ಪ್ರಧಾನಿಗೆ ನರೇಂದ್ರ ಮೋದಿ ಬಂಪರ್ ಆಫರ್

ಗ್ರಿಡ್ ವಿಫಲವಾಗಿ ಸತತ ಎರಡು ದಿನಗಳ ಕಾಲ ದೇಶದ 19 ರಾಜ್ಯಗಳು ಕತ್ತಲಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ, "ನಾವು ದೇಶಕ್ಕೆ ವಿದ್ಯುತ್ ನೀಡುತ್ತೇವೆ, ನೀವು ಗುಜರಾತ್ ರಾಜ್ಯಕ್ಕೆ ಅಗ್ಗದ ಪೆಟ್ರೋಲ್ ನೀಡಿರಿ" ಎಂಬ ಆಫರನ್ನು ಗುಜರಾತ್ನ ಇಂಧನ ಸಚಿವ ಸೌರಭ್ ಪಟೇಲ್ ಅವರು ಪ್ರಧಾನಿಗೆ ನೀಡಿದ್ದಾರೆ.
"ನಮಗೆ ಕೇಂದ್ರ ಬೆಂಬಲ ನೀಡಿದರೆ ದೇಶಕ್ಕೆ ತಕ್ಷಣ 2000 ಮೆಗಾ ವ್ಯಾಟ್ ವಿದ್ಯುತ್ತನ್ನು ನೀಡುವ ತಾಕತ್ತು ಗುಜರಾತ್ ರಾಜ್ಯಕ್ಕಿದೆ. ಸದ್ಯಕ್ಕೆ ಇಷ್ಟು ಮಾತ್ರ ಮಾಡಲು ನಮಗೆ ಸಾಧ್ಯವಿದೆ" ಎಂದು ಸೌರಭ್ ಅವರು ಆಗಸ್ಟ್ 2ರಂದು ತಿಳಿಸಿದ್ದಾರೆ.
ಉತ್ತರ ಮತ್ತು ಪೂರ್ವದ ವಿದ್ಯುತ್ ಉತ್ಪಾದನಾ ಗ್ರಿಡ್ ವಿಫಲವಾದ ನಂತರ ದೇಶದ 19 ರಾಜ್ಯಗಳಲ್ಲಿ 600 ಮಿಲಿಯನ್ ನಾಗರಿಕರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ರೈಲು ವ್ಯವಸ್ಥೆಯೇ ಅಸ್ತವ್ಯಸ್ತವಾಗಿದ್ದು, ಜೀವನವೇ ನಿಂತ ನೀರಂತಾಗಿದೆ. ಸುಮಾರು 500 ರೈಲುಗಳನ್ನು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿವೆ. ರಸ್ತೆ ಸಿಗ್ನಲ್ ಗಳು ಕೂಡ ಕೈಕೊಟ್ಟಿದ್ದರಿಂದ ವಾಹನ ಸಂಚಾರ ಕೂಡ ಏರುಪೇರಾಗಿತ್ತು.
ಜಗತ್ತಿನ ಅತೀ ದೊಡ್ಡ ವಿದ್ಯುತ್ ಕುಸಿತ ಎಂದು ಬಣ್ಣಿಸಲಾಗಿರುವ ಈ ಘಟನೆಗೆ ಪ್ರಧಾನಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್ನಲ್ಲಿ "ಪ್ರಧಾನ ಮಂತ್ರೀಜಿ, ದೇಶದ 19 ರಾಜ್ಯಗಳಲ್ಲಿ 60 ಕೋಟಿಗೂ ಹೆಚ್ಚು ಜನ ಕತ್ತಲಲ್ಲಿ ಮುಳುಗಿದ್ದಾರೆ. ಇಲ್ಲಿಯೂ ಕೂಡ ನೀವು ಮೈತ್ರಿ ಧರ್ಮವನ್ನು ಪಾಲಿಸುತ್ತಿದ್ದೀರೋ ಹೇಗೆ?" ಎಂದು ಮೋದಿ ವ್ಯಂಗ್ಯವಾಡಿದ್ದರು.
ಅತ್ಯಂತ ಆರ್ಥಿಕ ನಿರ್ವಹಣೆಯಿಂದ ಯುಪಿಎ ಸರಕಾರ ಬಡಜನರ ಜೇಬನ್ನು ಖಾಲಿಗೊಳಿಸಿದೆ, ಹಣದುಬ್ಬರದಿಂದ ಬಡವರ ಅನ್ನವನ್ನು ಕಸಿದುಕೊಂಡಿದೆ, ಈಗ ಜನರನ್ನು ಕತ್ತಲ ಕೂಪಕ್ಕೆ ತಳ್ಳಿದೆ ಎಂದು ಮೋದಿ ಅವರು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications