ಮುಂಬೈ ದಾಳಿ: ಸಿಮಿ ಭಯೋತ್ಪಾದಕನ ಸೆರೆ
2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಸ್ಫೋಟ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ತಿಳಿದುಬಂದಿದೆ. ಸಯ್ಯದ್ ಜಬೀಯುದ್ದೀನ್ ಮೂಲತಃ ಸಿಮಿ ಸಂಘಟನೆಯ ಉಗ್ರ. ಅದು ನಿಷೇಧಕ್ಕೊಳಗಾದ ಮೇಲೆ ಲಷ್ಕರೆ ಭಯೋತ್ಪಾದಕನಾಗಿ ಮಾರ್ಪಟ್ಟಿದ್ದಾನೆ. ಉಗ್ರ ಕಸಬ್ ಸಹ ವಿಚಾರಣೆಯ ವೇಳೆ ಸಯ್ಯದ್ ಜಬೀಯುದ್ದೀನ್ ಪಾತ್ರವನ್ನು ವಿವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯ ವಿಶೇಷ ಪೊಲೀಸ್ ಘಟಕವು ಸೋಮವಾರ ಬೆಳಗ್ಗೆ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಯ್ಯದ್ ಜಬೀಯುದ್ದೀನ್ @ ಅಬು ಹಂಸಾ @ ಅಬು ಜಿಂದಾಲ್ @ ಅನ್ಸಾರಿ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ. 26/11ರ ಮುಂಬೈ ದಾಳಿಯನ್ನು ನಿರ್ವಹಿಸಿ ಈತನೇ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ದಾಳಿಯನ್ನು ನಿರ್ವಹಿಸಿದ ಆರು ಮಂದಿ ಪೈಕಿ ಈ ಬಂಧಿತ ಭಯೋತ್ಪಾದಕನೂ ಒಬ್ಬನಾಗಿದ್ದಾನೆ. ದೇಶದಲ್ಲಿ ನಾನಾ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸ್ಥಳಗಳನ್ನು ಗುರುತಿಸುತ್ತಿದ್ದುದು ಈತನೇ. ಇವ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತದ ಪೊಲೀಸರು ಈತನ ವಿರುದ್ಧ Interpol Red Corner ನೋಟಿಸ್ ಜಾರಿಗೊಳಿಸಿದ್ದರು.
ಬಂಧಿತ ಭಯೋತ್ಪಾದಕ ಸಯ್ಯದ್ ಜಬೀಯುದ್ದೀನ್ ಲಷ್ಕರೆ ತೊಯಿಬಾ ಸಂಘಟನೆಗೆ ಸೇರಿದವನಾಗಿದ್ದು, ಮುಂಬೈ ದಾಳಿಕೋರ ಭಯೋತ್ಪಾದಕರಿಗೆ ತರಬೇತಿ ನೀಡಲು ಪಾಕಿಸ್ತಾನಕ್ಕೆ ಭೆಟಿ ನೀಡಿದ್ದ ಎನ್ನಲಾಗಿದೆ.
2006ರಿಂದ ಪರಾರಿಯಾಗಿದ್ದ ಈತನನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಭಯೋತ್ಪಾದಕ ಸಯ್ಯದ್ ಬಂಧನ ಮಹತ್ವವಾಗಿದ್ದು, ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಹೊರಬೀಳಲಿವೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕ ಸಯ್ಯದ್ ಜಬೀಯುದ್ದೀನ್ ಬಂಧನದಿಂದ ಭಾರತದಲ್ಲಿ ನಡೆಸುವ ಭಯೋತ್ಪಾದಕ ದಾಳಿಗಳಲ್ಲಿ ಸರಕಾರೇತರ ವ್ಯಕ್ತಿಗಳ ಪಾತ್ರವಿಲ್ಲದಿರುವುದು ಸಾಬೀತಾಗಿದೆ. ಹಾಗಾಗಿ, ಪಾಕಿಸ್ತಾನದ ಭಯೋತ್ಪಾದನೆ ಚುಟವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ಪೊಲೀಸರು ವಿಶ್ಲೇಷಿಸಿದ್ದಾರೆ.
ಭಯೋತ್ಪಾದಕ ಸಯ್ಯದ್ ಜಬೀಯುದ್ದೀನ್ ಸೌದಿ ಅರೇಬಿಯಾದಿಂದ ಗಡಿಪಾರಾಗಿದ್ದು, ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಎನ್ನಲಾಗಿದೆ. ಸಯ್ಯದ್ ಜಬೀಯುದ್ದೀನ್, ಮತ್ತು ಅಬು ಹಂಜಾ ಎಂಬ ವ್ಯಕ್ತಿಯೂ ಮುಂಬೈ ದಾಳಿ ನಡೆಸಿದ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.