಳಿದ್ದು 5864 ಕೋಟಿ ಸಿಕ್ಕಿದ್ದು 282 ಕೋಟಿ
ವಿಧಾನಸೌಧ ಸಭಾಂಗಣದಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಬರ ಅವಲೋಕನ ಸಭೆಯಲ್ಲಿ ಮಾತನಾಡಿದ ಶೆಟ್ಟರ್, ಕೇಂದ್ರ ಸರ್ಕಾರದ ಮಲತಾಯಿ ಧೊರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
1971ರ ನಂತರ ಇಷ್ಟು ದೊಡ್ಡ ಪ್ರಮಾಣದ ಬರವನ್ನು ರಾಜಯ್ ಸರ್ಕಾರ ಎದುರಿಸಿಲ್ಲ. 176 ತಾಲೂಕುಗಳ ಪೈಕಿ 146 ತಾಲೂಕುಗಳು ಬರ ಪೀಡಿತವಾಗಿದೆ. ಈ ಪಟ್ಟಿಗೆ ಇನ್ನಷ್ಟು ತಾಲೂಕುಗಳು ಸೇರುವ ಸಾಧ್ಯತೆಯಿದೆ. ಪರಿಸ್ಥಿತಿ ನಿಭಾಯಿಸಲು ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ.
ಮೊದಲ ಬಾರಿ 2605 ಕೋಟಿಗಳಿಗೆ ಬೇಡಿಕೆ ಸಲ್ಲಿಸಿದ್ದಾಗ 180 ಕೋಟಿ ನೀಡುವ ಭರವಸೆ ಕೊಟ್ಟ ಮನಮೋಹನ್ ಸಿಂಗ್ ಸರ್ಕಾರ ನಂತರ ಕೇವಲ 70 ಕೋಟಿ ರು ಮಾತ್ರ ಬೀಡುಗಡೆ ನೀಡಿತ್ತು. 2 ನೇ ಬಾರಿ 5864 ಕೋಟಿ ರು ಪ್ರಸ್ತಾವನೆ ಸಲ್ಲಿಸಿದಾಗ ಕೇವಲ 282 ಕೋಟಿ ರು ನೀಡಲಾಗಿದೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.
ದೇಶದ ವಿವಿಧ ರಾಜ್ಯಗಳ ಬರ ಪರಿಹಾರಕ್ಕಾಗಿ EGOM ಸಭೆ ನಡೆಸಿ ಬರ ಪೀಡಿತ ರಾಜ್ಯಗಳಿಗೆ ಸುಮಾರು 1931 ಕೋಟಿ ರು ಪ್ಯಾಕೇಜ್ ಘೋಷಿಸಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕಕ್ಕೆ ಈ ಲೆಕ್ಕದಲ್ಲಿ ಇನ್ನೂ 224 ಕೋಟಿ ಯಾದರೂ ಸಿಗುವ ಭರವಸೆ ಇದೆ ಎಂದು ಶೆಟ್ಟರ್ ಹೇಳಿದರು. [ ಮಹಾರಾಷ್ಟ್ರ ಸರ್ಕಾರ 5219 ಕೋಟಿ ರು ಬೇಡಿಕೆ ಇಟ್ಟಿದ್ದು 4919 ಕೋಟಿ ಅನುದಾನ ನೀಡುವ ಭರವಸೆ ಸಿಕ್ಕಿದೆ]
ಕೇಂದ್ರ ಸರ್ಕಾರ ನೀಡುವ ಅನುದಾನ ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆನಷ್ಟ, ಮುಂತಾದ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಲು ಆಗುವುದಿಲ್ಲ. ಹೆಚ್ಚಿನ ಅನುದಾನ ಅಗತ್ಯವಿದೆ. ಇತ್ತೀಚೆಗೆ ಬರ ಪರಿಸ್ಥಿತಿಯನ್ನು ಮನಗೊಂಡು ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ ಗಳಲ್ಲಿ ರೈತರು ಪಡೆದ 25 ಸಾವಿರ ರು.ಗಳ ಹೊರಗಿನ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಇದರಿಂದ ಬೊಕ್ಕಸಕ್ಕೆ 3500 ಕೋಟಿಗಳ ಹೊರೆಯಾಗಲಿದೆ. ಇದರ ಶೇ75ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದ ಶೇ 50 ರಷ್ಟು ಕೃಷಿ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. 762 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, 1157 ಟ್ಯಾಂಕರ್ ಗಳ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳ 186 ವಾರ್ಡ್ ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು 269 ಟ್ಯಾಂಕರ್ ಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಶೆಟ್ಟರ್ ವಿವರಿಸಿದರು.
ಬರ ಪೀಡಿತ ಪ್ರದೇಶಗಳನ್ನು ಖುದ್ದು ಭೇಟಿ ಮಾಡುವಂತೆ ಕೇಂದ್ರ ಶರದ್ ಪವಾರ್ ಹಾಗೂ ಜೈ ರಾಮ್ ರಮೇಶ್ ಅವರನ್ನೊಳಗೊಂಡ ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಶೆಟ್ಟರ್ ಮನವಿ ಮಾಡಿದರು. ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ. ನಮ್ಮ ಪ್ರಸ್ತಾವನೆಯನ್ನು ಪರಿಗಣಿಸಿ ಎಂದು ಕೋರಿದರು.