ಬಿಜೆಪಿ ಬಿಕ್ಕಟ್ಟು: ಆಖಾಡಕ್ಕೆ ಇಳಿದ ಆದಿಚುಂಚನಗಿರಿ ಸ್ವಾಮಿ
ಬಿಜೆಪಿಯ ಎಲ್ಲಾ ಒಕ್ಕಲಿಗ ಸಮುದಾಯದ ಶಾಸಕರುಗಳಿಗೆ ಖುದ್ದಾಗಿ ಫೋನ್ ಮಾಡಿ ಸದಾನಂದ ಗೌಡರ ಪರವಾಗಿ ಬ್ಯಾಟಿಂಗ್ ಮಾಡಿ ಎಂದು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ನಮ್ಮ ಸಮುದಾಯಕ್ಕೆ ಧಕ್ಕೆಯಾಗುತ್ತಿದೆ. ನಾವು ಈ ಸಮಯದಲ್ಲಿ ಒಗ್ಗಟ್ಟಿನಿಂದ ಇರಬೇಕಾಗಿದೆ. ಯಾವುದೇ ಕಾರಣಕ್ಕೂ ಸದಾನಂದ ಗೌಡ ಅವರನ್ನು ಕೆಳಕ್ಕೆ ಇಳಿಸದಂತೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಎಂದು ಶ್ರೀಗಳು ಆದೇಶ ನೀಡಿದ್ದಾರೆಂದು ವರದಿಯಾಗಿದೆ.
ಬೆಂಗಳೂರಿನ ವಿವಿಪುರಂ ನಲ್ಲಿರುವ ಒಕ್ಕಲಿಗ ಸಮುದಾಯದ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಶ್ರೀಗಳ ಆದೇಶದ ಬಗ್ಗೆ ರಾಜ್ಯ ಒಕ್ಕಲಿಗ ಸಂಘದ ಅದ್ಯಕ್ಷ ಕೆಂಚಪ್ಪ ಗೌಡ ಕೂಡಾ ಸ್ಪಷ್ಟ ಪಡಿಸಿದ್ದಾರೆ.
ಯಾವುದೇ ತಪ್ಪು ಮಾಡದ ಗೌಡರಿಗೆ ಯಾಕೆ ಈ ಶಿಕ್ಷೆ? ನಮ್ಮ ಸಮುದಾಯಕ್ಕೆ ಯಾಕೆ ಈ ರೀತಿ ಮಾಡುತ್ತಿದ್ದಾರೆ. ಶೋಷಣೆಗೆ ಒಳಗಾದವರನ್ನು ನಮ್ಮ ಸಮುದಾಯ ದಶಕಗಳಿಂದ ನೆರವು ನೀಡುತ್ತಿದೆ. ಗೃಹ ಸಚಿವ ಅಶೋಕ್ ಅವರಿಗೆ ಕೂಡಾ ಸದಾನಂದ ಗೌಡರ ಪರವಾಗಿ ನಿಲ್ಲಲು ಕೇಳಿಕೊಳ್ಳಲಾಗಿದೆ ಎಂದು ಕೆಂಚಪ್ಪ ಗೌಡ ಹೇಳಿಕೆ ನೀಡಿದ್ದಾರೆ.
ಜನಾಂಗದ ಪರವಾಗಿ ನಿಲ್ಲಬೇಕೆಂದು ಶೋಭಾ ಕರಂದ್ಲಾಜೆ ಮತ್ತು ಸುರೇಶ ಗೌಡ ಅವರಿಗೂ ಹೇಳಲಾಗಿದೆ. ಸದಾನಂದ ಗೌಡ ಈ ರಾಜ್ಯದ ಶಾಶ್ವತ ಮುಖ್ಯಮಂತ್ರಿ ಆಗ ಬೇಕೆನ್ನುವುದು ನಮ್ಮ ಬೇಡಿಕೆ. ಈ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶ್ರೀ. ನಂಜಾವಧೂತ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ನಾಳೆ ಮಂಡ್ಯ ಬಂದ್: ಸಿಎಂ ಸದಾನಂದ ಗೌಡ ಪದಚ್ಯುತಿ ವಿರೋಧಿಸಿ ನಾಳೆ (ಜು 11) ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟ ಬಂದ್ ಗೆ ಕರೆ ನೀಡಿದೆ.