ಪ್ರಣಬ್ ಮುಖರ್ಜಿ ಮತ ಬೇಟೆ:ಯಡಿಯೂರಪ್ಪ ಶಬ್ದವೇದಿ
ಈ ಸಂಬಂಧ ಅವರು ಬೆಂಗಳೂರಿಗೆ ಬಂದು ಹೋಗಿದ್ದು ಕುತೂಹಲದ ಗರಿಗೆದರಿಸಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಣಬ್ ಮುಖರ್ಜಿ ಅವರು ಮುಂದಿನ ರಾಷ್ಟ್ರಪತಿ ಆಗಬೇಕಾದರೆ ಕರ್ನಾಟಕದ ಮತಗಳು ನಿರ್ಣಾಯಕವಾಗಬಲ್ಲವು. ಇಲ್ಲಿನ ರಾಜಕೀಯ ತುಮುಲಗಳು, ಅಡ್ಡ ಮತದಾನಿಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರಣಬ್ ದಾ ತುಸು ಹೆಚ್ಚೇ ಮುತುವರ್ಜಿ ವಹಿಸಬೇಕಾಗಿದೆ. ಹಾಗಾಗಿ, ಅವರ ಕರ್ನಾಟಕ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಮತ ಯಾರಿಗೆ ಎಂಬುದನ್ನು ಇನ್ನೂ ನಿರ್ಧರಿಸದ ಪಕ್ಷಗಳೂ ನನಗೆ ಬೆಂಬಲ ನೀಡಬೇಕು ಎಂದು ಪ್ರಣಬ್ ಮುಖರ್ಜಿ ಮನವಿ ಮಾಡಿರುವುದು ಸಹಯವಾಗಿಯೇ ಇದೆ.
ಪಕ್ಷೇತರರ ಭೇಟಿ: ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಪಿಎಂ ನರೇಂದ್ರ ಸ್ವಾಮಿ, ಡಿ ಸುಧಾಕರ್, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಣವ್ ಅವರನ್ನು ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಭೇಟಿ ಮಾಡಿ ಬೆಂಬಲ ಸೂಚಿಸಿದರು. ವಿಶೇಷ ಪಕ್ಷೇತರ ಶಾಸಕ ಬಿ ಶ್ರೀರಾಮುಲು ಅವರೂ ಪ್ರಣವ್ ಅವರನ್ನು ಭೇಟಿ ಮಾಡಿ, ಬೆಂಬಲ ಸೂಚಿಸಿದರು.
ಇನ್ನು, ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಮತ ಯಾಚಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, 'ಯುಪಿಎ ಜತೆ ಗುರುತಿಸಿಕೊಂಡಿರದ ಪಕ್ಷಗಳಾದ ಸಂಯುಕ್ತ ಜನತಾದಳ (ಜೆಡಿಯು), ಶಿವಸೇನೆ, ಸಿಪಿಎಂ, ಫಾರ್ವರ್ಡ್ ಬ್ಲಾಕ್, ಜೆಡಿಎಸ್ ಸಹ ನನ್ನನ್ನೇ ಬೆಂಬಲಿಸಿವೆ' ಎಂದು ಹೇಳಿಕೊಂಡಿದ್ದಾರೆ. ಆದರೆ...
ಭಿನ್ನ'ಮತಗಳ' ಅಧಿನಾಯಕ ಯಡಿಯೂರಪ್ಪ: ಯುಪಿಎ ನಾಯಕತ್ವ ಹೊತ್ತಿರುವ ಬಿಜೆಪಿ ಪಕ್ಷದ ಮತಗಳೂ ಪ್ರಣಬ್ ದಾ ಗೆ ಅಗತ್ಯವಾಗಿದೆ. ಅದರಲ್ಲೂ ಭಿನ್ನಮತದಿಂದ ಕುದಿಯುತ್ತಿರುವ ಕರ್ನಾಟಕ ಬಿಜೆಪಿಯ ಮತಗಳು ಪ್ರಣಬ್ ದಾ ಗೆ ವರವಾಗಲಿದೆ. ಬಿಜೆಪಿಯ ಸುಮಾರು 55 ಮಂದಿ ಶಾಸಕರು-ಸಂಸದರ ಮತಗಳ ಮೇಲೂ ಪ್ರಣಬ್ ದಾ ಕಣ್ಣಿಟ್ಟಿದ್ದಾರೆ. ಹಾಗಾಗಿಯೇ ಅವರು ಕರ್ನಾಟಕ ಬಿಜೆಪಿಯ ಭಿನ್ನ'ಮತ'ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಆದರೆ...
ಬೆಂಗಳೂರು ಮತ ಬೇಟೆ ವೇಳೆ ಅವರು ಅಪ್ಪಿತಪ್ಪಿಯೂ ಬಹಿರಂಗವಾಗಿ ಆ ಪ್ರಯತ್ನಕ್ಕೆ ಕೈಹಾಕಲಿಲ್ಲ. ಆ ನಡೆಯೇ ಕುತೂಹಲ ಕೆರಳಿರಿಸಿರುವುದು. 55 ಮಂದಿ ಶಾಸಕರು-ಸಂಸದರ ಮತಗಳ ಅಧಿನಾಯಕ ಬೇರೆ ಯಾರೂ ಅಲ್ಲ. ಇಡೀ ಜಗತ್ತಿಗೆ ಗೊತ್ತಿರುವಂತೆ ಸನ್ಮಾನ್ಯ ಯಡಿಯೂರಪ್ಪನವರು. ಸಿಬಿಐ ಭೀತಿ ವಾದದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿನಾಯಕಿಯನ್ನು ಒಪ್ಪಿ, ಅಪ್ಪಿರುವ ಯಡಿಯೂರಪ್ಪ, ರಾಜ್ಯ ಬಿಜೆಪಿಯಲ್ಲಿ ಏನೇ ಆಗಲಿ ತಮ್ಮ ಮತ ನಿಷ್ಠೆ ಪ್ರಣಬ್ ದಾ ಅವರಿಗೇ ಎಂದು ಸೋನಿಯಾ ಮುಂದೆ ಆಣೆ-ಪ್ರಮಾಣ ಮಾಡಿದ್ದಾರೆ ಎನ್ನಲಾಗಿದೆ.
ಇದುವೇ ಬಿಜೆಪಿ ವರಿಷ್ಠರ ನಿದ್ದೆಗೆಡಿಸಿರುವುದು. ಹಾಗಾಗಿಯೇ ವರಿಷ್ಠರು ಕರ್ನಾಟಕ ನಾಯಕತ್ವದ ಬಗ್ಗೆ ಕಾದು ನೋಡುವ ತಂತ್ರಕ್ಕೆ ಅಂಟಿಕೊಂಡಿರುವುದು. ಒಂದು ವೇಳೆ ಯಡಿಯೂರಪ್ಪ ಬಣದ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ವಾಸನೆ ಬಡಿದರೆ ಯಡಿಯೂರಪ್ಪ ಅವರನ್ನು ಬಡಿದುಹಾಕಬೇಕು ಎಂಬುದು ಆ ವರಿಷ್ಠರ ಮುಂದಾಲೋಚನೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಪ್ರಣಬ್ ದಾ ಮತ ಬೇಟೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.