Get Updates
Get notified of breaking news, exclusive insights, and must-see stories!

ಕಂಪ್ಲಿ ಬಾಬು: 'ಸ್ವಾಭಿಮಾನಿ' ರಾಮುಲುಗೂ ಮುಳುಗುನೀರು

bailgate-kampli-suresh-babu-names-sriramulu-before-acb
ಹೈದರಾಬಾದ್, ಆ.1: ಜಾಮೀನಿಗಾಗಿ ಜಡ್ಜುಗಳಿಗೆ ಲಂಚ ತಿನ್ನಿಸಿದ ಪ್ರಕರಣ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ. ಬೇಲ್‌ ಡೀಲ್‌ ನಡೆದಿದ್ದು ಹತ್ತಲ್ಲ 20 ಕೋಟಿ ರೂಪಾಯಿಗೆ ಎಂದು ಬೇಲ್‌ ಡೀಲ್‌ ಪ್ರಕರಣದಲ್ಲಿ ಸೋಮವಾರ ಸಂಜೆ ಬಂಧನಕ್ಕೊಳಗಾದ ಕರ್ನಾಟಕದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿಎಚ್ ಸುರೇಶ್‌ ಬಾಬು ಹೇಳಿದ್ದಾರೆ.

ಜತೆಗೆ, ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಧಾನ ಆರೋಪಿ ಜನಾರ್ದನ ರೆಡ್ಡಿಗೆ ಜೈಲಿನಿಂದ ಮುಕ್ತಿ ದೊರಕಿಸಲು ನ್ಯಾಯಾಧೀಶರಿಗೇ ಲಂಚ ನೀಡಿರುವ ಕೇಸಿನಲ್ಲಿ ತನ್ನ ಮಾವ ಬಿ. ಶ್ರೀರಾಮುಲು ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಇದರಿಂದ ಕರ್ನಾಟಕದ ಉದ್ದಗಲಕ್ಕೂ ಪಾದಯಾತ್ರೆ ಮಾಡುತ್ತಿರುವ 'ಸ್ವಾಭಿಮಾನಿ' ಶ್ರೀರಾಮುಲುಗೆ ಸಂಕಷ್ಟದ ದಿನಗಳು ಎದುರಾಗಿವೆ ಎನ್ನಲಾಗಿದೆ. ಈ ಮಧ್ಯೆ, ಕಂಪ್ಲಿ ಬಾಬು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಶ್ರೀರಾಮುಲು ಎಲ್ಲ ಕಾನೂನೇ ನೋಡಿಕೊಳ್ಳುತ್ತದೆ ಎಂದು (ಚಿಕ್ಕಮಗಳೂರಿನಲ್ಲಿ) ಕೈಮುಗಿದಿದ್ದಾರೆ.

ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳದ (ACB) ಎದುರು ನಿನ್ನೆ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಕಂಪ್ಲಿ ಬಾಬು 'ಜನಾರ್ದನ ರೆಡ್ಡಿ ಜಾಮೀನಿಗಾಗಿ ಲಂಚ ನೀಡಿದ್ದು ನಿಜ. ಇದರಲ್ಲಿ ತನ್ನ ಮಾವ ರಾಮುಲು ಅವರ ಪಾತ್ರವೂ ಇದೆ' ಎಂದು ತಿಳಿಸಿದ್ದಾರೆ.

ಆದರೆ ಇದೇ ಆರೋಪಿ ACB ಕೋರ್ಟಿನಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದು, ತಾನು ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ ಎಂದು ಕೋರ್ಟಿನಲ್ಲಿ ಹೇಳಿದ್ದಾರೆ. ಇದರಿಂದಾಗಿ ACB ನ್ಯಾಯಾಧೀಶ ಮಂಜುನಾಥ್ ಅವರು ಆರೋಪಿಗೆ ಜಾಮೀನು ನೀಡುವ ಗೋಜಿಗೆ ಹೋಗದೆ, ಆಗಸ್ಟ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

'ಡೀಲ್‌ ಮಾಡುವ ಮುನ್ನ ನಾನು ಆಗ ಹೈದರಾಬಾದ್‌ನಲ್ಲಿರುವ ಚಂಚಲಗುಡ ಜೈಲಿನಲ್ಲಿದ್ದ ಜನಾರ್ದನ ರೆಡ್ಡಿ ಅವರನ್ನೂ ಭೇಟಿ ಮಾಡಿದ್ದೆ. ನನ್ನ ಸೋದರಮಾವ ಬಿ. ಶ್ರೀರಾಮುಲು ಅವರ ಜತೆಗೂ ಚರ್ಚಿಸಿದ್ದೆ. ಡೀಲ್‌ನಲ್ಲಿ ಇನ್ನೊಬ್ಬ ಮಧ್ಯವರ್ತಿಯಾಗಿದ್ದ ರೆಡ್ಡಿ ಆಪ್ತ ರಿಯಲ್‌ ಎಸ್ಟೇಟ್‌ ಉದ್ಯಮಿ ದಶರಥರಾಮಿ ರೆಡ್ಡಿ ಅವರೂ ನನಗೆ ಪರಿಚಿತರಾಗಿದ್ದರು. ರೌಡಿ ಯಾದಗಿರಿ ರಾವ್‌ ಮೂಲಕ ಪಟ್ಟಾಭಿ ಪುತ್ರನ ಸಂಪರ್ಕ ಸಾಧಿಸಿ ಈ ಕಾರ್ಯ ನಡೆಸಲಾಯಿತು' ಎಂದು ಸುರೇಶ್‌ ಬಾಬು ತಿಳಿಸಿದ್ದಾರೆ.

