ಸರಕಾರದ ವಶಕ್ಕೆ15ನೇ ಶತಮಾನದ ವ್ಯಾಸರಾಜ ಮಠ

ವಿದ್ಯಾಮನೋಹರ ತೀರ್ಥ ಸ್ವಾಮೀಜಿಯವರು ಮಠದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಅಲ್ಲದೆ ಭಕ್ತರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಈ ಕ್ರಮ ಕೈಗೊಂಡಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ವಾಮೀಜಿಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಮಠದ ಆಸ್ತಿಯನ್ನು ಸ್ವಾಮೀಜಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಈ ಹಿಂದೆ ಕೂಡ ಬಂದಿತ್ತು. ಕೃಷ್ಣಮೂರ್ತಿಪುರಂನ ವ್ಯಾಸರಾಜ ಮಠಕ್ಕೆ ಸೇರಿದ ಕಲ್ಯಾಣ ಮಂಟಪ, ಕೊಠಡಿಗಳು, ಕಚೇರಿ ಮತ್ತು ವಿದ್ಯಾಮನೋಹರ ತೀರ್ಥ ಸ್ವಾಮೀಜಿ ವಾಸ್ತವ್ಯದ ಮನೆ ಮೇಲೆ ಬೆಳಿಗ್ಗೆ ಮುಜರಾಯಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಕೊಠಡಿ ಮತ್ತು ಕಚೇರಿಗೆ ಬೀಗಮುದ್ರೆ ಹಾಕಿದ್ದಾರೆ. ಮಠದ ಆವರಣದಲ್ಲಿ ವಾಸವಿರುವ ಕುಟುಂಬದ ಸದಸ್ಯರಿಂದ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ. ಕಲ್ಯಾಣಮಂಟಪ ಮತ್ತು ಸ್ವಾಮೀಜಿ ವಾಸ್ತವ್ಯದ ಮನೆ ಹೊರತುಪಡಿಸಿ ಉಳಿದವುಗಳಿಗೆ ಬೀಗಮುದ್ರೆ ಹಾಕಲಾಯಿತು.
ಈಗ ಸರಕಾರದಿಂದ ಆಡಳಿತಾಧಿಕಾರಿ ಸರಕಾರ ನೇಮಿಸಿದ್ದು ಇನ್ನು ಮುಂದೆ ಯಾವುದೇ ಕಾರ್ಯಗಳು ನಡೆಯಬೇಕಾದರೂ ಸರಕಾರದ ಆದೇಶದಂತೆ ನಡೆಯಬೇಕಾಗಿದೆ. ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್ ಆದೇಶದಂತೆ ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಠಕ್ಕೆ ಸೇರಿದ ಎರಡು ಚಿನ್ನದ ತಟ್ಟೆಯನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸ್ವಾಮೀಜಿಗಳು ಅಡವಿಟ್ಟು ರೂ 5 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಅಲ್ಲದೆ ಮಠಕ್ಕೆ ಸೇರಿದ ಕಲ್ಯಾಣ ಮಂಟಪ ನವೀಕರಣ ಮಾಡುವ ಸಲುವಾಗಿ ಖಾಸಗಿ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ಬಗ್ಗೆ ಕೂಡಾ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯಲ್ಲಿರುವ ಸೋಸಲೆ ವ್ಯಾಸರಾಜ ಮಠದ ಆಸ್ತಿಯನ್ನು ಕೂಡಾ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ.












Click it and Unblock the Notifications