ಗೌಡನ ಕೊಚ್ಚಿದ್ದ ರಮ್ಯಾ ಕೊನೆಗೂ ಸಿಕ್ಕಿದ್ಲಪ್ಪ

Kamakshipalya Murder Case
ಬೆಂಗಳೂರು, ಮೇ.30: ಕಳೆದ ಒಂದೂವರೆ ವರ್ಷದ ಹಿಂದೆ ಕಾವೇರಿಪುರಂನ ಮೋರಿಯಲ್ಲಿ ಐದು ಚೀಲಗಳಲ್ಲಿ ವ್ಯಕ್ತಿಯೊಬ್ಬರ ಕೊಳತೆ ದೇಹದ ತುಂಡುಗಳು ಸಿಕ್ಕಿದ್ದನ್ನು ಕಂಡು ಕಾಮಾಕ್ಷಿಪಾಳ್ಯ ಅಷ್ಟೇ ಅಲ್ಲದೆ ಇಡೀ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿತ್ತು. ಈ ರೀತಿ ಭಯಾನಕ ಕೊಲೆಯ ಹಿಂದಿನ ವಿಕೃತ ಪಾತಕಿಗಳನ್ನು ಕೊನೆಗೂ ಹುಡುಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೈ ಹಿಡಿದ ಗಂಡನಿಗೆ ಮುದ್ದೆಯಲ್ಲಿ ವಿಷ ಬೆರೆಸಿ ಕೊಂದಿದ್ದಲ್ಲದೆ ಶವವನ್ನು 30 ರಿಂದ 40 ತುಂಡುಗಳಾಗುವಂತೆ ಕತ್ತರಿಸಿ ಐದಾರು ಚೀಲಕ್ಕೆ ತುಂಬಿಸಿದ್ದ ಮಾಯಾಂಗನೆ ರಮ್ಯಾಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ನಟಿ ಮೋನಿಜಾ ಮರಿಯಾ ಸೂಸೈರಾಜ್ ಮಾಡಿದ ಪಾತಕವನ್ನು ನೆನೆಪಿಸುವಂತಿರುವ ಈ ಪ್ರಕರಣದ ಕಥೆ ಇಲ್ಲಿದೆ...

ಮೂಲತಃ ಕುಣಿಗಲ್ ಸಮೀಪದ ಗ್ರಾಮವೊಂದರಿಂದ ಬೆಂಗಳೂರಿಗೆ ಬಂದಿದ್ದ ಕೆಂಪೇಗೌಡ(30) ಹಾಗೂ ರಮ್ಯಾ, ಕಾಮಾಕ್ಷಿಪಾಳ್ಯದ ಕಾವೇರಿಪುರಂನಲ್ಲಿ ಮನೆ ಮಾಡಿದ್ದಳು. ಸ್ವಂತ ಅಕ್ಕನ ಮಗಳು ರಮ್ಯಾಳನ್ನು ಮದುವೆಯಾಗಿದ್ದ ಕೆಂಪೇಗೌಡ, ಆಕೆ ಹೆಸರಿನಲ್ಲೇ ಗಾರ್ಮೆಂಟ್ ಫ್ಯಾಕ್ಟರಿ ಆರಂಭಿಸಿದ್ದ. ಸುಮಾರು 40 ಜನರಿಗೆ ಉದ್ಯೋಗ ನೀಡಿದ್ದ ಕೆಂಪೇಗೌಡನ ಕಣ್ಣಲ್ಲಿ ಸುಖಿ ಸಂಸಾರದ ಕನಸು ತುಂಬಿಕೊಂಡಿತ್ತು.

ಆದರೆ, ಸೋದರ ಮಾವ ಕೆಂಪೇಗೌಡನ ಪ್ರೀತಿಗೆ ದ್ರೋಹ ಬಗೆದ ಸುಂದರಿ ರಮ್ಯಾ ಕಂಗಳು ಬೇರೊಬ್ಬನನ್ನು ಹುಡುಕುತ್ತಿತ್ತು. ಆತನ ಹೆಸರೇ ಬಾಬುಸ್ವಾಮಿ. ಕೆಂಪೇಗೌಡನ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕಿದ್ದ ಬಾಬುಸ್ವಾಮಿಯ ಮೇಲೆ ರಮ್ಯಾಳಿಗೆ ಮೋಹ ಉಂಟಾಗಿದೆ.

