ಸಿಬಿಐ ವಶದಲ್ಲಿ ಜಗನ್ ರೆಡ್ಡಿ, ವಿಚಾರಣೆ ಶುರು
ಟಿವಿ ಮಾಧ್ಯಮಗಳ ವರದಿಯಂತೆ ಜಗನ್ ರೆಡ್ಡಿಯನ್ನು ದಿಲ್ ಖುಷ್ ಗೆಸ್ಟ್ ಹೌಸ್ ನಲ್ಲಿ ಇರಿಸಲಾಗಿದೆ. ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ನೇತೃತ್ವದ ತಂಡ ತಮ್ಮ ಪ್ರಶ್ನೆಗಳ ಸರಮಾಲೆಯೊಂದಿಗೆ ಜಗನ್ ಮುಂದೆ ಕೂತಿದೆ.
ಆಂಧ್ರಪ್ರದೇಶ ಸರ್ಕಾರ ಮಾಜಿ ವಿಶೇಷ ಕಾರ್ಯದರ್ಶಿ ಕೆವಿ ಬ್ರಹ್ಮಾನಂದ ರೆಡ್ಡಿ ಹಾಗೂ ಮ್ಯಾಟ್ರಿಕ್ಸ್ ಲ್ಯಾಬ್ಸ್ ಸ್ಥಾಪಕ ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರನ್ನು ಒಂದೆಡೆ ಸೇರಿಸಿ ಒಟ್ಟಿಗೆ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..
ಇದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸಿದ್ದ ಜಗನ್,ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದರು. ಆದರೆ, ಅರ್ಜಿ ತಿರಸ್ಕರಿಸಿದ ಕೋರ್ಟ್, ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಸಿಬಿಐ ನ್ಯಾಯಾಲಯಕ್ಕೆ ಮೇ.25ರಂದು ಜಗನ್ ಹಾಜರಾಗುತ್ತಿದ್ದಂತೆ ಜಗನ್ ಬಂಧಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ ನಾಂಪಲ್ಲಿ ಕೋರ್ಟ್ ನಿಂದ ಮೂರು ಕಿ.ಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಜಗನ್ ರನ್ನು ಸದ್ಯಕ್ಕೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಸಿಬಿಐ ತಂಡ ಬಂಧನದ ಬಗ್ಗೆ ಇನ್ನೂ ಯಾವುದೇ ವಿಷಯ ಹೊರಹಾಕಿಲ್ಲ. ವಿಚಾರಣೆ ನಂತರ ಬಂಧಿಸಿ, ಚಂಚಲಗೂಡ ಜೈಲಿಗೆ ಕಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಜಗನ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಹಾಲಿ ಅಬಕಾರಿ ಸಚಿವ ಮೋಪಿದೇವಿ ವೆಂಕಟರಮಣ ಅವರನ್ನು ಗುರುವಾರ(ಮೇ.24) ಬಂಧಿಸಲಾಗಿತ್ತು. ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಾರು 7 ಗಂಟೆಗಳ ಕಾಲ ವೆಂಕಟರಮಣ ಅವರ ವಿಚಾರಣೆ ನಡೆಸಲಾಯಿತು.
ವೈಎಸ್ ರಾಜಶೇಖರ ರೆಡ್ಡಿ ಕಾಲದಲ್ಲಿ ಮೂಲ ಸೌಕರ್ಯ ಹಾಗೂ ಬಂಡವಾಳ ಹೂಡಿಕೆ ಸಚಿವರಾಗಿದ್ದ ವೆಂಕಟರಮಣ ಅವರು ನಿಮ್ಮಗಡ್ಡ ಪ್ರಸಾದ್ ಅವರ ನೇತೃತ್ವದ VANPIC ಕೈಗಾರಿಕಾ ಕಾರಿಡರ್ ಯೋಜನೆಗೆ ಸುಮಾರು 15000 ಎಕರೆ ಭೂಮಿ ಮಂಜೂರು ಮಾಡಿದ ಆರೋಪ ಎದುರಿಸುತ್ತಿದ್ದಾರೆ.