ರೆಡ್ಡಿ ಜಡ್ಜ್ ಪಟ್ಟಾಭಿ ಬಂಧನಕ್ಕೆ ಕಾನೂನು ತೊಡಕು

ಜಡ್ಜ್ ಪಟ್ಟಾಭಿಯನ್ನು ಬಂಧಿಸಲು ಸಿಬಿಐಯೇನೂ ಉತ್ಸುಕವಾಗಿದೆ. ಆದರೆ ಈ ನಿಟ್ಟಿನಲ್ಲಿ ಹೈಕೋರ್ಟ್ ಒಪ್ಪಿಗೆ ಕಡ್ಡಾಯ. ಇದೇ ವೇಳೆ, ನ್ಯಾಯಾಂಗಕ್ಕೆ ಸಂಬಂಧಿಸಿದವರನ್ನು ವಿಚಾರಣೆಗೊಳಪಡಿಸುವ ಅಧಿಕಾರ ಸಿಬಿಐಗೆ ಇಲ್ಲ. ಹಾಗೊಂದು ವೇಳೆ, ವಿಚಾರಣೆ ನಡೆಸಲೇಬೇಕು ಎಂದಾದಲ್ಲಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ವರ್ಗಾಯಿಸಬೇಕಾಗುತ್ತದೆ. ಹಾಗಾಗಿ, ವಿಳಂಬವಾಗುತ್ತಿದೆ.
ಆಂಧ್ರದ ಗೃಹ, ಜೈಲು ಮತ್ತು ಕಾನೂನು ರೆಡ್ಡಿ ಕಬ್ಜಾದಲ್ಲಿ: ಈ ಮಧ್ಯೆ, ಜನಾರ್ದನ ರೆಡ್ಡಿಯ ಬ್ಯಾಂಕ್ ಖಾತೆ ಹಾಗೂ ಆಸ್ತಿಗಳನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಅವರ ಖಾತೆಗಳಿಂದ ಜಡ್ಜ್ ಪಟ್ಟಾಭಿ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗಿರುವ ಸಾಧ್ಯತೆಗಳಿಲ್ಲ. ಹೀಗಾಗಿ ನ್ಯಾಯಾಧೀಶರಿಗೆ ನೀಡಿದ ಲಂಚ ಕಪ್ಪು ಹಣವೇ ಆಗಿರಬೇಕು ಎಂಬ ಅಭಿಪ್ರಾಯ ಸಿಬಿಐನಲ್ಲಿದೆ. ಇದು ಹವಾಲಾ ಜಾಲದಿಂದ ಸರಬರಾಜಾಯಿತೇ? ಎಂಬ ಪ್ರಶ್ನೆಯೂ ಸಿಬಿಐ ಲಕ್ಷಿನಾರಾಯಣ ಅವರನ್ನು ಕಾಡುತ್ತಿದೆ.
ಲಂಚ ಪ್ರಕರಣ ನಡೆಯುವುದಕ್ಕೆ ಒಂದು ತಿಂಗಳ ಮುಂಚೆಯಷ್ಟೇ ಆಂಧ್ರ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ಟಿ.ವಿ, ಚಲಪತಿರಾವ್ ಅವರು ಜಡ್ಜ್ ಪಟ್ಟಾಭಿ ಅವರನ್ನು ಪ್ರಲೋಭೆಗೆ ಒಡ್ಡಿದರು ಎನ್ನಲಾಗಿದೆ. ಇಲ್ಲಿ ನಿಮಗೊಂದು ವಿಷಯ ತಿಳಿಸಲೇಬೇಕು ಆಂಧ್ರದ ಡಿಜಿಪಿ ವಿ ದಿನೇಶ್ ರೆಡ್ಡಿ ಅವರು ಜನಾರ್ದನ ರೆಡ್ಡಿಯ ಹತ್ತಿರ ಬಂಧುವಾಗಿದ್ದರೆ ಸಚಿವ ಕಾನೂನು ಸಚಿವ ಎರಸು ಪ್ರತಾಪ್ ರೆಡ್ಡಿ ದೂರದ ಸಂಬಂಧಿ. ಅಲ್ಲಿಗೆ ಗೃಹ, ಜೈಲು ಮತ್ತು ಕಾನೂನು ರೆಡ್ಡಿ ಕಬ್ಜಾದಲ್ಲಿಯೇ ಇದೆ ಅಂದಹಾಗಾಯಿತು.
ಜಡ್ಜಿಗೇ ಲಂಚವಾ? ನೋ ಛಾನ್ಸ್: 'ಯಾರ್ರೀ ನಿಮಗೆ ಹೇಳೀದ್ದು. ಹೋಗಿ ಹೋಗಿ ನ್ಯಾಯಾಧೀಶರಿಗೇ ಲಂಚ ಕೊಡೋದಾ? ಏನು ನಮ್ಮ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಧೀಶರು ಅಷ್ಟೊಂದು ಇಳಿಜಾರಿದ್ದಾರೆ ಅಂದ್ಕೊಂಡ್ರಾ? ಏನ್ರೀ ಸುಮ್ ಸುಮ್ನೆ ಆರೋಪ ಮಾಡೋ ಮೊದಲು ಸ್ವಲ್ಪ ಯೋಚಿಸಿ ಮಾತನಾಡಿ' ಎಂದು ಸನ್ಮಾನ್ಯ ಗೋ ಸಂರಕ್ಷಕ, ಕೆಎಂಎಫ್ ಯಜಮಾನ ಸೋಮಶೇಖರ ರೆಡ್ಡಿಗಾರು ಮೊನ್ನೆ ಗುಡುಗಿದ್ದಾರೆ.
