ಮುಂಬೈಗೆ ಯಡಿಯೂರಪ್ಪ ಹೋಗಿದ್ದಾದರೂ ಏಕೆ?

ಇದಕ್ಕೆ ನಿಜವಾದ ಕಾರಣ ಬಿಜೆಪಿ ರಾಷ್ಟ್ರೀಯ ನಾಯಕರೊಡನೆ ಮತ್ತೆ ಗೆಳೆತನದ ತ್ಯಾಪೆ ಹಚ್ಚಲಿಕ್ಕೂ ಅಲ್ಲ, ತಾನಿನ್ನೂ ಬಿಜೆಪಿಯಲ್ಲಿದ್ದೇನೆ ಪಕ್ಷ ತೊರೆಯುವುದಿಲ್ಲ ಎಂಬ ಅಂಶವನ್ನು ಸಾರಲಿಕ್ಕೂ ಅಲ್ಲ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತನಾಗುವ ಭೀತಿಯಿಂದ ಬಚಾವಾಗಲು ಮುಂಬೈಗೆ ತೆರಳಿದ್ದು ಎಂದು ಬಿಜೆಪಿ ಆಂತರಿಕ ಮೂಲಗಳು ಪಿಸುಗುಡುತ್ತಿವೆ.
ಮೇ 25ರಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಸಿಬಿಐ ಅವರ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದೆ. ಯಡಿಯೂರಪ್ಪ ಅತ್ಯಂತ ಪ್ರಭಾವಿ ನಾಯಕನಾಗಿದ್ದು, ಸೂಕ್ತವಾದ ರೀತಿಯಲ್ಲಿ ತನಿಖೆಯಾಗಬೇಕಾದರೆ ಅವರನ್ನು ವಶಕ್ಕೆ ತೆಗೆದುಕೊಂಡೇ ವಿಚಾರಣೆ ನಡೆಸಬೇಕು ಎಂಬ ವಾದವನ್ನು ಸಿಬಿಐ ವಕೀಲರು ಮುಂದಿಟ್ಟಿದ್ದಾರೆ.
ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಸಿಬಿಐ ವಕೀಲರು ವಾದಿಸಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ವಿಚಾರಣೆಯನ್ನು ತೀವ್ರಗತಿಯಲ್ಲಿ ಮಾಡಿ ಜೂನ್ 3ರೊಳಗೆ ಸುಪ್ರೀ ಕೋರ್ಟಿಗೆ ವರದಿ ಸಲ್ಲಿಸಬೇಕಾಗಿರುವುದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಲಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಸಿಬಿಐ ವಿಚಾರಣೆಗಾಗಿ ತನ್ನ ವಶಕ್ಕೆ ತೆಗೆದುಕೊಳ್ಳುವ ಎಲ್ಲ ಲಕ್ಷಣಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಬಂಧನ ತಪ್ಪಿಸಲೆಂದೇ ಅವರು ಮುಂಬೈಗೆ ಹಾರಿದ್ದರೆಂದು ಮಾತುಗಳ ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಯಡಿಯೂರಪ್ಪನವರು ಗುಟ್ಟಾಗಿ ಭೇಟಿಯಾಗಿ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ಭಾಗವಹಿಸುವಿಕೆಯಿಂದಾಗಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರು ಮುಂಬೈ ಸಭೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿದ್ದರೆಂದು ಇಲ್ಲಿ ಸ್ಮರಿಸಬಹುದು.












Click it and Unblock the Notifications