ಚೆನ್ನೈನಲ್ಲಿ 24/7 ಮದ್ಯಪಾನ ಪೂರೈಕೆಗೆ ಓಕೆ ಎಂದ ಜಯಾ
ಈ ಯೋಜನೆ ಫಲಕಾರಿಯಾದರೆ, ಚೆನ್ನೈ, ತಿರುಚನಾಪಲ್ಲಿ ನಂತರ ಮದುರೈ ಹಾಗೂ ಕೊಯಮತ್ತೂರಿನ ಹೋಟೆಲ್ ಗಳಿಗೂ ಈ ವ್ಯವಸ್ಥೆ ವಿಸ್ತರಿಸಲು ಚಿಂತಿಸಲಾಗಿದೆ. ಪಕ್ಕಾ ವ್ಯಾಪಾರಿ ಮನೋಭಾವದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. 24/7 ಪೂರೈಕೆಯಿಂದ ದುಪ್ಪಟ್ಟು ಹಣ ಗಳಿಸಲು ಚಿಂತಿಸಲಾಗಿದೆ.
ಅಂತಾರಾಷ್ಟ್ರೀಯ ನಾಗರೀಕ ವಿಮಾನ ನಿಲ್ದಾಣಗಳನ್ನು ಹೊಂದಿರುವ ಚೆನ್ನೈ ಹಾಗೂ ತಿರುಚುನಾಪಲ್ಲಿಯಲ್ಲಿನ ಪಂಚತಾರಾ ಹೋಟೆಲ್ ಗಳಿಗೆ ಹೆಚ್ಚುವತಿ ವ್ಯಾಪಾರದ ಸಮಯವನ್ನು ನೀಡಲಾಗಿದೆ. ಕೊಯಮತ್ತೂರು ಹಾಗೂ ಮದುರೈನ ಪಂಚತಾರಾ ಹೋಟೆಲ್ ಗಳು ದುಪ್ಪಟ್ಟು ವಿಶೇಷ ಶುಲ್ಕ ಭರಿಸಿದಲ್ಲಿ ಮಾತ್ರ 24 ಗಂಟೆಗಳ ಕಾಲ ಮದ್ಯ ಪೂರೈಕೆಗೆ ಅವಕಾಶ ನೀಡಲಾಗುತ್ತದೆ.
ಉಳಿದಂತೆ ಇತರೆ ಹೋಟೆಲ್ ಗಳು ಬೆಳಿಗ್ಗೆ 11 ರಿಂದ ರಾತ್ರಿ 12 ರ ರವರೆಗೆ ಕಾರ್ಯನಿರ್ವಹಿಸಬೇಕಾಗಿದೆ ಹಾಗೂ 12 ರ ನಂತರ ಯಾವುದೇ ವ್ಯಾಪಾರ ನಡೆಸುವಂತಿಲ್ಲ ಎಂದು ಸರ್ಕಾರ ನೀಡಿರುವ ಹೊಸ ಆದೇಶದಲ್ಲಿ ಹೇಳಲಾಗಿದೆ ಎಂದು ಅಬಕಾರಿ ಇಲಾಖೆ ಹೇಳಿದೆ.
ವಿಶೇಷ ಶುಲ್ಕದ ನೂತನ ದರಗಳನ್ನು ನಿಗದಿಪಡಿಸಲಾಗಿದ್ದು, ಅದರಂತೆ ಪಂಚತಾರಾ ಹೋಟೆಲ್ ಗಳು 16 ಲಕ್ಷ ಹಾಗೂ 4 ಸ್ಟಾರ್ ಹೋಟೆಲ್ ಗಳು 9 ಲಕ್ಷ ಹಾಗೂ 3 ಸ್ಟಾರ್ ಹೋಟೆಲ್ ಗಳು 6 ಲಕ್ಷ ರು ಪಾವತಿಸಬೇಕಾಗಿದೆ.
ಆದರೆ, Tamil Nadu State Marketing Corporation (TASMAC) ನಡೆಸುವ ಮದ್ಯದಂಗಡಿ ಮಳಿಗೆಗಳಿಗೆ ಈ ನೂತನ ನೀತಿ ಅನ್ವಯವಾಗುವುದಿಲ್ಲ. ಸರ್ಕಾರಿ ಮಳಿಗೆಗಳಿಂದ ಬರುತ್ತಿರುವ ಲಾಭದ ಜೊತೆಗೆ ಅವೇಳೆಯಲ್ಲಿ ನಗರಕ್ಕೆ ಬರುವ ವಿದೇಶಿಯರಿಗೆ ಉತ್ತಮ ಗುಣಮಟ್ಟದ 'ಪಿಂಟ್' ನೀಡಿ ಆತಿಥ್ಯ ನೀಡಲು ಹೋಟೆಲ್ ಗಳು ಸಜ್ಜಾಗಬೇಕಿದೆ. ಜೊತೆಗೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಹರಿದು ಬರಲಿದೆ.
ಬೆಂಗಳೂರಿನ ಕಥೆ: ಬೆಂಗಳೂರಿನ ಸ್ಟಾರ್ ಹೋಟೆಲುಗಳಲ್ಲಿ Open the cork till 2 AM ಚಳವಳಿ ಶುರುವಾಗಿತ್ತು. ಇದಕ್ಕೆ ಮುಖ್ಯಮಂತ್ರಿ, ಅಬಕಾರಿ ಮಂತ್ರಿ ಯಸ್ ಎಂದಿದ್ದರು. ಕಾನೂನು ಮತ್ತು ಶಿಸ್ತು ಪಾಲನೆಗೆ ಇದು ಅಡ್ಡಿಯಾಗದಿದ್ದಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಕಮಿಷನರ್ ಶಂಕರ ಬಿದರಿ ಹೇಳಿದ್ದರೂ ನಂತರ ಜಾರಿಗೊಳ್ಳಲಿಲ್ಲ.
ಪಬ್ ಸಂಸ್ಕೃತಿಯನ್ನು 11.30ರ ನಂತರವೂ ವಿಸ್ತರಿಸುವುದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸರಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ ಆಹ್ವಾನಿಸಿರಲಿಲ್ಲ. ಹೀಗಾಗಿ ಅಬಕಾರಿ ಇಲಾಖೆಯ ಸದರಿ ನಿಯಮಾವಳಿಗಳ ಪ್ರಕಾರ ಬೆಂಗಳೂರಿನ ಪಬ್, ಬಾರ್, ರೆಸ್ಟೋರೆಂಟುಗಳು ರಾತ್ರಿ 11.30ಕ್ಕೆ ತಮ್ಮ ಕಾರ್ಯಕಲಾಪಗಳನ್ನು ಮುಗಿಸಿ ಹೋಟೆಲು, ವೈನ್ ಶಾಪಿಗೆ ಬೀಗ ಜಡಿಯಬೇಕು ಎಂಬ ನಿಯಮ ಈಗಲೂ ಜಾರಿಯಲ್ಲಿದೆ.