ಯಡಿಯೂರಪ್ಪಗೆ ಬೇಲ್ : ಇಂದು ಮಹತ್ವದ ತೀರ್ಪು

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮುಖಭಂಗ ಅನುವಿಸಿರುವ ಯಡಿಯೂರಪ್ಪ ಅವರು ಬುಧವಾರ ರಾಹುಕಾಲ (12.00 ರಿಂದ 1.30 ಗಂಟೆ) ಕಳೆದ ನಂತರ ತೀರ್ಪು ಹೊರಬೀಳಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾರೆ ಎಂಬ ಸುದ್ದಿ ಇದೆ. ಬಹುಶಃ ಯಡಿಯೂರಪ್ಪ ಅವರ ಬಯಕೆಯಂತೆ ರಾಹುಕಾಲದ ನಂತರ ತೀರ್ಪು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.
ಶನಿವಾರ (ಜೂ.16) ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್ ಅವರ ವಿಚಾರಣೆ ನಡೆಸಿದ ಸಿಬಿಐ ತಂಡ, ವಿವರಗಳನ್ನು ಕೋರ್ಟಿಗೆ ಸಲ್ಲಿಸುವ ಸಾಧ್ಯತೆಯಿದೆ.
ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದರೆ ಯಡಿಯೂರಪ್ಪ ಅವರನ್ನು ಸಿಬಿಐ ತಕ್ಷಣವೇ ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಸಿಬಿಐ ಪರ ವಕೀಲ ಅಶೋಕ್ ಬಾನ್ ಅವರು ಮಂಡಿಸಿದ ವಾದದ ಪ್ರಕಾರ, ಗಣಿ ಕಂಪನಿಗಳಿಂದ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ ಲಿ ಗೆ ಬರಬೇಕಿರುವ 917ಕ್ಕೂ ಅಧಿಕ ಕೋಟಿ ರು ಮೊತ್ತ ಇನ್ನೂ ಬಾಕಿ ಇದೆ.
ಗಣಿ ಗುತ್ತಿಗೆ ಅವ್ಯವಹಾರ ಎಲ್ಲವೂ ನಕಲಿ ದಾಖಲೆ, ನಕಲಿ ಕಂಪನಿಗಳ ಹೆಸರಿನಲ್ಲಿ ನಡೆದಿರುವುದರಿಂದ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ, ರಾಜಸ್ವ ಮೊತ್ತ ತಲುಪಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲೂ ದಾಖಲೆಗಳನ್ನು ತಿದ್ದಿ, ನಕಲಿ ಮಾಡಿ ವ್ಯವಹಾರ ಮುಗಿಸಲಾಗಿದೆ.
ಹೀಗಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಹೆಚ್ಚಿನ ತನಿಖೆ ನಡೆಸದಿದ್ದರೆ ಸರ್ಕಾರಕ್ಕೆ ಇನ್ನಷ್ಟು ನಷ್ಟವಾಗುತ್ತದೆ. ಹಾಗೂ ಯಡಿಯೂರಪ್ಪ ಅವರ ಕಾಲದ ಅಕ್ರಮದ ಅಸಲಿ ಮೊತ್ತ ತಿಳಿಯುತ್ತದೆ ಎಂದು ವಾದಿಸಿದರು.
ಅದರಂತೆ, ಸಿಬಿಐ ತಂಡ ಕೂಡಾ ಯಡಿಯೂರಪ್ಪ ಅವರ ಮಕ್ಕಳು ಸೇರಿದಂತೆ ಆಪ್ತರನ್ನು ಸುಮಾರು 3 ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ. 20 ಕೋಟಿ ರು ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತ 30 ಪ್ರಶ್ನೆಗಳನ್ನು ಕೇಳಲಾಗಿತ್ತು.
ಸಿಬಿಐ ತಂಡ ಕೇಳಿದ ಪ್ರಶ್ನೆಗಳಿಗೆ ತತ್ತರಿಸಿದ ಯಡಿಯೂರಪ್ಪ ಕುಟುಂಬ, ಸೋಮವಾರ ಜಾಮೀನು ಪಡೆಯುವ ನಿರೀಕ್ಷೆ ಹೊಂದಿತ್ತು. ಆದರೆ, ಸಿಬಿಐ ಪರ ಅಶೋಕ್ ಬಾನ್ ಹಾಗೂ ಯಡಿಯೂರಪ್ಪ ಪರ ಸಿವಿ ನಾಗೇಶ್ ಅವರು ನಡೆಸಿದ ವಾದ ಪ್ರತಿವಾದ ವಿಚಾರಣೆಯನ್ನು ಎರಡು ದಿನಕ್ಕೆ ಎಳೆದಿತ್ತು.
ಐಪಿಸಿ ಸೆಕ್ಷನ್ 120 (b), 409, 420 ಭ್ರಷ್ಟಾಚಾರ ನಿಯಣತ್ರಣ ಕಾಯಿದೆಯಡಿ ಸೆಕ್ಷನ್ 7, 13 (2), 13(1) (c) (d) ಹಾಗೂ ಕರ್ನಾಟಕ ಭೂ ಕಾಯಿದೆ (ವರ್ಗಾವಣೆ ನಿಯಂತ್ರಣ) ಸೆಕ್ಷನ್ 9ರ ಅಡಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಯಡಿಯೂರಪ್ಪ ಅವರನ್ನು A1 ಎಂದು ಗುರುತಿಸಿ, FIR ಹಾಕಿ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.












Click it and Unblock the Notifications