ಜೀನ್ಸ್ ಧಾರಿಗಳಿಗೆ ಕೊಡಗಿನ ದೇಗುಲಕ್ಕೆ ಪ್ರವೇಶ ನಿಷೇಧ

ತಲಕಾವೇರಿ ಭಾಗಮಂಡಲ ಸ್ಥಳವು ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸಿಗರ ಮೋಜಿನ ತಾಣವಲ್ಲ. ಪ್ರವಾಸಿಗರ ಹುಚ್ಚಾಟಗಳಿಗೆ ಕಡಿವಾಣ ಹಾಕಬೇಕು ಹಾಗೂ ಎಲ್ಲರಿಗೂ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಬೇಕೆಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದೇವಸ್ಥಾನ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದ ವಿವಿಧ ಹಿಂದೂ ದೇವಸ್ಥಾನಗಳಲ್ಲಿ ಇರುವಂತೆ ಈ ದೇವಸ್ಥಾನದಲ್ಲೂ ವಸ್ತ್ರಸಂಹಿತೆ ವಿಧಿಸಲೇಬೇಕು ಎಂದು ಸ್ಥಳೀಯರು ಹಾಗೂ ಸಮಿತಿ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಮಿತಿ ಸದಸ್ಯರು ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ.
ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದ್ದು, ಜೀನ್ಸ್, ಟಿ ಶರ್ಟ್, ಸ್ಲೀವ್ಲೆಸ್, ಸ್ಕರ್ಟ್, ಚಡ್ಡಿ, ಬಿಗಿ ಉಡುಪು ಮುಂತಾದವುಗಳನ್ನು ಧರಿಸಿದ ಮಹಿಳೆಯರನ್ನು ಭಾಗಮಂಡಲದ ಪ್ರವೇಶ ದ್ವಾರದ ಬಳಿಯೇ ತಡೆಯಲು ನಿರ್ಣಯಿಸಲಾಗಿದೆ.
ಎಲ್ಲಾ ಪ್ರಮುಖ ದೇಗುಲಗಳ ಮುಂಭಾಗದಲ್ಲಿ ಈ ಬಗ್ಗೆ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗುವುದು. ಸಂಪೂರ್ಣವಾಗಿ ದೇಹವನ್ನು ಮುಚ್ಚುವಂತೆ ಉಡುಪುಗಳನ್ನು ಧರಿಸಿರಬೇಕು. ಸಲ್ವಾರ್ ಕಮೀಜ್, ಸೀರೆ, ಮುಂತಾದವು ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಸ್ಪೀಕರ್ ಬೋಪಯ್ಯ ಹೇಳಿದರು.
ತಲಕಾವೇರಿ ಹಾಗೂ ಬ್ರಹ್ಮಗಿರಿ ಬೆಟ್ಟದ ತುದಿಯ ಮೇಲೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಸಾರಾಯಿ ಕುಡಿದುಕೊಂಡು ಇಡೀ ವಾತಾವರಣ ಗಲೀಜು ಮಾಡುತ್ತಿದ್ದಾರೆ. ಇತ್ತೀಚೆಗೆ ದೇಗುಲಗಳ ಹುಂಡಿ ಕಳವು ಪ್ರಕರಣ ನಡೆದ ಮೇಲೆ ದೇವಸ್ಥಾನದ ಸುರಕ್ಷತೆಗೆ ಪೊಲೀಸರನ್ನೇ ನೆಚ್ಚಿಕೊಂಡರೆ ಆಗುವುದಿಲ್ಲ.
ದೇವಸ್ಥಾನದ ಸಮಿತಿ ವತಿಯಿಂದ ಸುರಕ್ಷಾ ಪಡೆ ರಚಿಸಬೇಕು. ಇಲ್ಲಿನ ಸ್ಥಳೀಯರ ಬಳಿ ಸಾಮಾನ್ಯವಾಗಿ ಕೋವಿಗಳಿವೆ. ಅವುಗಳನ್ನು ಯುವಕರು ಹಿಡಿದುಕೊಂಡು ದೇವಸ್ಥಾನದ ಆಸುಪಾಸಿನಲ್ಲಿ ಗಸ್ತು ತಿರುಗಿದರೆ ಸಾಕು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಸಭೆಯಲ್ಲಿ ಭಗಂಡೇಶ್ವರ-ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಎಂ.ಬಿ. ದೇವಯ್ಯ, ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಾಚಾರ್, ಇತರರು ಉಪಸ್ಥಿತರಿದ್ದರು.
ವಿವಾಹ ಮಹೋತ್ಸವದಲ್ಲಿ ಭಾಗಿ : ಗುಡ್ಡೆಮನೆ ಅಳಿಯ ರಾಜ್ಯದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಇಲ್ಲಿನ ರೈತ ಭವನದಲ್ಲಿ ಶುಕ್ರವಾರ ನಡೆಯುವ ಭಾವನ ಮಗಳ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯ ಮೈಸೂರಿನ ಬೆಟ್ಟದ ತಾಯಿ ಚಾಮುಂಡಿ ಸನ್ನಿಧಿಗೆ ಭೇಟಿ ನೀಡಿದ ಸದಾನಂದ ಗೌಡರು, ಮಡಿಕೇರಿ ಕಡೆ ತೆರಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರಿಗೆ ನಗು ನಗುತ್ತಲೇ ಉತ್ತರಿಸಿದ ಬದಲಾವಣೆ ಬೇಕಿಲ್ಲ ಎಂದಿದ್ದಾರೆ.
ತವರು ಮನೆಯಲ್ಲಿ ನಡೆಯುತ್ತಿರುವ ಶುಭ ಕಾರ್ಯಕ್ಕೆ ಮುಖ್ಯಮಂತ್ರಿ ಡಿವಿಎಸ್ ರವರ ಪತ್ನಿಯಾದ ಡಾಟಿ ಸದಾನಂದ ಗೌಡ ಅವರು ಗುರುವಾರವೆ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ದೇವತಾಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಕುಟುಂಬ ವರ್ಗದವರೊಂದಿಗೆ ಸಂಭ್ರಮಿಸಿದರು. [ಮೈಸೂರಿನ ಚರ್ಚಲ್ಲೂ ವಿದೇಶಿಯರಿಗೆ ಡ್ರೆಸ್ ಕೋಡ್]












Click it and Unblock the Notifications