ನರ್ಸ್ ಅತ್ಯಾಚಾರವೆಸಗಿದ ಆಯುರ್ವೇದ ವೈದ್ಯರು
ನಗರದಲ್ಲಿರುವ ಪ್ರಸಿದ್ಧ ಆಯುರ್ವೇದ ಆಸ್ಪತ್ರೆಯಲ್ಲಿ ನರ್ಸ್ ತರಬೇತಿ ಕೊಡಿಸುವುದಾಗಿ ಆಮಿಷವೊಡ್ಡಿದ ಆರೋಪಿಗಳು 19 ವರ್ಷ ವಿದ್ಯಾರ್ಥಿನಿಯನ್ನು ಚೆನ್ನೈಗೆ ಕರೆತಂದಿದ್ದರು. ತಿರುಚ್ಚಿಯಲ್ಲಿರುವ ಕೇರಳ ಆಯುರ್ವೇದ ಆಸ್ಪತ್ರೆಯ ಪ್ರಧಾನ ವೈದ್ಯ 42 ವರ್ಷದ ಆಜಿಲ್ ಕುಮಾರ್ ಕೇರಳದ ತೊಡುಪುಳಾ ನಿವಾಸಿಯಾದ ಸದರಿ ವಿದ್ಯಾರ್ಥಿನಿಗೆ ತರಬೇತಿ ಕೊಡಿಸುವುದಾಗಿ ಹೇಳಿ ಜುಲೈ 8ರಂದು ಚೆನ್ನೈಗೆ ಕರೆತಂದಿದ್ದ.
ತಿರುಚ್ಚಿಯ ಕೇರಳ ಆಯುರ್ವೇದ ಆಸ್ಪತ್ರೆಯ ಶಾಖೆಯೊಂದು ಚೆನ್ನೈನಲ್ಲಿದ್ದು, ಅಲ್ಲಿನ ವೈದ್ಯ ಶ್ರೀಜಿತ್ (35) ಅಜಿಲ್ ಕುಮಾರ್ ಸೂಚನೆಯಂತೆ ಸದರಿ ವಿದ್ಯಾರ್ಥಿನಿಯನ್ನು ರೈಲ್ವೆ ನಿಲ್ದಾಣದಿಂದ ಅಣ್ಣಾ ನಗರದ ಅಪಾರ್ಟ್ ಮೆಂಟಿಗೆ ಕರೆತಂದಿದ್ದ.
ಎರಡು ಮಲಗು ಕೊಠಡಿಗಳ ಈ ಅಪಾರ್ಟ್ ಮೆಂಟ್ ಮನೆಯಲ್ಲಿ ಇಬ್ಬರೂ ವೈದ್ಯರು ಒಂದು ಕೊಠಡಿಯಲ್ಲಿದ್ದುಕೊಂಡು ಮತ್ತೊಂದನ್ನು ಸದರಿ ವಿದ್ಯಾರ್ಥಿನಿಗೆ ನೀಡಿದ್ದರು. 'ನಾನು ಸ್ನಾನ ಮಾಡಲೆಂದು ಬಾತ್ ರೂಮಿಗೆ ತೆರಳುವಾಗ ನನ್ನ ಕೊಠಡಿಯನ್ನು ಲಾಕ್ ಮಾಡಿಕೊಂಡು ಹೋಗಿದ್ದೆ. ಆದರೆ ವಾಪಸು ಬರುವಷ್ಟರಲ್ಲಿ ಆಜಿಲ್ ಕುಮಾರ್ ರೂಮಿನಲ್ಲಿ ಠಳಾಯಿಸಿದ್ದ.
ತಕ್ಷಣ ನನ್ನನ್ನು ಬೆಡ್ ಮೇಲಕ್ಕೆ ಎಳೆದುಕೊಂಡ. ನಂತರ ಶ್ರೀಜಿತ್ ಸಹ ಬಂದ. ಆಮೇಲೆ ಇಬ್ರೂ ನನ್ನ ಮೇಲೆ ಅತ್ಯಾಚಾರ ಮಾಡಿದರು' ಎಂದು ಬಾಧಿತ ವಿದ್ಯಾರ್ಥಿನಿ ಪೊಲೀಸರ ಮುಂದೆ ಹೇಳಿದ್ದಾಳೆ. ನಂತರ ಅತ್ಯಾಚಾರದ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಆದರೆ ಸ್ನೇಹಿತರೊಬ್ಬರ ಸಹಾಯದಿಂದ ತಿರುಮಂಗಳಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಪೊಲೀಸರು ದೂರನ್ನು ಆಧರಿಸಿ, ತಕ್ಷಣ ಕ್ರಮ ಕೈಗೊಳ್ಳಲಿಲ್ಲ. ಈ ಮಧ್ಯೆ. ಆರೋಪಿಗಳಿಬ್ಬರೂ ಮದ್ರಾಸ್ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆಗ ಎಚ್ಚೆತ್ತ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 506-2 (ಅಪರಾಧ ಕೃತ್ಯ) ಪ್ರಕರಣಗಳನ್ನು ದಾಖಲಿಸಿಕೊಂಡು ನಿನ್ನೆ ಸದರಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದರು.