ಕ್ಯಾಲಿಫ್: ಮಾಜಿ ಸೇನಾಧಿಕಾರಿ ಸಂಸಾರ ದುರಂತ ಸಾವು
47 ವರ್ಷದ ಅವತಾರ್ ಸಿಂಗ್ ಎಂಬವರು ಕ್ಯಾಲಿಫೋರ್ನಿಯಾದ ತಮ್ಮ ನಿವಾಸದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಿನ ಜಾವ 6.15ರ ಸುಮಾರಿಗೆ ಪೊಲೀಸ್ ಠಾಣೆ (Selma police) ಗೆ ಕರೆ ಮಾಡಿ, ತನ್ನ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದರು. ಈತ ಕಾಶ್ಮೀರಿ ಮಾನವ ಹಕ್ಕುಗಳ ವಕೀಲರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದರು.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಮೇಲೆ ಸಿಂಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3 ಹಾಗೂ 15 ವರ್ಷದ ಇಬ್ಬರು ಮಕ್ಕಳ ಪೈಕಿ 15 ವರ್ಷದ ಯುವಕ ತೀವ್ರವಾಗಿ ಗಾಯಗೊಂಡಿದ್ದ ಎಂದು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು (sheriff's SWAT team ) ಹೇಳಿದ್ದಾರೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾಜಿ ಸೇನಾಧಿಕಾರಿ ಅವತಾರ್ ಸಿಂಗ್ ಇದ್ದಕ್ಕಿದ್ದಂತೆ ಈ ರೀತಿ ವರ್ತಿಸಲು ಕಾರಣವೇನೆಂದು ತಿಳಿದುಬಂದಿಲ್ಲ. ಕೊಲೆಯ ಉದ್ದೇಶ ಕೂಡಾ ಸ್ಪಷ್ಟವಾಗಿಲ್ಲ. Selma police ರಿಂದ ಮಾಹಿತಿ ಪಡೆದಿರುವ Fresno County ಪೊಲೀಸ್ ಅಧಿಕಾರಿಗಳು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.
1990ರಲ್ಲಿ ಭಾರತೀಯ ಸೇನೆಯ ಮೇಜರ್ ಆಗಿದ್ದ ಸಿಂಗ್, 1996ರ ಮಾರ್ಚ್ ನಲ್ಲಿ ಮಾನವ ಹಕ್ಕುಗಳ ವಕೀಲ ಜಲೀಲ್ ಅಂದ್ರಾಬಿ ಎಂಬವರನ್ನು ಶ್ರೀನಗರದಲ್ಲಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು. (ಪಿಟಿಐ)