ಗಡ್ಕರಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ ಆಡ್ವಾಣಿ

ಬಿಜೆಪಿ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಪಕ್ಷದೊಳಗಿನ ಮನಸ್ಥಿತಿ ಉತ್ತೇಜನಕಾರಿಯಾಗಿಲ್ಲ. ಕರ್ನಾಟಕ ಮತ್ತು ಜಾರ್ಖಂಡ್ ನಲ್ಲಿ ಪಕ್ಷದ ಬಿಕ್ಕಟ್ಟನ್ನು ಪರಿಹರಿಸಿದ ಬಗ್ಗೆ ಪ್ರಶ್ತ್ನಿಸಿದ ಆಡ್ವಾಣಿ, ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಪಕ್ಷದ ನಾಯಕರನ್ನು ಎಚ್ಚರಿಸಿದ್ದಾರೆ.
ಮುಂಬೈ ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೂಡಾ ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದ ಆಡ್ವಾಣಿ ಇಂದು ತನ್ನ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಜನರಿಗೆ ಯುಪಿಎ ಸರಕಾರದ ಮೇಲೆ ನಂಬಿಕೆಯಿಲ್ಲ. ನಾವು ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಡದೇ ಇದ್ದ ಪಕ್ಷದಲ್ಲಿ ನಮ್ಮನ್ನೂ ಜನ ತಿರಸ್ಕರಿಸುವ ದಿನ ದೂರವಿಲ್ಲ ಎಂದು ಆಡ್ವಾಣಿ ತನ್ನ ಬ್ಲಾಗಿನಲ್ಲಿ ಲೇಖನದ ಮೂಲಕ ಹೇಳಿದ್ದಾರೆ.
ನಾವು ಕೇಂದ್ರದ ವಿರುದ್ದ ಹೋರಾಡುವುದು ಅದು ನಡೆಸಿದ ಮತ್ತು ನಡೆಸುತ್ತಿರುವ ಭ್ರಷ್ಟಾಚಾರ ಬಗ್ಗೆ. ಹೀಗಿರುವಾಗ ನಾವು ನಮ್ಮ ಪಕ್ಷದೊಳಗೆ ಕೂಡಾ ಇದರ ವಿರುದ್ದ ಕಟ್ಟುನಿಟ್ಟಾಗಿ ಇರಬೇಕಾಗುತ್ತದೆ. ಇಲ್ಲವೆಂದರೆ ಯಾರ ವಿರುದ್ದ ಹೋರಾಡುವುದಕ್ಕೂ ನಮಗೆ ನೈತಿಕತೆ ಇರುವುದಿಲ್ಲ ಎನ್ನುವುದನ್ನು ನಮ್ಮ ಎಲ್ಲಾ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದು ಎಂದು ಆಡ್ವಾಣಿ ಪರೋಕ್ಷವಾಗಿ ಗಡ್ಕರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಪಕ್ಷ ತೆಗೆದುಕೊಂಡ ನಿರ್ಧಾರದ ಬಗ್ಗೆ ಆಡ್ವಾಣಿ ನೋವು ವ್ಯಕ್ತ ಪಡಿಸಿದ್ದಾರೆ. ಕಳಂಕಿತ ಬಿಎಸ್ಪಿ ಶಾಸಕನನ್ನು ಪಕ್ಷಕ್ಕೆ ಸೇರಿಸಿದ್ದು ಸರಿಯಾದ ನಿರ್ಧಾರವಲ್ಲ ಎಂದು ಜರಿದಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೆಟ್ಲೆ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ನಿತಿನ್ ಗಡ್ಕರಿ ಅವರನ್ನು ಎರಡನೇ ಅವಧಿಗೆ ಅಧ್ಯಕ್ಷರನ್ನಾಗಿ ನೇಮಿಸುವುದಕ್ಕೂ ಆಡ್ವಾಣಿ ತಮ್ಮ ಸಹಮತ ಸೂಚಿಸಿರಲಿಲ್ಲ. ಅಲ್ಲದೆ ನರೇಂದ್ರ ಮೊದಿಯವರನ್ನೂ ಪ್ರಧಾನಮಂತ್ರಿ ಅಬ್ಯಾರ್ಥಿಯನ್ನಾಗಿ ಘೋಷಿಸಬೇಕೆನ್ನುವ ಯಡಿಯೂರಪ್ಪ ಅವರ ಹೇಳಿಕೆ ಕೂಡಾ ಅವರಿಗೆ ಘಾಶಿಯನ್ನುಂಟುಮಾಡಿತ್ತು ಎನ್ನಲಾಗಿದೆ.
ಆಡ್ವಾಣಿಯವರ ಈ ಹೇಳಿಕೆ ಪಕ್ಷದೊಳಗೆ ಯಾವ ರೀತಿಯ ಬಿರುಗಾಳಿ ಎಬ್ಬಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications