ದೇವೇಗೌಡ್ರಿಗೆ ಸದಾ ಬಗ್ಗೆ ಕನಿಕರ, ಬಿಜೆಪಿ ಮೇಲೆ ಸಿಟ್ಟು

ಪದ್ಮನಾಭನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ(ಜು.9) ಮಾತನಾಡಿದ ದೇವೇಗೌಡರು, 'ನಾನು ಸದಾನಂದಗೌಡ ಮಾತನಾಡಿಯೇ ಏಳು ತಿಂಗಳಾಗಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಮಾತಿಗೆ ತಕ್ಕಂತೆ ಸದಾನಂದ ಗೌಡ ಸ್ಪಂದಿಸುತ್ತಿದ್ದಾರೆ ಎಂದು ಆರೋಪಿಸುವುದು ಎಷ್ಟರಮಟ್ಟಿಗೆ ಸರಿ. ಬಿಜೆಪಿಯವರು ಪದೇ ಪದೇ ನಮ್ಮ ಕುಟುಂಬದ ಹೆಸರನ್ನು ಬಳಸುವುದೇಕೆ ಎಂದು ದೇವೇಗೌಡರು ಪ್ರಶ್ನಿಸಿದರು.
ಸದಾನಂದ ಗೌಡರ ಪದಚ್ಯುತಿಗೆ ವ್ಯವಸ್ಥಿತ ಕುತಂತ್ರ ನಡೆಸಲಾಗಿದೆ. ಜಾತಿ ರಾಜಕೀಯದ ಅನಿಷ್ಟಕ್ಕೆ ಬಲಿಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ನ ಧರ್ಮಸಿಂಗ್ ಅವರನ್ನು ಅಧಿಕಾರದಿಂದ ಪತನಗೊಳಿಸಿದ ರೀತಿಯಲ್ಲೇ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಸಹ ಬಲಿಪಶು ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಒತ್ತಡಕ್ಕೆ ಬಿಜೆಪಿಯ ಹಿರಿಯ ಮುತ್ಸದ್ಧಿ ಎಲ್ ಕೆ ಅಡ್ವಾಣಿ ಅವರು ಮಣಿದಿದ್ದಾರೆ. ನಾನು ಎಂದಿಗೂ ಜಾತಿವಾದಿಯಲ್ಲ. ಲಿಂಗಾಯಿತ, ಬ್ರಾಹ್ಮಣರ ವಿರೋಧಿ ಎಂದು ಆರೋಪಿಸಲಾಗಿದೆ ಇದು ಶುದ್ಧ ಸುಳ್ಳು ಎಂದರು.
ನಾವು ಮಾತಿಗೆ ತಪ್ಪಿಲ್ಲ : ಅಂದು ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದ ಮೊದಲ ಅಧಿಕಾರಾವಧಿ ಪೂರೈಸಿ ತಮ್ಮ ಪುತ್ರ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಕೊಡಲಿಲ್ಲ ಎಂಬ ದೂರು ಕೇಳಿಬಂತು. ಆದರೆ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸಿದರೂ ಒಡಂಬಡಿಕೆಯ ವಿಷಯದಲ್ಲಿ ಬಿಜೆಪಿಯವರು ಮಾತಿಗೆ ತಪ್ಪಿ ಅವರಾಗಿಯೇ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಂಡರು. ಬಿಜೆಪಿ ಒಳಜಗಳದಿಂದ ಆದ ತಪ್ಪಿಗೆ ನಮ್ಮನ್ನು ದೂಷಿಸಲಾಗಿದೆ ಎಂದು ದೇವೇಗೌಡರು ತಮ್ಮ ಪುತ್ರ ವಚನಭ್ರಷ್ಟ ಅಲ್ಲ ಎಂದು ಸ್ಪಷ್ಟಪಡಿಸಿದರು.
