ಸ್ಕೂಲ್ ಬಸ್ ಡಿಕ್ಕಿ, ಪುಟ್ಟ ಬಾಲಕ ದುರಂತ ಸಾವು
ಥಣಿಸಂದ್ರದ ಬ್ರೈಟ್ ಶಾಲೆಗೆ ಸೇರಿ ಎಲ್ಲರಂತೆ ನನ್ನ ಮಗ ಕೂಡಾ ಬ್ರೈಟ್ ಆಗುತ್ತಾನೆ ಎಂದು ಕನಸು ಕಂಡಿದ್ದ ಫೈಸಲ್ ಪೋಷಕರ ರೋದನ ಮುಗಿಲು ಮುಟ್ಟಿದೆ. ಪ್ರೀ ನರ್ಸರಿ ಸೇರಿದ್ದ ಫೈಸಲ್ ಎಂದಿನಂತೆ ಸ್ಕೂಲ್ ಬಸ್ ನಿಂದ ಮನೆ ಬಳಿ ಇಳಿದಿದ್ದಾನೆ. ಪ್ರತಿ ದಿನದಂತೆ ಫೈಸಲ್ ನನ್ನು ಕರೆದೊಯ್ಯಲು ಬರುತ್ತಿದ್ದ ಪೋಷಕರು ಸ್ಥಳಕ್ಕೆ ಬರುವುದು ಕೊಂಚ ತಡವಾಗಿದೆ.
ಆದರೆ, ಅಷ್ಟರಲ್ಲಿ ಫೈಸಲ್ ನನ್ನು ನಿಗದಿತ ಸ್ಥಳದಲ್ಲಿ ಇಳಿಸಿದ ಬಸ್ ಸಿಬ್ಬಂದಿ, ಆತನ ಸ್ಕೂಲ್ ಬ್ಯಾಗ್ ಕೆಳಗೆ ಎಸೆದಿದ್ದಾನೆ. ಕೆಳಗೆ ಬಿದ್ದ ಬ್ಯಾಗನ್ನು ಎತ್ತಿಕೊಂಡ ಫೈಸಲ್ ಒಂದೆರಡು ಹೆಜ್ಜೆ ಇಡುವುದರಲ್ಲಿ ರಿವರ್ಸ್ ಬಂದ ಬಸ್ ಬಾಗಿಲು ಆತನ ತಲೆಗೆ ಬಡಿದಿದೆ.
ಮಗುವನ್ನು ಸಾಯಲು ಬಿಟ್ಟು ಪರಾರಿ: ಮಾರಣಾಂತಿಕ ಸ್ಥಿತಿಯಲ್ಲಿ ಬಿದ್ದಿದ್ದ ಮಗುವನ್ನು ನೋಡಿ ಗಾಬರಿಗೊಂಡ ಬಸ್ ಡ್ರೈವರ್, ಮಗು ಫೈಸಲ್ ನನ್ನು ಎತ್ತಿಕೊಂಡು ಬಸ್ ನಲ್ಲಿ ಹಾಕಿಕೊಂಡು ಅಲ್ಲಿಂದ ತುಂಬಾ ದೂರ ಹೋಗಿದ್ದಾನೆ. ನಿರ್ಜನ ಪ್ರದೇಶ ಕಂಡ ತಕ್ಷಣ.. ಮಗುವನ್ನು ಬಸ್ ನಲ್ಲೇ ಸಾಯಲು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಫೈಸಲ್ ಸ್ಥಿತಿ ಕಂಡು ಭಯಗೊಂಡ ಸಹಪಾಠಿ ಪುಟ್ಟ ಮಕ್ಕಳು, ಜೋರಾಗಿ ಅರ್ಭಟ ಮಾಡಿದ್ದಾರೆ. ಮಕ್ಕಳ ರೋದನದ ಧ್ವನಿ ಕೇಳಿದ ದಾರಿಹೋಕರು ಬಸ್ ಒಳಹೊಕ್ಕು ನೋಡಿದಾಗ ಫೈಸಲ್ ಜೀವನ್ಮರಣ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ತಕ್ಷಣವೇ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ಫೈಸಲ್ ನನ್ನು ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ದುರದೃಷ್ಟವಶಾತ್, ತಲೆಗೆ ಪೆಟ್ಟು ತಿಂದಿದ್ದ ಫೈಸಲ್, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಈ ನಡುವೆ ಶಾಲೆಯಿಂದ ಮಗು ಇನ್ನೂ ಯಾಕೆ ಬಂದಿಲ್ಲ ಎಂದು ಫೈಸಲ್ ತಾಯಿ ಫಾಹಿಯಾ ಬಾನು ರಸ್ತೆಗಿಳಿದು ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದ್ದಾರೆ. ಸ್ಕೂಲ್ ಬಸ್ ಆಗಲೇ ಹೊರಟು ಹೋದ ಸುದ್ದಿ ಸಿಕ್ಕಿದೆ. ನಂತರ ಅವರಿವರಿಂದ ಸುದ್ದಿ ಹರಡಿ ಫೈಸಲ್ ಸಾವಿನ ಸುದ್ದಿ ಆತನ ಪೋಷಕರಿಗೂ ತಲುಪಿದೆ.
'ಅಪಘಾತ ಆದ ತಕ್ಷಣ ನಮಗಾದರೂ ತಿಳಿಸಿ, ಆತ(ಡ್ರೈವರ್) ಹೋಗಬಹುದಿತ್ತು. ಚಿಕಿತ್ಸೆ ಕೊಡಿಸಿ ಹೇಗ ಬದುಕಿಸಿಕೊಳ್ಳುತ್ತಿದ್ದೆವು. ಫೈಸಲ್ ಬರ್ಥಡೇ ಸಜ್ಜಾಗಿದ್ದೆವು. ಆದರೆ, ಆತನ ಕಳೆಬರವನ್ನು ಕಂಡು ನಮಗೆಲ್ಲ ಶಾಕ್ ಆದೆವು' ಎಂದು ನೂರುಲ್ಲಾ ಅವರ ಸಂಬಂಧಿಕರು ದುಃಖ ತೋಡಿಕೊಂಡಿದ್ದಾರೆ. ಬ್ರೈಟ್ ಶಾಲೆ ಎರಡು ದಿನ ಶೋಕಾಚರಣೆ ಘೋಷಿಸಿದೆ. ಶಾಲಾ ಮುಖ್ಯಸ್ಥೆ ಶಾಹೀಜಾ ಬೇಗಂ ಕಣ್ಮರೆಯಾಗಿದ್ದಾರೆ.
ಬೆಂಗಳೂರು ನಗರ ಪೊಲೀಸರ ಕೈಗೆ ನಾಪತ್ತೆಯಾಗಿದ್ದ ನಿರ್ದಯಿ ಚಾಲಕ ಭರತ್ ಸಿಂಗ್ ಏನೋ ಸಿಕ್ಕಿದ್ದಾನೆ. ಪ್ರಕರಣವೂ ದಾಖಲಾಗಿದೆ. ಆದರೆ, ಫೈಸಲ್ ಎಂಬ ಪುಟ್ಟ ಬಾಲಕನ ಸಾವಿನ ಸೂತಕ ಮಾತ್ರ ದಟ್ಟವಾಗಿ ಆವರಿಸಿದೆ.