ಶ್ರೀರಾಮುಲು : ಆರಡಿ ಎತ್ತರ ಎಂಬತ್ತೇಳು ಕೆಜಿ ತೂಕ
ಆರಡಿ
ಎತ್ತರದ
ಎಪ್ಪತ್ನಾಲ್ಕು
ಕೆಜಿ
ತೂಕದ
ಅಜಾನುಬಾಹು
ವ್ಯಕ್ತಿತ್ವದ
ಮನುಷ್ಯನೊಬ್ಬ
ಸತತ
54
ದಿನಗಳ
ಕಾಲ,
ಉತ್ತರ
ಕರ್ನಾಟಕದಿಂದ
ದಕ್ಷಿಣ
ಕರ್ನಾಟಕದವರೆಗೆ
ಬೇಸಿಗೆಯ
ಬಿರುಬಿರು
ಬಿಸಿಲಿನಲ್ಲಿ
ಪಾದಯಾತ್ರೆ
ಕೈಗೊಂಡು,
921
ಕಿ.ಮೀ.
ಕ್ರಮಿಸಿದ
ವ್ಯಕ್ತಿಯ
ಎತ್ತರ
ಹೆಚ್ಚುಕಡಿಮೆಯಾಗದಿದ್ದರೂ
ತೂಕ
ಇಳಿಯದಿರಲು
ಸಾಧ್ಯವೆ?
ಕರೆಕ್ಟಾದ
ಮಾತು
ಎಂದು
ಹೇಳುವ
ಮೊದಲು,
ಈ
ವ್ಯಕ್ತಿಯ
ತೂಕ
ಎಷ್ಟಾಗಿತ್ತೆಂದು
ತಿಳಿದುಕೊಂಡುಬಿಡಿ.
ಬರೋಬ್ಬರಿ
87
ಕೆಜಿ!
ಅವರೇ ಭಾರತೀಯ ಜನತಾ ಪಕ್ಷದಿಂದ ಸಿಡಿದುಹೋಗಿರುವ ಬಡವ ಶ್ರಮಿಕ ರೈತ (ಬಿಎಸ್ಆರ್) ಕಾಂಗ್ರೆಸ್ ಪಕ್ಷದ ಅಧಿಪತಿ ಬಳ್ಳಾರಿಯ ಜೋಳದರಾಶಿಯ ಬಿ. ಶ್ರೀರಾಮುಲು. ವಾಲ್ಮಿಕಿ ಪಂಗಡದ ಹುಡುಗ, ರೈಲ್ವೆ ಕೂಲಿ ಕಾರ್ಮಿಕ ದಿವಂಗತ ಬಿ. ತಿಮ್ಮಪ್ಪ ಮತ್ತು ಹೊಲದಲ್ಲಿ ಇಂದೂ ದುಡಿಯುತ್ತಿರುವ ವಯೋವೃದ್ಧ ತಾಯಿ (84) ಹೊನ್ನೂರಮ್ಮನ ಮಗ ರಾಜಕೀಯಕ್ಕೆ ಕಾಲಿಟ್ಟು, ರೆಡ್ಡಿ ಸಹೋದರರ ಕೃಪಾಶೀರ್ವಾದದಿಂದ ಪ್ರವರ್ಧಮಾನಕ್ಕೆ ಬಂದಿದ್ದು ಒಂದು ಕಥೆಯಾದರೆ, ಬಿಜೆಪಿಯಿಂದ ಸಿಡಿದೆದ್ದು ಸ್ವತಂತ್ರ ಪಕ್ಷ ಕಟ್ಟಿ, ಎಲ್ಲ ಪಕ್ಷಗಳನ್ನು ಎದಿರುಹಾಕಿಕೊಂಡು, ನಡೆಸಿರುವ ಏಕಾಂಗಿ ಹೋರಾಟವಿದೆಯಲ್ಲ ಅದು ಇನ್ನೊಂದು ತೂಕದ್ದು. ಇಂಥ ತೂಕದ ಆಸಾಮಿ ಒನ್ಇಂಡಿಯಾ ಕನ್ನಡ ವರದಿಗಾರರ ತಕ್ಕಡಿಗೆ ಸೋಮವಾರ ಸಂಜೆ ಸಿಕ್ಕರು.
ಶ್ರೀರಾಮುಲು ಎಷ್ಟು ಜನರನ್ನು ಪಕ್ಷಕ್ಕೆ ಸೆಳೆದುಕೊಳ್ಳುತ್ತಾರೆ? ಯಾರ್ಯಾರನ್ನು ಮುಂದಿನ ವಿಧಾನಸಭೆ ಚುನಾವಣೆಗೆ ಇಳಿಸಲಿದ್ದಾರೆ? ಯಾರ್ಯಾರ ಬೆಂಬಲದಿಂದ ಚುನಾವಣೆಯಲ್ಲಿ ಸೆಣೆಸಲಿದ್ದಾರೆ? ಎಷ್ಟು ಸೀಟುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲಿದ್ದಾರೆ? ಯಾರ್ಯಾರ ಜೊತೆ ನಂತರ ಕೈಜೋಡಿಸಲಿದ್ದಾರೆ? ಇದೆಲ್ಲ ಹೋಗಲಿ, ಸದ್ಯಕ್ಕೆ ಅವರ ಮುಂದಿನ ರಾಜಕೀಯದ ನಡೆಯೇನು? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ನಿಖರವಾದ ಉತ್ತರ ದೊರೆಯುವುದಿಲ್ಲ.
