ಸಿಟಿ ರವಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಆದಾಯ ತೆರಿಗೆ ಆಯುಕ್ತ ಪಳನಿವೇಲು ರಾಜು ನೇತೃತ್ವದಲ್ಲಿ ಏಕಕಾಲಕ್ಕೆ ಈ ದಾಳಿಗಳು ನಡೆಯುತ್ತಿವೆ. ನಾಲ್ಕಾರು ತಂಡಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ಈ ದಾಳಿ ನಡೆಸಿದ್ದಾರೆ.
ಆದರೆ 2009ರಲ್ಲಿ ಕೇವಲ 1.5 ಕೋಟಿ ರೂ. ಆಸ್ತಿವಂತರಾಗಿದ್ದ ಸಿಟಿ ರವಿ ಈಗ 60 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಸಿ ಕುಮಾರ್ ಎಂಬುವವರು ದೂರಿದ್ದಾರೆ.
ಶಾಸಕ ರವಿ ಪ್ರತಿಕ್ರಿಯೆ: 'ತಮ್ಮ ಬಾಡಿಗೆ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ನೇರವಾಗಿ ನನ್ನ ಮನೆಗಳ ಮೇಲೆ ದಾಳಿ ನಡೆದಿಲ್ಲ. ಬಾಡಿಗೆ ಮನೆಗಳಲ್ಲಿರುವವರನ್ನೂ ವಿಚಾರಿಸಿದ್ದೇನೆ. ಏನೂ ಸಮಸ್ಯೆಯಿಲ್ಲ ಎಂದಿದ್ದಾರೆ. ಇನ್ನು ಐಟಿ ಅಧಿಕಾರಿಗಳು ಇದುವರೆಗೆ ನನ್ನನ್ನೇನೂ ಸಂಪರ್ಕಿಸಿಲ್ಲ. ದಾಳಿಯಿಂದ ನಾನಂತೂ ವಿಚಲಿತನಾಗಿಲ್ಲ' ಎಂದು ಶಾಸಕ ರವಿ ಅವರು ಎಂದಿನಂತೆ ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕನಕರಾಜು ಅವರ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಬಿಜೆಪಿ ಮುಖಂಡ ಸುದರ್ಶನ್ ಅವರ ಫಾರಂ ಹೌಸ್ ಅವರ ಮೇಲೂ ಈ ದಾಳಿ ನಡೆದಿದೆ. ಶಾಸಕ ಸಿಟಿ ರವಿಗೆ ಸೇರಿದ ಚಿಕ್ಕಮಗಳೂರು ಹೊರವಲಯ ಆಲೇನಹಳ್ಳಿಯಲ್ಲಿರುವ ಫಾರಂ ಹೌಸ್ ಮೇಲೂ ದಾಳಿ ನಡೆಸಲಾಗಿದೆ.
ರವಿ ಅವರ ಆಪ್ತರಾದ ಕೇಶವರಾಜು, ಕೋಟೆ ಅನಿಲ್, ನಗರ ಸಭೆ ಸದಸ್ಯ ರಾಜಪ್ಪ ಮನೆಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಜೀವಮಾನದಲ್ಲಿ ಒಮ್ಮೆಯಾದರೂ ಮಂತ್ರಿ ಅನ್ನಿಸಿಕೊಳ್ಳಬೇಕು ಎಂಬ ಹಪಹಪಿಗೆ ಬಿದ್ದಿರುವ ಶಾಸಕ ಸಿಟಿ ರವಿ ಮತ್ತು ಅವರ ಪತ್ನಿಗೆ ಇತ್ತೀಚೆಗೆ ಭೂಹಗರಣಗಳು ಸುತ್ತಿಕೊಂಡಿವೆ