ಟೆಕ್ಕಿ ಶವ ತರಲು ಪೋಷಕರು ಕೊನೆಗೂ ಸಹಿ ಹಾಕಿದರು
ಇದ್ದ ಒಬ್ಬೇ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಕಂಗಾಲಾಗಿರುವ ಟೆಕ್ಕಿ ಪವನ್ ಕುಮಾರ್ ಅವರು ತಮ್ಮ ಮಗನ ಸಾವಿನ ಬಗ್ಗೆ ಅನೇಕ ಅನುಮಾನಗಳನ್ನು ವ್ಯಕ್ತಪಡಿಸುತ್ತಾ, ಅದೆಲ್ಲ ಇತ್ಯರ್ಥವಾಗುವವರೆಗೂ ಮಗನ ಶವ ವಾಪಸ್ ತರುವುದು ಬೇಡ ಎಂದು ಹಠಹಿಡಿದಿದ್ದರು.
ಆದರೆ ಕೊನೆಗೂ ಅವರು ಕಟುವಾಸ್ತವ ಒಪ್ಪಿಕೊಂಡು, ಮನಸು ಬದಲಿಸಿದ್ದಾರೆ. ಆದರೆ ಮಗನ ಶವವನ್ನು ತಾಯ್ನಾಡಿಗೆ ತಂದ ಬಳಿಕವೂ ಸಂಬಂಧಟ್ಟ ಪವನ್ ಗೆ ಸಂಬಂಧಿಸಿದ ವಸ್ತುಗಳು ಮತ್ತು ದಾಖಲೆಗಳನ್ನು ಕುಟುಂಬಕ್ಕೆ ಹಸ್ತಾಂತರಿಸದಿದ್ದರೆ ಹೆಬ್ಬಾಳದಲ್ಲಿರುವ ಕಂಪನಿಯ ಕಚೇರಿಯ ಎದುರು ಮಗನ ಶವವಿಟ್ಟು ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಶವದ ಜತೆಗೆ ಆತನ ಮರಣ ಪತ್ರವನ್ನೂ ನಮಗೆ ನೀಡಬೇಕು. ಅಪರಾಧ ಪ್ರಕರಣದಲ್ಲಿ (ಪ್ರೇಯಸಿಯ ಹತ್ಯೆ ಪ್ರಕರಣ) ಪವನ್ ಹೆಸರು ಥಳುಕು ಹಾಕಿಕೊಂಡಿದೆ. ಅದರಿಂದ ಅವನ ಹೆಸರಿಗೆ ಮುಕ್ತಿ ದೊರಕಿಸಬೇಕು. ಇಲ್ಲವಾದಲ್ಲಿ ಶವವನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಕಂಪನಿ ಕಚೇರಿಗೆ ತಂದು ಅಲ್ಲೇ ಧರಣಿ ನಡೆಸುತ್ತೇವೆ ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ ಹೇಳಿದ್ದಾರೆ.
ಆದರೆ ಕಂಪನಿಯು ಹೇಳುವಂತೆ ಅಮೆರಿಕದಲ್ಲಿ ಕಾನೂನಿನ ರೀತಿ ರಿವಾಜುಗಳ ಪ್ರಕಾರ ಪವನ್ ದಾಖಲೆ ಪತ್ರಗಳನ್ನು clear ಮಾಡಲು ಕನಿಷ್ಠ 8 ವಾರ ಕಾಲಾವಕಾಶ ಬೇಕಾಗುತ್ತದೆ.
ಪವನ್ ತಂದೆ ಅಂಜಯ್ಯ ಏನನ್ನುತ್ತಾರೆ?: 'ಮೊದಲು ನನ್ನ ಮಗನ ಶವವನ್ನು ಒಪ್ಪಿಸಿ. ತುರ್ತಾಗಿ ಅಂತ್ಯಕ್ರಿಯೆ ಮಾಡಬೇಕಿದೆ. ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲವೆಂದು ನನ್ನ ಮನಸ್ಸು ಹೇಳುತ್ತಿದೆ. ಹಾಗಂತ ಅಮೆರಿಕದ ಪೊಲೀಸರು ಸುಳ್ಳೇ ಪ್ರಕರಣ ದಾಖಲಿಸಿಕೊಮಡಿದ್ದಾರೆ ಎಂದು ನಾನೇನೂ ಹೇಳುತ್ತಿಲ್ಲ. ಅವರ ತನಿಖೆ ಅವರದು. ಏನೇ ನಡೆದಿರಲಿ ತನಿಖೆಯ ನಂತರ ಏನೆಲ್ಲ ಮಾಹಿತಿ ದೊರಕುತ್ತದೋ ಅದಷ್ಟನ್ನೂ ನಮ್ಮೊಂದಿಗೆ ಹಂಚಿಕೊಳ್ಳಲಿ. ಇಲ್ಲವಾದಲ್ಲಿ ನಮ್ಮ ಮಗನ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ನಂಬಿ ಜೀವನಪರ್ಯಂತ ಕತ್ತಲಲ್ಲಿ ಅನುಭವಿಸಬೇಕಾಗುತ್ತದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಬೇಡಿ' ಎಂದು ಪವನ್ ತಂದೆ ಅಂಜಯ್ಯ ಅವರು ಹೇಳಿದ್ದಾರೆ.