ಅನೈತಿಕ ವ್ಯವಹಾರದಲ್ಲಿ ಭಾಗಿಯಾಗಿದ್ದ ಬಾಬುಸ್ವಾಮಿಗೇನು ಕಮ್ಮಿ ವಯಸ್ಸಾಗಿಲ್ಲ. ಸರಿಯಾಗಿ ಲೆಕ್ಕ ಹಾಕಿದರೆ 50ದಾಟುತ್ತದೆ. ಬುದ್ಧಿ ಬೆಳೆಯದ ಯುವತಿ ರಮ್ಯಾಳಿಗೆ ಅದೇನು ಮೋಡಿ ಮಾಡಿದನೋ ಗೊತ್ತಿಲ್ಲ. ಇಬ್ಬರು ಸೇರಿ ಕೆಂಪೇಗೌಡನ ಹತ್ಯೆಗೆ ಭಯಾನಕ ಸಂಚು ರೂಪಿಸಿಬಿಟ್ಟರು.

ಮುದ್ದೆ ತಿಂದು ಶಾಶ್ವತ ನಿದ್ದೆ ಮಾಡಿದ ಗೌಡ: 2010ರ ನವೆಂಬರ್ ತಿಂಗಳಿನ ೨೧ನೇ ತಾರಿಖಿನ ರಾತ್ರಿ ಕೆಂಪೇಗೌಡನ ಅಂತ್ಯ ಎಂದು ರಮ್ಯಾ ನಿರ್ಧರಿಸಿದ್ದಳು. ದಣಿದು ಬಂದ ಗಂಡನಿಗೆ ಪ್ರೀತಿಯಿಂದ ಊಟ ಬಡಿಸಿದ ರಮ್ಯಾಳನ್ನು ಕಂಡ ಕೆಂಪೇಗೌಡನಿಗೆ ತನ್ನ ಪತ್ನಿ ಮೇಲೆ ಎಳ್ಳಷ್ಟು ಶಂಕೆ ಇರಲಿಲ್ಲ.

ಗೌಡ ಇಷ್ಟಪಟ್ಟು ಉಣ್ಣುವ ಮುದ್ದೆಯಲ್ಲಿ ವಿಷ ಬೆರೆಸಿದ್ದ ರಮ್ಯಾ, ಗಂಡ ಸಾವನ್ನು ಆಸೆ ಕಂಗಳಿನಿಂದ ನೋಡತೊಡಗಿದ್ದಳು. ಒಂದೆರಡು ಬಾರಿ ಮುದ್ದೆಯನ್ನು ನುಂಗಿದ ಕೆಂಪೇಗೌಡನಿಗೆ ಯಾಕೋ ಅನುಮಾನ ಬಂದು ಮುದ್ದೆಯನ್ನು ಬದಿಗೊತ್ತಿಬಿಟ್ಟ. ಆದರೆ, ಪಾತಕಿ ರಮ್ಯಾ, ಅನ್ನಕ್ಕೂ ವಿಷ ಬೆರೆಸಿ ಕೆಂಪೇಗೌಡನಿಗೆ ತಿನ್ನಿಸಿಬಿಟ್ಟಳು. ಊಟ ಮುಗಿದು ಕೈತೊಳೆಯುತ್ತಿದ್ದಂತೆ ಕೆಂಪೇಗೌಡನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಪ್ರಣಯ ಪಕ್ಷಿಗಳು ಸಂತಸದಿಂದ ಬೀಗತೊಡಗಿದ್ದವು.

