ಪ್ರಣಬ್ ಮುಖರ್ಜಿ ಪಟ್ಟಾಭಿಷೇಕಕ್ಕೆ ಭಾರತ ಸಿದ್ಧ
ಯುಪಿಎ ಅಧಿಕೃತ ಅಭ್ಯರ್ಥಿಯಾಗಿ ಪ್ರಣಬ್ ಮುಖರ್ಜಿ ಅವರ ಹೆಸರನ್ನು ಸಂಜೆ ಯುಪಿಎ ಘೋಷಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹತ್ವದ ಸಭೆ ನಡೆಸಿ ನಂತರ ಪ್ರಣಬ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದರು. ಪ್ರಣಬ್ ಮುಖರ್ಜಿ ಅವರಿಗೆ ಬೆಂಬಲ ನೀಡುವ ಬಗ್ಗೆ ಸಮಾಜವಾದಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷ ಇನ್ನೂ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ನಡುವೆ ಎನ್ ಡಿಎ ಮಿತ್ರಪಕ್ಷಗಳು ಸಭೆ ಸೇರಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಸಿವೆ. ಆದರೆ, ಜನತಾ ದಳ(ಯು) ಶರದ್ ಯಾದವ್ ಸೇರಿದಂತೆ ಕೆಲ ಪ್ರಮುಖ ನಾಯಕರು ಕಲಾಂ ಅವರನ್ನು ಬೆಂಬಲಸಲು ನಿರಾಕರಿಸಿದ್ದಾರೆ.
ಹೀಗಾಗಿ ಈಗ ಅನಿವಾರ್ಯವಾಗಿ ಎನ್ ಡಿಎ ಕೂಡಾ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.
ಯುಪಿಎಯೇತರ ಅಭ್ಯರ್ಥಿಗಳಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ ಮಾಜಿ ಲೋಕಸಭಾ ಸ್ಪೀಕರ್ ಪಿಎ ಸಂಗ್ಮಾ ಅವರು ಪ್ರಮುಖರಾಗಿದ್ದಾರೆ.
ಎಪಿಜೆ ಅಬ್ದುಲ್ ಕಲಾಂ ಅವರಿಗೆ ಬೆಂಬಲ ನೀಡಲು ಅಭ್ಯಂತರವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟಣೆ ಸಿಕ್ಕಿಲ್ಲ. ಯುಪಿಎ ಮೇಲಿನ ಸಿಟ್ಟಿನಿಂದ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ.
ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಇನ್ನೂ ಸ್ಪಷ್ಟಣೆ ನೀಡಿಲ್ಲ. ಕಲಾಂ ಅವರನ್ನು ಬೆಂಬಲಿಸುವ ಬಗ್ಗೆ ಯಾದವ್ ಹಾಗೂ ಮಮತಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿವುದು ವಿಷಯವನ್ನು ಇನ್ನೂ ಕಗ್ಗಂಟ್ಟಾಗಿಸಿದೆ.
2014ರ ತನಕ ಮನಮೋಹನ್ ಪ್ರಧಾನಿ: ಸಮಾಜವಾದಿ ಪಕ್ಷ ಕೂಡಾ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿಯಾಗಿ ನೋಡಲು ಬಯಸುವುದಿಲ್ಲ ಎಂದ ಮೇಲೆ ಪ್ರಧಾನಿ ಸಿಂಗ್ ಅವರ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಸ್ಪಷ್ಟಣೆ ನೀಡಿತ್ತು.
2014ರ ವರೆಗೆ ಮನಮೋಹನ್ ಸಿಂಗ್ ಪ್ರಧಾನಿಯಾಗೇ ಮುಂದುವರೆಯಲಿದ್ದಾರೆ ಎಂದು ಹೇಳಿತ್ತು. ಹೀಗಾಗಿ ಪ್ರಧಾನಿ ಸ್ಪರ್ಧೆ ಬಗ್ಗೆ ಇದ್ದ ಗಾಳಿಸುದ್ದಿ ಹಾಗೆ ತೂರಿಕೊಂಡು ಹೋಗಿ ಮೂಲೆ ಸೇರಿದೆ.
ಡಿಎಂಕೆ ಅಚ್ಚರಿ ನಡೆ: ಮೊದಲಿಗೆ ಮಹಿಳಾ ಅಭ್ಯರ್ಥಿಗೆ ಮಾತ್ರ ಬೆಂಬಲ ಎನ್ನುತ್ತಿದ್ದ ಡಿಎಂಕೆ, ನಂತರ ಮುಸ್ಲಿಂ ಅಭ್ಯರ್ಥಿ ಪರ ನಿಂತು ಅನ್ಸಾರಿ ಅವರನ್ನು ರಾಷ್ಟ್ರಪತಿ ಮಾಡಲು ಹೊರಟಿತ್ತು. ಆದರೆ, ಈಗ ತಮ್ಮ ರಾಜ್ಯದ ಸಮರ್ಥ ಅಭ್ಯರ್ಥಿ ಅಬ್ದುಲ್ ಕಲಾಂ ಪರ ನಿಲ್ಲದೆ ಪ್ರಣಬ್ ಮುಖರ್ಜಿ ಪರ ನಿಂತಿರುವುದು ಕುತೂಹಲಕಾರಿಯಾಗಿದೆ.