ಪ್ರಶ್ನಾತೀತ ನಾಯಕ : ಆದರೆ, ಉತ್ತರ ಕರ್ನಾಟಕದ ಬಡವರ ಪಾಲಿಗೆ, ಪ್ರತಿದಿನದ ತುತ್ತಿಗಾಗಿ ದಿನನಿತ್ಯವೂ ಹೋರಾಟ ನಡೆಸಿರುವ ಶ್ರಮಿಕರ ಪಾಲಿಗೆ, ಕರ್ನಾಟಕದ ಜೋಳದ ರೊಟ್ಟಿ ಬೆಲ್ಟ್ನಲ್ಲಿ ವಾಸಿಸುತ್ತಿರುವ ರೈತರ, ನಿರುದ್ಯೋಗಿಗಳ ಪಾಲಿಗೆ ಶ್ರೀರಾಮುಲು ಒಬ್ಬ ಅಕ್ಷರಶಃ ಪ್ರಶ್ನಾತೀತ ನಾಯಕ. ಶ್ರೀರಾಮುಲು ಅಂದರೆ ಅವರಿಗೆ ಸಾಕ್ಷಾತ್ ದೇವರ ಸಮಾನ. ಹೀಗಾಗಿ, ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ನಡೆಸಿದ 921 ಕಿ.ಮೀ. ಉದ್ದದ ಪಾದಯಾತ್ರೆಯುದ್ದಕ್ಕೂ ನಡೆಸಿದ ಪಾದಯಾತ್ರೆಯಲ್ಲಿ ಈ ಅಂಶವನ್ನು ಶ್ರೀರಾಮುಲು ಅವರೇ ಕಂಡುಕೊಂಡಿದ್ದಾರೆ. ಪಾದಯಾತ್ರೆಯುದ್ದಕ್ಕೂ ಗುಡಿಗಳಲ್ಲಿ, ಬಡವರ ಮನೆಯಲ್ಲಿ, ಶಾಲೆಯಲ್ಲಿ ಎಲ್ಲೆಂದರಲ್ಲಿ ಮಲಗಿ, ಪ್ರೀತಿಯಿಂದ ಉಣಬಡಿಸಿದ ರೊಟ್ಟಿಯನ್ನು ತಿಂದು ಹಬ್ಬದೂಟ ಮಾಡಿ ಗುಂಡುಕಲ್ಲಿನಂತಾಗಿದ್ದಾರೆ ಶ್ರೀರಾಮುಲು.
"ಬಿಜೆಪಿ ಸರಕಾರ ರಚಿಸುವಾಗ ನಾನು ಶಾಸಕರನ್ನು ಸಂಘಟಿಸಿದ್ದನ್ನು ನೋಡಿದ್ದಾರೆ, ಎಲ್ಲ ವೈರುಧ್ಯಗಳನ್ನು ಧಿಕ್ಕರಿಸಿ ಯಡಿಯೂರಪ್ಪನವರನ್ನು ಕುರ್ಚಿಯ ಮೇಲಿ ಕೂಡಿಸಿದ್ದನ್ನು ನೋಡಿದ್ದಾರೆ, ರೆಡ್ಡಿಗಳ ಜೊತೆಗೆ ನನ್ನನ್ನು ಹೆಲಿಕಾಪ್ಟರ್ನಲ್ಲಿ ಹಾರಾಡುವುದನ್ನು ನೋಡಿದ್ದಾರೆ, ಆದರೆ, ಈಗ ನಾನು ಹೀರೋ ಅಲ್ಲ ಜೀರೋ. ನನ್ನ ಬಳಿ ಏನೂ ಇಲ್ಲ. ನನಗಿರುವುದು ಜನರ ಶ್ರೀರಕ್ಷೆಯೊಂದೇ. ಅವರ ಸಹಾಯದಿಂದಲೇ ರಾಜಕೀಯ ಹೋರಾಟ ನಡೆಸುತ್ತೇನೆ, ಹಣ ಚೆಲ್ಲದೆನೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಅವಕಾಶ ಸಿಕ್ಕರೆ ಮುಖ್ಯಮಂತ್ರಿಯೂ ಆಗುತ್ತೇನೆ" ಎಂದು ಶ್ರೀರಾಮುಲು ಹೇಳುವಾಗ, ಇವರು ಎಲ್ಲ ರಾಜಕಾರಣಿಯಂತೆ ಮಾತನಾಡುತ್ತಾರೆ ಎಂದು ಅನಿಸಿದರೂ, ಮಾತಿನಲ್ಲಿ ಕೃತ್ರಿಮತೆ ಇದೆ ಎಂದು ಅನಿಸುವುದಿಲ್ಲ.