ಗೋ ಸಂರಕ್ಷಕ ಸೋಮಶೇಖರ ರೆಡ್ಡಿ ಹೇಳುತ್ತಿರುವುದರಲ್ಲಿ ಸತ್ಯಾಂಶ ಇದೆಯಾ? ಅವರನ್ನು ನೀವು ನಂಬುತ್ತೀರಾ? ಅವರು ಇನ್ನೂ ಒಂದು ವಿಷಯ ಹೇಳಿದ್ದಾರೆ. ಸಿಬಿಐ ಜಡ್ಜ್ ಯಾರೆಂದೇ ನನಗೆ ಗೊತ್ತಿಲ್ಲಪ್ಪೋ ಅಂದಿದ್ದಾರೆ.
'ಆಂಧ್ರಪ್ರದೇಶ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರ ಪರಿಚಯವಿಲ್ಲ. ಇಲ್ಲಿಯವರೆಗೂ ಯಾವೊಬ್ಬ ಸಿಬಿಐ ಅಧಿಕಾರಿಯೂ ನನ್ನನ್ನು ಸಂಪರ್ಕಿಸಿಲ್ಲ. ಜಾಮೀನು ಸಿಗೋದಕ್ಕೂ ಜಡ್ಜ್ ಪಟ್ಟಾಭಿ ಲಾಕರುಗಳಲ್ಲಿ ಹಣ ಸಿಗುವುದಕ್ಕೂ ನಮಗೆ ಸಂಬಂಧವಿಲ್ಲ. ಅದು ಕೇವಲ ಕಾಕತಾಳೀಯವಷ್ಟೆ. ವೃಥಾ ನಮ್ಮ ಮೇಲೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದೆಲ್ಲ ರಾಜಕೀಯ ಪ್ರೇರಿತ' ಎಂದು ಕೆಎಂಎಫ್ ರೆಡ್ಡಿ ಮೊನ್ನೆ ಬಳ್ಳಾರಿಯಲ್ಲಿ ಅಲವತ್ತುಕೊಂಡಿದ್ದಾರೆ.
'ಬ್ರದರ್ ಜನಾರ್ದನ ರೆಡ್ಡಿಗೆ ಜಾಮೀನು ದೊರೆತ ಸಂದರ್ಭದಲ್ಲಿ ಕೇವಲ ನಮ್ಮ ಕೇಸೊಂದೇ ನಡೆಯಲಿಲ್ಲ. ಅಂದು ಇನ್ನೂ ಕೆಲವು ಪ್ರಕರಣಗಳು ಪಟ್ಟಾಭಿ ಜಡ್ಜ್ ಮುಂದೆ ಇದ್ದವು' ಎಂದು ಲಂಚದ ಹರಿವನ್ನು ದಿಕ್ಕುತಪ್ಪಿಸಿದ್ದಾರೆ.
'ಸಹೋದರ ರೆಡ್ಡಿ ಪ್ರಕರಣದ ಸಲುವಾಗಿ ದೇಶದ ಹಿರಿಯ ನ್ಯಾಯವಾದಿಗಳ ಸಂಪರ್ಕದಲ್ಲಿದ್ದೇನೆ. ದೇಶದ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ನಮ್ಮ ಕೇಸಿನ ಪರ ವಾದಿಸದಂತೆ ಬಿಜೆಪಿಯ ಅಧಿನಾಯಕರೊಬ್ಬರು ಅಡ್ಡಿಪಡಿಸಿದ್ದರು. ಸಾಕಷ್ಟು ಬಾರಿ ಮನವಿ ಮಾಡಿಕೊಂಡ ಮೇಲೆ ಜೇಠ್ಮಲಾನಿ ವಾದ ಮಾಡಲು ಒಪ್ಪಿಕೊಂಡಿದ್ದಾರೆ. ಜಾಮೀನು ಕುರಿತಾಗಿ ಕೊಲ್ಕತಾ, ದೆಹಲಿ ನ್ಯಾಯವಾದಿಗಳೊಂದಿಗೆ ಚರ್ಚಿಸಿದ್ದೇನೆ' ಎಂದೂ ಅವರು ಹೇಳಿದ್ದಾರೆ.
ತಾನು ಆಂಜನೇಯನ ಪರಮಭಕ್ತನಾಗಿದ್ದು, ತಮ್ಮನ ಸಲುವಾಗಿ ಪ್ರಾಣ ತ್ಯಾಗ ಮಾಡಲೂ ಸಿದ್ಧನಿದ್ದೇನೆ ಎಂದು ಸೋಮಶೇಖರ ರೆಡ್ಡಿ ಕಂಬನಿ ಮಿಡಿದರು.












Click it and Unblock the Notifications