ಸಿಎಂ ಉದಾಸಿ 300 ಕೋಟಿ ರೂ ಸ್ವಾಹಾ ಮಾಡಿದರೇ?

ರಾಮನಗರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿಪಿ ಯೋಗಿಶ್ವರ್ ಅವರೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಸರಕಾರದ ಸಚಿವರೇ ಲೋಕೋಪಯೋಗಿ ಇಲಾಖೆಯ ವಿರುದ್ಧ ದೂರು ನೀಡಿದ್ದಾರೆ. ಗುತ್ತಿಗೆದಾರರು 1 ಕೋಟಿ ರೂಪಾಯಿ ಕಾಮಗಾರಿಗೆ 10 ಲಕ್ಷ ರೂ ಮುಂಗಡ ಲಂಚ ನೀಡಿದರೆ ಟೆಂಡರ್ ಇಲ್ಲದೆಯೂ ಕಾಮಗಾರಿ ಮಂಜೂರಾಗುತ್ತದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮುಖ್ಯಮಂತ್ರಿ ಸದಾನಂದ ಗೌಡರು ಜೆಡಿಎಸ್ ಪಕ್ಷದ ಅಣತಿಯಂತೆ ಸರಕಾರ ನಡೆಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಆರೋಪಿಸಿದ್ದಾರೆ. ಆದರೆ ಅವರು ಮಾಡಿರುವ ಈ ಆರೋಪವನ್ನು ಸಾಬೀತುಪಡಿಸಲಿ. ಸದಾನಂದ ಗೌಡ ಜೆಡಿಎಸ್ಗೆ ಅನುಕೂಲವಾಗುವಂತಹ ಯಾವುದಾದರೊಂದು ಕೆಲಸ ಮಾಡಿದ್ದರೂ ತೋರಿಸಲಿ ಎಂದೂ ಕುಮಾರಸ್ವಾಮಿ ಇದೇ ವೇಳೆ ಸವಾಲು ಹಾಕಿದ್ದಾರೆ.
ಉದಾಸಿ ತಿರುಗೇಟು: ನನ್ನ ಇಲಾಖೆಯ ಅವ್ಯವಹಾರಗಳಿದ್ದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಬಗ್ಗೆ ಲೋಕಾಯುಕ್ತದಂಥ ತನಿಖಾ ಸಂಸ್ಥೆಗಳಿಗೆ ವಿವರ ನೀಡಲಿ ಎಂದು ಲೋಕೋಪಯೋಗಿ ಸಚಿವ ಸಿಎಂ ಉದಾಸಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರು ಎರಡು ದಿನಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಜನರ ಪ್ರತಿಕ್ರಿಯೆ ದೊರಕದೆ ಭ್ರಮನಿರಸನರಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ. ನನ್ನ ಕ್ಷೇತ್ರವಾದ ಹಾವೇರಿ ಜಿಲ್ಲೆಯ ಹಾನಗಲ್ಗೆ ಆಗಮಿಸಿದ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರು ಸೇರದೇ ಇರುವುದರಿಂದ ಅವಮಾನ ಆದಂತಾಗಿ ಏನು ಮಾತನಾಡಬೇಕು ಎಂಬುದೇ ಅವರಿಗೆ ತೋಚಿಲ್ಲ ಎಂದು ಉದಾಸಿ ವ್ಯಂಗ್ಯವಾಡಿದರು.
ಅರಣ್ಯ ಸಚಿವ ಯೋಗೀಶ್ವರ್ ಅವರು ನಿಮ್ಮ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರಂತಲ್ಲ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಈ ಪ್ರಕರಣವನ್ನೂ ವಿಚಾರಣೆಗೆ ಕೊಟ್ಟರೆ ಸಂತೋಷಪಡುತ್ತೇನೆ ಎಂದು ಉದಾಸಿ ಹೇಳಿದ್ದಾರೆ.
ಶೀಘ್ರವೇ ದಾಖಲೆಗಳ ಬಿಡುಗಡೆ: ಅಂದಹಾಗೆ ಅರಣ್ಯ ಸಚಿವ ಯೋಗೀಶ್ವರ್ ಅವರು ಸಿಎಂ ಸದಾನಂದರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು, ಉದಾಸಿ ಅವರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕಳೆದ ವಾರ ರಾಜೀನಾಮೆ ನೀಡಿದ್ದರು. ಈ ಮಧ್ಯೆ, ಉದಾಸಿ ಮೇಲಿನ ತಮ್ಮ ಆರೋಪವನ್ನು ಸಾಬೀತುಪಡಿಸಲು ಸದ್ಯದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.












Click it and Unblock the Notifications