ಆತ್ಮ ಚರಿತ್ರೆ ಬಿಡುಗಡೆ: ಇದುವರೆಗೂ ತಾವು ರಾಜಕೀಯವಾಗಿ ಎದುರಿಸಿರುವ ಏಳು ಬೀಳುಗಳನ್ನು ತಾವು ಬರೆಯುತ್ತಿರುವ ಆತ್ಮಚರಿತ್ರೆ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸುತ್ತೇನೆ. ನನ್ನ ರಾಜಕೀಯ ಜೀವನದ ಆರಂಭದಿಂದಲೂ ನನ್ನ ವಿರುದ್ಧ ಪಿತೂರಿ ನಡೆಯುತ್ತಲೇ ಬಂದಿದೆ. ಮುಂದಿನ ಪೀಳಿಗೆಗೆ ಆತ್ಮಚರಿತ್ರೆಯನ್ನು ಅರ್ಪಿಸುತ್ತೇನೆ ಎಂದು ಗೌಡರು ಹೇಳಿದರು. ಪದೇ ಪದೇ ತಮ್ಮ ವಿರೋಧಿ ಪಾಳಯದವರು ಮಾಡುತ್ತಿರುವ ಆರೋಪಕ್ಕೆ ಇದು ತಕ್ಕ ಉತ್ತರ ನೀಡಲಿದೆ.
ಆತ್ಮ ಚರಿತ್ರೆಯಲ್ಲಿ ನನ್ನ ಹಾಗೂ ಕುಟುಂಬದವರು ಮಾಡಿದ ತಪ್ಪು ಒಪ್ಪುಗಳ ಲೆಕ್ಕಗಳು ಇರುತ್ತದೆ. ಜೊತೆಗೆ ನನ್ನನ್ನು ದೂಷಿಸಿದವರ ಭಾವಚಿತ್ರ ಸಮೇತ ವಿವರಗಳಿರುತ್ತದೆ ಎಂದು ದೇವೇಗೌಡರು ಹೇಳಿದರು.
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ನಾನು ಅಂಜುವ ಪ್ರಶ್ನೆಯೇ ಇಲ್ಲ. ನನ್ನ ಹೋರಾಟ ಮುಂದುವರೆಯುತ್ತದೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಮಾನನಷ್ಟ ಮೊಕ್ಕದ್ದಮೆ ನೋಟಿಸ್ ಬಂದರೆ ತಕ್ಕ ಉತ್ತರ ನೀಡುತ್ತೇನೆ. ನೈಸ್ ಕಂಪನಿ ಯೋಜನೆ ಕಾಮಗಾರಿ ವ್ಯಾಪ್ತಿಯಲ್ಲಿ ನಮ್ಮ ಕುಟುಂಬದ 3,500 ಎಕರೆ ಭೂಮಿ ಇದೆ ಎಂಬುದು ಶುದ್ಧ ಸುಳ್ಳು. ಈ ಬಗ್ಗೆ ವಿಧಾನಸಭೆ ಮುಂದೆ ಪ್ರಮಾಣ ಮಾಡಲು ಸಿದ್ಧ ಎಂದು ದೇವೇಗೌಡರು ಸವಾಲು ಹಾಕಿದ್ದಾರೆ.
ನಾನು ರಾಜ್ಯದ ಜನರ ಜೀವನ ಹಾಳು ಮಾಡುವುದಿಲ್ಲ. ಇದುವರೆಗೂ ತಾವು ರಾಜಕೀಯವಾಗಿ ಎದುರಿಸಿರುವ ಏಳು ಬೀಳುಗಳನ್ನು ತಾವು ಬರೆಯುತ್ತಿರುವ ಆತ್ಮಚರಿತ್ರೆ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸುತ್ತೇನೆ. ನನ್ನ ಮಕ್ಕಳ ತಪ್ಪನ್ನೂ ಸಹ ಉಲ್ಲೇಖಿಸುತ್ತೇನೆ.












Click it and Unblock the Notifications