ಭೋಳೆ ಸ್ವಭಾವ : ಅವರ ಮಾತಿನಲ್ಲಿ ಚಾಣಾಕ್ಷತನ ಇಲ್ಲದಿರಬಹುದು, ಆದರೆ ನೇರಾನೇರ ನುಡಿಗಳಿಂದ, ಡೌನ್ ಟು ಅರ್ಥ್ ಸ್ವಭಾವದಿಂದ, ಜನರೊಂದಿಗೆ ಬೆರೆಯುವ ಗುಣದಿಂದಾಗಿ, ಯಾರೊಂದಿಗೂ ದ್ವೇಷ ಹಾಗು ಸ್ನೇಹ ಕಟ್ಟಿಕೊಳ್ಳದ ವ್ಯಕ್ತಿತ್ವದಿಂದಾಗಿ ಶ್ರೀರಾಮುಲು ಬೇರೆ ರಾಜಕಾರಣಿಗಳಿಂದ ವಿಭಿನ್ನವಾಗಿ ನಿಲ್ಲುತ್ತಾರೆ. ಅವರ ಭೋಳೆ ಸ್ವಭಾವವನ್ನು ದುರುಪಯೋಗ ಮಾಡಿಕೊಂಡವರಿದ್ದಾರೆ, ಸಾಕಷ್ಟು ಲಾಭ ಪಡೆದು ಏಣಿ ಏರಿ ನಂತರ ಏಣಿ ತಳ್ಳಿದವರಿದ್ದಾರೆ, ಅವರಿಟ್ಟಿದ್ದ ನಂಬಿಕೆಯನ್ನು ಮೂರಾಬಟ್ಟೆ ಮಾಡಿದವರೂ ಇದ್ದಾರೆ. ಇಷ್ಟೆಲ್ಲ ಆದರೂ, ಏಷ್ಟೇ ಅವಮಾನ ಅನುಭವಸಿದರೂ 'ಸ್ವಾಭಿಮಾನಿ' ಶ್ರೀರಾಮುಲು ತಮ್ಮ ಹೋರಾಟವನ್ನು ಬಿಟ್ಟಿಲ್ಲ.
ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಮತ್ತು ಜಗನ್ ಮೋಹನ್ ರೆಡ್ಡಿ ಅವರ ಆಶೀರ್ವಾದವಂತೂ ಶ್ರೀರಾಮುಲುಗೆ ಇದ್ದೇ ಇದೆ. ಬಿಜೆಪಿಯಲ್ಲಿದ್ದುಕೊಂಡೂ ಸೋಮಶೇಖರ ರೆಡ್ಡಿ, ಜೆ. ಶಾಂತಾ, ಫಕೀರಪ್ಪ, ಸುರೇಶ್ ಬಾಬು ಮುಂತಾದವರು ಶ್ರೀರಾಮುಲುವಿಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ವಿರೋಧಿಗಳು ಕೂಡ ಶ್ರೀರಾಮುಲು ಬಾಣದ ಬತ್ತಳಿಕೆಯಾಗಿ ಹೆಗಲಿಗೆ ಆನಿಕೊಂಡಿದ್ದಾರೆ. ನಟಿ ರಕ್ಷಿತಾ ಗ್ಲಾಮರ್ ಟಚ್ ನೀಡಿದ್ದಾರೆ, ಸ್ವಲ್ಪ ಮಟ್ಟಿಗೆ ಪಕ್ಷಕ್ಕೆ ತೂಕವನ್ನೂ ತಂದಿದ್ದಾರೆ. ಆದರೆ, ಶ್ರೀರಾಮುಲು ಮುಂದಿನ ಗುರಿ ಎತ್ತ? ಅವರ ರಾಜಕೀಯ ನಿಲುವುಗಳೇನು? ಯಾವ ರೀತಿ ಚಾಣಾಕ್ಷ ನಡೆಗಳನ್ನು ನಾಲ್ಕು ಮಕ್ಕಳ ತಂದೆಯಾಗಿರುವ ಶ್ರೀರಾಮುಲು ನಡೆಸಲಿದ್ದಾರೆ? ಯಾರೊಂದಿಗೆ ಕೈಕಾಲು ಜೋಡಿಸಲಿದ್ದಾರೆ? ಚುನಾವಣೆಗೆ ಹೇಗೆ ತಯಾರಿ ನಡೆಸಿದ್ದಾರೆ? ಎಂಬ ಪ್ರಶ್ನೆಗಳಿಗೆ ಶ್ರೀರಾಮುಲು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿದ್ದಾರೆ. ಆದರೆ, ಫ್ಯಾನ್ ಗಾಳಿ ಬೀಸಿದತ್ತ ಸಾಗಲು ಶ್ರೀರಾಮುಲು ಸಿದ್ಧರಾಗಿದ್ದಾರೆ.