ನಂತರ ಬಾಬುಸ್ವಾಮಿ ಕೊಟ್ಟ ಹರಿತವಾದ ಚಾಕು ತೆಗೆದುಕೊಂಡು ಮಾಂಸದ ತುಂಡು ಕತ್ತರಿಸುವಂತೆ ಕೆಂಪೇಗೌಡನ ದೇಹವನ್ನು ೩೦ಕ್ಕೂ ಅಧಿಕ ತುಂಡುಗಳನ್ನಾಗಿ ಮಾಡಲಾಯಿತು. ನಂತರ ದೇಹದ ತುಂಡುಗಳನ್ನು ಐದು ಗೋಣಿ ಚೀಲದಲ್ಲಿ ತುಂಬಿಸಿ ಹಂತ ಹಂತವಾಗಿ ಕಾವೇರಿಪುರಂನ ರಾಜಾ ಕಾಲುವೆಗೆ ಎಸೆಯಲಾಯಿತು.

ಐನಾತಿ ರಮ್ಯಾ: ಇಷ್ಟಕ್ಕೆ ಸುಮ್ಮನಾಗದ ರಮ್ಯಾ ಕೊಲೆ ನಡೆದ ಎರಡು ದಿನ ಬಿಟ್ಟು ಪೊಲೀಸರ ಮುಂದೆ ಕೂತು ಕಣ್ಣೀರು ಸುರಿಸಿ, ನನ್ನ ಗಂಡನ ಹುಡುಕಿ ಕೊಡಿ ಎಂದು ನಾಟಕವಾಡತೊಡಗಿದಳು.

ಪ್ರಕರಣ ಕೈಗೆತ್ತಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಒಂದು ವಾರದೊಳಗೆ ಕೆಂಪೇಗೌಡನ ಶವವಿದ್ದ ಮೂಟೆಯನ್ನು ರಮ್ಯಾಳ ಮುಂದಿಟ್ಟು ಗುರುತಿಸುವಂತೆ ಕೇಳಿದರು. ಆದರೆ, ಹಂತಕಿ ರಮ್ಯಾ ಇದು ನನ್ನ ಪತಿಯ ಶವವಲ್ಲ. ಎಂದು ತನಿಖೆಗೆ ಬೇರೆ ದಿಕ್ಕಿಗೆ ತಿರುಗುವಂತೆ ಮಾಡಿಬಿಟ್ಟಳು.

ಕೆಂಪೇಗೌಡ ಪ್ರಕರಣವನ್ನು ಹೈಕೋರ್ಟಿಗೆ ತೆಗೆದುಕೊಂಡು ಹೋದ ರಮ್ಯಾ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದಳು. ರಮ್ಯಾ ಕಣ್ಣೀರಿಗೆ ಬೆಲೆ ಕೊಟ್ಟ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿ ಪ್ರಕರಣವನ್ನು ಬೇಗ ಇತ್ಯರ್ಥಗೊಳಿಸುವಂತೆ ಆದೇಶಿಸಿತ್ತು.

ಈ ಸಂಬಂಧ ತನಿಖೆ ಮುಂದುವರೆಸಿದ ಪೊಲೀಸರ ಕಣ್ಣಿಗೆ ಬಾಬುಸ್ವಾಮಿ ಬಿದ್ದಿದ್ದಾನೆ. ಆತನನ್ನು ವಿಚಾರಣೆ ಒಳಪಡಿಸಿದ ಮೇಲೆ ಸತ್ಯ ಹೊರಬಿದ್ದಿದೆ. ಪತಿ ಕೆಂಪೆಗೌಡಯನ್ನು ಭೀಕರವಾಗಿ ಹತ್ಯೆಗೈದ ಪತ್ನಿ ರಮ್ಯಾಳಿಗೆ ಸಹಾಯ ಮಾಡಿದ್ದನ್ನು ಬಾಬುಸ್ವಾಮಿ ಒಪ್ಪಿಕೊಂಡ ಮೇಲೆ ರಮ್ಯಾಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ವಿಚಾರಣೆ ವೇಳೆ ರಮ್ಯಾ ಹೇಳಿದ ಕಥೆಯೇ ಬೇರೆ. ಕೆಂಪೇಗೌಡನ ಕತೆ ಮುಂದೆ ನಿರೀಕ್ಷಿಸಿ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+