ಡಿನೋಟಿಫಿಕೇಶನ್: ಕುಮಾರಸ್ವಾಮಿ ತನಿಖೆಗೆ ಆದೇಶ
ತನ್ಮೂಲಕ ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನೀರಿಕ್ಷಣಾ ಜಾಮೀನು ಪಡೆದು ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈಗ ಮತ್ತೂಂದು ಭೂ ಕಂಟಕ ಎದುರಾಗಿದಂತಾಗಿದೆ.
ಚಾಮರಾಜನಗರ ಜಿಲ್ಲೆ ನಿವಾಸಿ ಎಂ.ಎಸ್. ಮಹದೇವಸ್ವಾಮಿ ದಾಖಲಿಸಿದ ಖಾಸಗಿ ದೂರು ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್, ಈ ಸಂಬಂಧ ತನಿಖೆ ನಡೆಸಿ ಆಗಸ್ಟ್ 17ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಎಸ್ಪಿಗೆ ಆದೇಶ ನೀಡಿದ್ದಾರೆ.
ಪ್ರಕರಣವೇನು : ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯಲ್ಲಿ ಬನಶಂಕರಿ 5ನೇ ಹಂತದದಲ್ಲಿ ಬಡಾವಣೆ ನಿರ್ಮಾಣ ಮಾಡಲು 1997ರಲ್ಲಿ ಪ್ರಕ್ರಿಯೆ ಆರಂಭಿಸಿದ ಬಿಡಿಎ, 1999ರಲ್ಲಿ 785 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ ಜಮೀನು ಮಾಲಿಕರು ಮತ್ತು ರೈತರಿಗೆ ಸೂಕ್ತ ಪರಿಹಾರ ಸಹ ನೀಡಲಾಗಿತ್ತು. ಅದೇ ರೀತಿ ಅಲಗೆರ ಓಡೆಯರಹಳ್ಳಿ ನಿವಾಸಿಗಳಾದ ಎಂ.ಸಿ. ಪದ್ಮ ಅವರು ತಮಗೆ ಸೇರಿದ 2.24 ಎಕರೆ ಜಮೀನಿನ ದಾಖಲೆಗಳನ್ನು ಬಿಡಿಎಗೆ ಸಲ್ಲಿಸಿ ಪರಿಹಾರದ ಹಣವನ್ನು ಪಡೆದುಕೊಂಡಿರುತ್ತಾರೆ.
ಆದರೆ 2004 ಧರಂಸಿಂಗ್ ಸಿಎಂ ಆಗಿದ್ದಾಗ ಪದ್ಮಾ ಅವರು ತಮ್ಮ ಜಮೀನು ಡಿನೋಟಿಫಿಕೇಷನ್ ಮಾಡಿಸಿ ಕೊಡುವಂತೆ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುತ್ತಾರೆ. ಆ ಪ್ರಕಾರ ಕುಮಾರಸ್ವಾಮಿ ಅವರು ಈ ಪ್ರಸ್ತಾಪವನ್ನು ಧರಂಸಿಂಗ್ ಅವರ ಮುಂದಿಡುತ್ತಾರೆ. ಆದರೆ ಧರಂಸಿಂಗ್ ಡಿನೋಟಿಫಿಕೇಷನ್ ಮಾಡಲು ಒಪ್ಪುವುದಿಲ್ಲ. ಇದೇ ಸಂದರ್ಭದಲ್ಲಿ ಪದ್ಮಾ ಅವರು ಈ ಜಮೀನನ್ನು ಎ.ಬಿ ಶಾಂತಮ್ಮ ಮತ್ತಿತರರಿಗೆ 91 ಲಕ್ಷ ರೂ.ಗೆ ಮಾರಾಟ ಮಾಡುತ್ತಾರೆ.
ಇದೇ ಸಂದರ್ಭದಲ್ಲಿ 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಪದ್ಮ ಅವರು ಡಿನೋಟಿಫಿಕೇಷನ್ಗೆ ಪುನಃ ಅರ್ಜಿ ಸಲ್ಲಿಸುತ್ತಾರೆ. ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಪ್ರಕರಣವನ್ನು ಡಿನೋಟಿಫಿಕೇಷನ್ ಸಮಿತಿ ಗಮನಕ್ಕೆ ತರದೆ ಪದ್ಮಾ ಹೆಸರಲ್ಲಿ 2.24 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡುತ್ತಾರೆ. ನಂತರ ಈ ಜಮೀನನ್ನು 2010ರಲ್ಲಿ 4.15 ಕೋಟಿ ರೂ.ಗೆ ಹದಿನೈದು ಮಂದಿಗೆ ಮಾರಾಟ ಮಾಡಲಾಗುತ್ತದೆ. ಈ ಸಂಬಂಧ ಕಳೆದ ಮಾರ್ಚ್ 2ರಂದು ಎಂ.ಎಸ್. ಮಹಾದೇವ ಸ್ವಾಮಿ ಲೋಕಾಯಕ್ತಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.