ನಿತ್ಯಾನಂದನ ಮದುರೈ ಆಶ್ರಮ ಮೇಲೆ ದಾಳಿ

ಮದುರೈ ಆಶ್ರಮದಲ್ಲಿ ಹುಲಿ ಚರ್ಮ ಹಾಗೂ ಆನೆ ದಂತ ಇರುವ ಶಂಕೆ ವ್ಯಕ್ತವಾಗಿತ್ತು, ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡಾ ತಮಿಳುನಾಡು ಪೊಲೀಸರು ನಿತ್ಯಾನಂದ ಆಶ್ರಮದಲ್ಲಿ ವಿಚಾರಣೆ ನಡೆಸಿದ್ದರು.
ಸುಮಾರು 1500 ವರ್ಷ ಇತಿಹಾಸ ಹೊಂದಿರುವ ಶೈವ ಮಠದ ಕಿರಿಯ ಸ್ವಾಮೀಜಿಯಾಗಿ ನಿತ್ಯಾನಂದ ಪದವಿ ಪಡೆದಿದ್ದರು. ಅರಣ್ಯ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಹುಲಿ ಚರ್ಮ ಹಾಗೂ ಆನೆ ದಂತ ಹೊಂದಿರುವುದು ಅಪರಾಧವಾಗಿದೆ. ನಿತ್ಯಾನಂದ ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಹಿಂದೂ ಮಕ್ಕಳ್ ಕಚ್ಚಿಯ ಸದಸ್ಯ ಸೊಲೈ ಕಣ್ಣನ್ ಎಂಬುವರು ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ರಂಜಿತಾ ಹಾಗೂ ಮಹಿಳಾ ಪಿಆರ್ ಒ ಒಬ್ಬರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ದಾಳಿ ನಡೆದ ಸಂದರ್ಭದಲ್ಲಿ ರಂಜಿತಾ ಹಾಗೂ ಇನ್ನೊಬ್ಬ ಆರೋಪಿ ಆಶ್ರಮದಲ್ಲೇ ಇದ್ದರು ಎನ್ನಲಾಗಿದೆ. ತಮಿಳುನಾಡು ಪೊಲೀಸರ ದಾಳಿ ಬಗ್ಗೆ ನಿತ್ಯಾನಂದನ ಕಾರ್ಯದರ್ಶಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಳಿಯಿಂದ ಸಿಕ್ಕ ವಸ್ತುಗಳ ವಿವರಗಳೂ ಇನ್ನೂ ಹೊರಬಿದ್ದಿಲ್ಲ.
ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಮೇಲೆ ಲೈಂಗಿಕ ಕಿರುಕುಳ, ಗಲಭೆ, ಶಾಂತಿ ಭಂಗ ಮುಂತಾದ ಆರೋಪಗಳಿವೆ. ರಾಮನಗರ ಕೋರ್ಟಿನಿಂದ ಜಾಮೀನು ಪಡೆದು ನಿತ್ಯಾನಂದ ಹೊರಬಿದ್ದಿದ್ದಾರೆ. ಕರ್ನಾಟಕದ ಬಿಡದಿ ಆಶ್ರಮದಲ್ಲಿ ನಡೆದ ಗಲಭೆಯಿಂದ ಆಶ್ರಮಕ್ಕೆ ಧಕ್ಕೆ ಉಂಟಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ 10 ಕೋಟಿ ರು. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ನಿತ್ಯಾನಂದ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಸೇರಿದ ಬಿಡದಿಯ ಧ್ಯಾನಪೀಠಂ ಆಶ್ರಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಸಹಿತ ಹಲವು ಲೋಪಗಳು ಕಂಡುಬಂದಿವೆ. ನಿತ್ಯಾನಂದ ಸ್ವಾಮಿ ವಿರುದ್ಧ ಸ್ಥಳೀಯ ಪೊಲೀಸರು ಕೋರ್ಟ್ ಆದೇಶದ ಬಳಿಕ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ. ತೀರ್ಥದಲ್ಲಿ ಮಾದಕದ್ರವ್ಯ ಸೇರಿಸಿ ಭಕ್ತರಿಗೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ನಿತ್ಯಾನಂದ ಹಾಗೂ ಇತರೆ ಇಬ್ಬರ ವಿರುದ್ಧ ಹಿಂದೂ ಮಕ್ಕಳ ಕಚ್ಚಿ ಸಂಘಟನೆಯ ಸೋಲೈಕಣ್ಣನ್ ಎಂಬುವವರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ದಾಖಲಿಸಿದ್ದಾರೆ.
ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಕಳೆದ ವಾರ ಜಾಮೀನು ಕರುಣಿಸಿದ್ದ ರಾಮನಗರ ಸಿಜೆಎಂ ಮ್ಯಾಜಿಸ್ಟ್ರೇಟ್ ಕೋರ್ಟು ಇಂದು ಆಘಾತ ನೀಡಿದೆ. 'ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಜತೆಗೆ ತಮ್ಮ ಧ್ವನಿ ಮಾದರಿಯನ್ನೂ ನೀಡಿ. ಎಲ್ಲ ರಿಪೊರ್ಟುಗಳು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು' ಎಂದು ಬಿಡದಿಯ ಧ್ಯಾನಪೀಠಂ ಆಶ್ರಮದ ನಿತ್ಯಾನಂದಗೆ ಕೋರ್ಟ್ ತಾಕೀತು ಮಾಡಿದೆ.












Click it and Unblock the Notifications