ಶೆಟ್ಟರ್ ಸೇರಿ ಬಿಎಸ್ ವೈ ಬಣ ರಾಜೀನಾಮೆಗೆ ಸಜ್ಜು?

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ಅವರಿಗೆ ಜುಲೈ ತಿಂಗಳ ಅಂತ್ಯದವರೆಗೂ ಸಿಹಿ ಸುದ್ದಿ ಸಿಗುವುದಿಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಡಿಯೂರಪ್ಪ ಬಣದ ಸಚಿವರು, ಶಾಸಕರು ಹಾಗೂ ಸಂಸದರು ಮತ್ತೊಮ್ಮೆ ಒತ್ತಡ ತಂತ್ರವನ್ನು ಅನುಸರಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ಶೆಟ್ಟರ್ ಕತೆ ಏನು?: ಈಗಾಗಲೇ ಸಚಿವರ ರಾಜೀನಾಮೆ ನಂತರ ಖಾತೆಗಳ ಭಾರದಿಂದ ತತ್ತರಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಪಕ್ಷದ ಹೈಕಮಾಂಡನ್ನು ಏಕ ಕಾಲಕ್ಕೆ ಇಕ್ಕಟ್ಟಿಗೆ ಸಿಕ್ಕಿಸುವುದು ಯಡಿಯೂರಪ್ಪ ಬಣದ ಉದ್ದೇಶ.
ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಮೊದಲಿಗೆ ಜಗದೀಶ್ ಶೆಟ್ಟರ್ ಹಾಗೂ ಸಿಎಂ ಉದಾಸಿ ರಾಜೀನಾಮೆ ನೀಡಲಿದ್ದು ನಂತರ ಉಳಿದ ಬೆಂಬಲಿಗರೂ ಅದೇ ಹಾದಿ ಹಿಡಿಯಲಿದ್ದಾರೆ. ನಂತರ ಯಡಿಯೂರಪ್ಪ ಬೆಂಬಲಿಗ ಸಚಿವರಾದ ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ರಾಜೂಗೌಡ ಸೇರಿದಂತೆ ಎಂಟು ಮಂದಿ ಸಚಿವರು ನೇರವಾಗಿ ಮುಖ್ಯಮಂತ್ರಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಜೂ.28ರಂದು ಸಭಾಪತಿ ಆಯ್ಕೆಗಾಗಿ ವಿಧಾನ ಪರಿಷತ್ ಅಧಿವೇಶನ ಕರೆಯಲಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರು ಆಗಮಿಸುತ್ತಿದ್ದು, ಎಲ್ಲದ್ದಕ್ಕೂ ಸ್ಪಷ್ಟ ಚಿತ್ರಣ ಸಿಗಲಿದೆ.
ಅಲ್ಲದೆ ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಈಶ್ವರಪ್ಪ ಅವರ ಸ್ಥಾನ ಬದಲಿ(ಉಪ ಮುಖ್ಯಮಂತ್ರಿ?) ಮಾಡುವಂತೆ ಹೈಕಮಾಂಡ್ ಗೆ ಮನವಿ ಮಾಡಲಾಗುವುದು.
ಚುನಾವಣೆ ತಯಾರಿ: ಮುಂದಿನ ಚುನಾವಣೆಯಲ್ಲಿ ಸದಾನಂದ ಗೌಡರ ನಾಯಕತ್ವ ಅಥವಾ ಕೆಎಸ್ ಈಶ್ವರಪ್ಪ ಅವರ ಸಾಮೂಹಿಕ ನಾಯಕತ್ವಗಳು ಟುಸ್ ಆಗಲಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿಕೊಳ್ಳುವುದೇ ಏಕೈಕ ಮಾರ್ಗ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲು ಯಡಿಯೂರಪ್ಪ ಬಣ ಸಿದ್ಧತೆ ನಡೆಸಿದೆ.
ಶಾಸಕಾಂಗ ಸಭೆ ಕರೆಯದೆ ಶಾಸಕರು, ಸಚಿವರನ್ನು ನಿರ್ಲಕ್ಷಿಸಿರುವ ಸದಾನಂದ ಗೌಡರ ಮೇಲೆ ಕಾರ್ಯಕರ್ತರು ವಿಶ್ವಾಸ ಕಳೆದುಕೊಂಡಿದ್ದಾರೆ. ಪಕ್ಷ ಇಬ್ಭಾಗವಾಗುವುದನ್ನು ತಪ್ಪಿಸಿ ಸರ್ಕಾರವನ್ನೂ ಉಳಿಸಿಕೊಳ್ಳಲು, ಮುಂದಿನ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಲು ಯಡಿಯೂರಪ್ಪ ಅವರ ನಾಯಕತ್ವ ಅಗತ್ಯವಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿದ್ದಾರೆ
ರಾಜೀನಾಮೆ ಪರ್ವ: ಸದಾನಂದ ಗೌಡ ಅವರಿಗೆ ಜಾರಕಿಹೊಳಿ ಸೇರಿದಂತೆ ಹತ್ತಾರು ಶಾಸಕರ ಬೆಂಬಲ ಮಾತ್ರ ಇದೆ ಎನ್ನಲಾದರೂ, ಸದಾನಂದ ಗೌಡರ ಕುರ್ಚಿಗೆ ಆಪತ್ತು ಬಂದರೆ 20ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಯಡಿಯೂರಪ್ಪ ಬಣದ ರಾಜೀನಾಮೆ ಅಸ್ತ್ರಕ್ಕೆ ಪ್ರತ್ಯಾಸ್ತ್ರವನ್ನು ಜಾರಕಿಹೊಳಿ ಬಣ ಸಿದ್ಧಪಡಿಸಿದೆ.
ರಾಜೀನಾಮೆಗೆ ರಾಜೀನಾಮೆ ಉತ್ತರವಾದರೆ, ಸುಮಾರು 23 ಖಾತೆಗಳನ್ನು ಹೊಂದಿರುವ ಸದಾನಂದ ಗೌಡರು ಸಚಿವ ಸಂಪುಟದ ಸಹದ್ಯೋಗಿಗಳನ್ನು ಕಳೆದುಕೊಂಡು, ಏಕಕಾಲಕ್ಕೆ ಲಭ್ಯವಿರುವ ಅಷ್ಟು ಖಾತೆಗಳ ಭಾರ ಹೊರುವ ಮೂಲಕ ದಾಖಲೆ ಬರೆಯುವ ಸಾಧ್ಯತೆಯೂ ಇದೆ. ನಿತಿನ್ ಗಡ್ಕರಿ ಅವರ ಪುತ್ರನ ಮದುವೆ ಮುಗಿದ ಮೇಲೆ ಕರ್ನಾಟಕದ ರಾಜಕೀಯ ನಾಟಕಕ್ಕೆ ಒಳ್ಳೆ ತಿರುವು ಸಿಗುವ ಸೂಚನೆ ಇದೆ.












Click it and Unblock the Notifications