ಮುತ್ತತ್ತಿಯಲ್ಲಿ ನಾಪತ್ತೆಯಾಗಿದ್ದ ವಿದೇಶಿಯರ ಶವ ಪತ್ತೆ
ಮಂಡ್ಯ ಜಿಲ್ಲೆ ಮಳವಳ್ಳಿಯ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರವಾಸಿ ತಾಣವಾಗಿರುವ ಮುತ್ತತ್ತಿಯ ಭೀಮೇಶ್ವರಿಯಲ್ಲಿ ವಿದೇಶೀ ಪ್ರಜೆಗಳಾದ ಇಯನ್ ಟೋರ್ಟಾನ್ ಮತ್ತು ಮೈಕೆಲ್ ಈಸ್ಟನ್ ಬೋಟಿಂಗ್ ನಡೆಸಲು ನೀರಿಗೆ ಇಳಿದಿದ್ದರು. ಡೆಂಕಣಿಕೋಟೆಗೆ ಬರುವೆವೆಂದು ಹೇಳಿ ತಾವು ಬಂದಿದ್ದ ವಾಹನವನ್ನ ಡೆಂಕಣಿಕೋಟೆಗೆ ಕಳುಹಿಸಿದ್ದರು. ನಂತರ ಇದ್ದಕ್ಕಿದ್ದಂತೆ ಇಬ್ಬರೂ ಕಣ್ಮರೆಯಾದರು.
ನಾಲ್ಕು ದಿನವಾದರೂ ವಿದೇಶೀ ಪ್ರಜೆಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲೆಂಡ್ ಮತ್ತು ಬ್ರಿಟನ್ ಸರ್ಕಾರಗಳು ಭಾರತೀಯ ರಾಯಭಾರಿ ಕಚೇರಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕಿಸಿದ್ದವು. ಈ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಆಂಧ್ರದಿಂದ ಆಗಮಿಸಿದ್ದ ಎಸ್.ಟಿ.ಎಫ್ನ ವಿಶೇಷ ತಂಡಗಳು ಸೇರಿದಂತೆ ಸುಮಾರು 500 ತಜ್ಞ ಈಡುಪಟುಗಳು ಶವಶೋಧನೆ ಕಾರ್ಯದಲ್ಲಿ ತೊಡಗಿದ್ದರು.
ಕಳೆದ ಮೂರು ದಿನಗಳಿಂದ ಚೆನ್ನೈನ ಟೆನ್ನೆಕೊ ಕಂಪನಿ ಹೆಲಿಕಾಫ್ಟರ್ ಮೂಲಕ ಬೋಟ್ ಪತ್ತೆ ಕಾರ್ಯವನ್ನು ನಡೆಸಲಾಗಿತ್ತು. ಗುರುವಾರ ಬೆಳಿಗ್ಗೆ ಕನಕಪುರ ತಾಲೂಕಿನಲ್ಲಿರುವ ಸಂಗಮದಲ್ಲಿ ಬೋಟ್ ಪತ್ತೆಯಾಗಿತ್ತು. ಶುಕ್ರವಾರ ಬೆಳಿಗ್ಗೆ ಪೋಲೆಂಡ್ ದೇಶದ ಚೆನ್ನೈ ಮೂಲದ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಇಯಾನ್ ಟೋರ್ಟಾನ್ನ ಶವ ಪತ್ತೆಯಾಗಿತ್ತು. ಆಳವಾದ ಮತ್ತು ಹರಿತವಾದ ಬಂಡೆಗಳಿರುವ ಹನ್ನೆರಡು ಚಕ್ರ ಎಂಬ ಸ್ಥಳದಲ್ಲಿ ಸಿಕ್ಕ ಶವ ಸಂಪೂರ್ಣ ವಿಕಾರಗೊಂಡಿತ್ತು. ನಿರಂತರ ಹುಡುಕಾಟ ನಡೆಸಿದ್ದರ ಫಲವಾಗಿ ಶುಕ್ರವಾರ ಸಂಜೆ 5 ಗಂಟೆ ಹೊತ್ತಿಗೆ ಬ್ರಿಟನ್ ದೇಶದ ಪ್ರಜೆ ಮೈಕೆಲ್ ಈಸ್ಟನ್ನ ಶವವೂ ಪತ್ತೆಯಾಯಿತು.
ಇಬ್ಬರು ವಿದೇಶಿಯರು ಸಾಹಸ ಪ್ರವೃತ್ತಿಯವರಾಗಿದ್ದರು. ಮುತ್ತತ್ತಿ ಕಾವೇರಿ ನದಿಯಲ್ಲಿ ಕೈಗೊಂಡಂತಹ ಅನೇಕ ಸಾಹಸಗಳಲ್ಲಿ ಅವರು ಹಿಂದೆ ಪಾಲ್ಗೊಂಡಿದ್ದರು. ತಮ್ಮ ಸಾಹಸ ಪ್ರದರ್ಶನದಿಂದ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಆದರೆ, ಮುತ್ತತ್ತಿಯಲ್ಲಿ ಅವರು ಸಾಹಸ ಪ್ರವೃತ್ತಿಯೇ ಅವರು ಜೀವಕ್ಕೆ ಎರವಾಗಿದೆ. ಮುತ್ತತ್ತಿಯ ಕಾವೇರಿ ನದಿಯಲ್ಲಿ ಹಿಂದೆ ಕೂಡ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದರೂ ಇವರಿಗೆ ನೀರಲ್ಲಿ ಸಾಹಸ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ನಿಜಕ್ಕೂ ದುರದೃಷ್ಟದ ಸಂಗತಿ.
ಕಳೆದ ತಿಂಗಳೂ ಜೈನ್ ಇಂಟರ್ನ್ಯಾಷನಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ನೀರು ಪಾಲಾಗಿದ್ದರು. ಮತ್ತೊಬ್ಬ ಗುಲ್ಬರ್ಗಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ವಿವೇಕಾನಂದನ ಶವ ಪತ್ತೆಯಾಗಲೇ ಇಲ್ಲ. ಅಷ್ಟಕ್ಕೆ ಪೊಲೀಸರು ಕೈತೊಳೆದುಕೊಂಡುಬಿಟ್ಟರು. ಆದರೆ ವಿದೇಶೀ ಪ್ರಜೆಗಳು ಎಂದಾಕ್ಷಣ ರಾಯಭಾರಿ ಕಛೇರಿಗಳಿಂದ ಬಂದ ಒತ್ತಡಕ್ಕೆ ಮಣಿದು ಹಗಲಿರುಳು ನೂರಾರು ಮಂದಿ ಶೋಧಕಾರ್ಯ ನಡೆಸಿ ಎರಡೇ ಮೂರೇ ದಿನಗಳಲ್ಲಿ ಶವವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.