ಈ ಮಧ್ಯೆ, ಚೆರ್ಲಪಲ್ಲಿಯಲ್ಲಿರುವ ACB ಜೈಲು ತನಗೆ ಸರಿಬರುವುದಿಲ್ಲ. ಚಂಚಲಗೂಡ ಜೈಲು ತನ್ನಂತಹ VIPಗಳಿಗೆ ಹೇಳಿ ಮಾಡಿಸಿದಂತಿದೆ. ಅಲ್ಲೆ ಎಲ್ಲ VIPಗಳು ಇದ್ದಾರೆ. ಆದ್ದರಿಂದ ತನ್ನನ್ನೂ ಚಂಚಲಗೂಡ ಜೈಲಿಗೇ ಕಳಿಸಿ ಎಂದು ಕಂಪ್ಲಿ ಬಾಬು ಜಡ್ಜಿಗೆ ಅರಿಕೆ ಮಾಡಿಕೊಂಡಿದ್ದಾರೆ. ಆದರೆ ACB ಜಡ್ಜು ಅದಕ್ಕೆ ತಥಾಸ್ತು ಅಂದಿಲ್ಲ. 'ಕೇಸಿನಲ್ಲಿ ಎಲ್ಲರೂ ಅಲ್ಲೇ ಇದ್ದಾರೆ. ನೀವೂ ಅಲ್ಲಿಗೆ ಹೊರಡಿ' ಎಂದಿದ್ದಾರೆ.

ಕಂಪ್ಲಿ ಬಾಬು ಕೊಟ್ಟಿರುವ ಲಂಚದ ಸ್ಫೋಟಕ ವಿವರ:
ಒಟ್ಟು ಜಾಮೀನು ಲಂಚ 20 ಕೋಟಿ ರೂ.
ಜಡ್ಜ್ ಪಟ್ಟಾಭಿ, ಚಲಪತಿಗೆ ತಲಾ 5 ಕೋಟಿ
ಮಧ್ಯವರ್ತಿ ರೌಡಿಶೀಟರ್‌ ಯಾದಗಿರಿರಾವ್‌ಗೆ 5 ಕೋಟಿ
ಆಂಧ್ರ ಹೈಕೋರ್ಟ್‌ನಲ್ಲಿ ಜಾಮೀನು ವ್ಯವಹಾರಕ್ಕಾಗಿ 5 ಕೋಟಿ

ಕಂಪ್ಲಿ ಬಾಬು ವಿರುದ್ಧ ದಾಖಲಾಗಿರುವ ಪ್ರಕರಣಗಳು: ಐಪಿಸಿ ಸೆಕ್ಷನ್ 120ಬಿ, 34, 109 ಮತ್ತು 219
ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 8, 9 ಮತ್ತು 13(2) ಅಡಿ 13 (1) (ಡಿ)

ವಿಧಾನಸಭೆಯಲ್ಲಿ ಸ್ಪೀಕರ್‌ ಬೋಪಯ್ಯ ಪ್ರಕಟ: ಬೇಲ್‌ಗಾಗಿ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಸುರೇಶ್‌ ಬಾಬು ಬಂಧನವಾಗಿರುವುದನ್ನು ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಸ್ಪೀಕರ್‌ ಕೆಜಿ ಬೋಪಯ್ಯ ಪ್ರಕಟಿಸಿದರು. ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ತಡೆ ಅಧೀಕ್ಷಕರು ಸುರೇಶ್‌ ಬಾಬು ಅವರನ್ನು ಹೈದರಾಬಾದ್‌ನಲ್ಲಿ ಇಂದು ಮಧ್ಯಾಹ್ನ 12.30 ಕ್ಕೆ ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಬಂಧನದ ವೇಳೆ ಸಂಸದೆ ಶಾಂತ ಕಿರಿಕಿರಿ: ಮೊನ್ನೆ ಸೋಮವಾರ ಬಳ್ಳಾರಿ ಸಂಸದೆ ಜೆ. ಶಾಂತಾ ಮತ್ತು ರಾಯಚೂರ ಸಂಸದ ಸಣ್ಣ ಫ‌ಕೀರಪ್ಪ ಅವರ ಮಧ್ಯೆ ಹೋಟೆಲಿನಲ್ಲಿದ್ದ ಕಂಪ್ಲಿ ಬಾಬು ಅವರನ್ನು ಬಂಧಿಸಲು ACB ಪೊಲೀಸರು ಹೋದಾಗ ಸಂಸದೆ ಶಾಂತಾ ತೀವ್ರ ಪ್ರತಿರೋಧವೊಡ್ಡಿದ್ದಾರೆ. ಬಾಬು ಅವರನ್ನು ಬಂಧಿಸಬಾರದು. ಬೇಕಾದರೆ ನಮ್ಮ ಸಮಕ್ಷಮದಲ್ಲೇ ವಿಚಾರಣೆ ನಡೆಸಿ ಎಂದು ಸಂಸದೆ ಶಾಂತಾ ಪಟ್ಟುಹಿಡಿದಿದ್ದಾರೆ. ಇದರಿಂದ ACB ಪೊಲೀಸರು ಮುಜುಗುರಕ್ಕೊಳಗಾದರು. ಕೊನೆಗೆ 'ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಿ' ಎಂದು ನಕಿಮ್ಮನ್ನೂ ಬಂಧಿಸಬೇಕಾಗುತ್ತದೆ ಎಂದು ಕಟ್ಟೆಚ್ಚರ ನೀಡಿದಾಗ ಸಂಸದೆ ಶಾಂತಾ ಶಾಂತರಾದರು ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+