ಉ-ಕ ಹೆಮ್ಮೆಯ ಪುತ್ರನಿಗೆ ಗುರುವಾರ ಪಟ್ಟಾಭಿಷೇಕ

ಇಂದು 11 ಗಂಟೆಗೆ ಸರಿಯಾಗಿ ಬಿಜೆಪಿಯ ಅಷ್ಟೂ ಶಾಸಕರು ಕಡ್ಡಾಯವಾಗಿ ರಾಜಭನವದ ಎದುರಿಗಿರುವ ಹೋಟೆಲ್ ಕ್ಯಾಪಿಟಲ್ ನಲ್ಲಿ ಸಭೆ ಸೇರಿ, ತಮ್ಮ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಇದಕ್ಕೆ ಪಕ್ಷದ ಹಿರಿಯ ವರಿಷ್ಠರಾದ ಧರ್ಮೇಂದ್ರ ಪ್ರಧಾನ್, ಅರುಣ್ ಜೇಟ್ಲಿ ಹಾಗೂ ರಾಜನಾಥ ಸಿಂಗ್ ಸಾಕ್ಷೀಭೂತರಾಗಲಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಇನ್ನು 'ಕಾವೇರಿ'ಯೇ ಅಧಿಕೃತ ನಿವಾಸ. ಹಾಗಾಗಿ ಈಗಾಗಲೇ ಅವರ ಅಪಾರ ಬೆಂಬಲಿಗರು ಸಂಭ್ರಮದಲ್ಲಿ ಮುಳುಗಿದ್ದಾರೆ. 'ಕಾವೇರಿ' ಹಬ್ಬದ ವಾತಾವರಣ ಮೂಡಿದೆ. (ಚಿತ್ರದಲ್ಲಿರುವ ಜಗದೀಶ್ ಶೆಟ್ಟರ್ ಹಾಗೂ ಅವರ ಪತ್ನಿ ಶ್ರೀಮತಿ ಶಿಲ್ಪಾ).
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಶೆಟ್ಟರ್ ಎಂದು ಭಾನುವಾರ ದೆಹಲಿಯಲ್ಲಿ ಘೋಷಣೆ ಮಾಡಿದ ನಂತರ ಶೆಟ್ಟರ್ ನಿವಾಸದಲ್ಲಿ ಬೆಂಬಲಿಗರ ಸಡಗರ ಮುಗಿಲು ಮುಟ್ಟಿದೆ. ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶೆಟ್ಟರ್ ಅವರನ್ನು ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಹಲವು ಸಚಿವರು, ಅನೇಕ ಶಾಸಕರು, ನಗರ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಶೆಟ್ಟರ್ ಅವರನ್ನು ಕಾವೇರಿಯಲ್ಲಿಭೇಟಿಯಾಗಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದ್ದಾರೆ.
ಅರಮನೆ ಆವರಣದಲ್ಲಿ ವ್ಯವಸ್ಥೆ: ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಸುಮಾರು 1 ಲಕ್ಷ ಮಂದಿ ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಸ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಶೆಟ್ಟರ ಅವರ ಸ್ವಂತ ಜಿಲ್ಲೆಯಾದ ಧಾರವಾಡದಿಂದಲೇ ಸುಮಾರು 15 ಸಾವಿರ ಜನ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅವರೆಲ್ಲರಿಗೆ ನಗರದ ಅರಮನೆ ಮೈದಾನದ ಆವರಣದಲ್ಲಿರುವ ಗಾಯತ್ರಿ ವಿಹಾರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಂದಲೇ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಪರದೆಗಳ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ. ಬೆಂಗಳೂರಿಗೆ ಬರಲಿರುವ ಬೆಂಬಲಿಗರಿಗೆ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾರಂಭದ ಬಳಿಕ ವಾಪಸ್ ತೆರಳುವಾಗ ರಾತ್ರಿ ಊಟಕ್ಕೆ ಆಹಾರದ ಪೊಟ್ಟಣ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಜಭವನದಲ್ಲಿ ಹೆಚ್ಚಿನ ಜನರಿಗೆ ಸ್ಥಳಾವಕಾಶ ಇಲ್ಲದಿರುವುದು ಹಾಗೂ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅರಮನೆ ಆವರಣದಲ್ಲಿಯೇ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಶೆಟ್ಟರ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಗಾಯತ್ರಿ ವಿಹಾರಕ್ಕೆ ತೆರಳಿ ಜನರನ್ನು ಭೇಟಿಯಾಗಲಿದ್ದಾರೆ.
ಇನ್ನು, ಬೆಂಗಳೂರಿನ ಜನ ಇಂದು ಮತ್ತು ನಾಳೆ ಟ್ರಾಫಿಕ್ ಜಾಮ್ ಗೆ ಸಿದ್ಧರಾಗಿ. ಒಟ್ಟಾರೆ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅವಿಸ್ಮರಣೀಯಗೊಳಿಸಲು ಶೆಟ್ಟರ್ ಅವರ ಅನುಯಾಯಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.












Click it and Unblock the Notifications