ರಾಷ್ಟ್ರಪತಿ ಗಾದಿಗೆ ದೇವೇಗೌಡ ಅತ್ಯಂತ ಸೂಕ್ತ
ದೇವೇಗೌಡರು ರಾಷ್ಟ್ರಪತಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ನೈಋತ್ಯ ವಲಯ ರೈಲ್ವೆ ಕಚೇರಿ, ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ರಸಗೊಬ್ಬರಗಳಿಗೆ ಸಬ್ಸಿಡಿ, ಕಾವೇರಿ ಸಮಸ್ಯೆ ಮುಂತಾದ ಹತ್ತು ಹಲವಾರು ವಿಚಾರಗಳ ಬಗ್ಗೆ ಹೋರಾಟ ನಡೆಸಿದ ದೇವೇಗೌಡ ನಮ್ಮ ಹೆಮ್ಮೆಯ ಕನ್ನಡಿಗ. ಇದನ್ನೆಲ್ಲಾ ಪರಿಗಣಿಸಿ ರಾಷ್ಟ್ರೀಯ ಪಕ್ಷಗಳು ಕ್ರಿಯಾತ್ಮಕವಾಗಿ ಆಲೋಚನೆ ಮಾಡಿ ಹೆಜ್ಜೆ ಇಡಲಿ ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ.
ದೇವೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೃಷ್ಣ, ಜೆಡಿಎಸ್ ಕಾರ್ಯಕತರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಅಭಿವೃದ್ದಿಯನ್ನು ಆಡಳಿತ ಬಿಜೆಪಿ ಸಂಪೂರ್ಣ ಕಡೆಗಣಿಸಿದೆ. ಸಮರ್ಥ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡಾ ವಿಫಲವಾಗಿದೆ. ಹಾಗಾಗಿ ಈ ಬಾರಿ ಮತದಾರರು ದೇವೇಗೌಡರ ಹೋರಾಟವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಕೃಷ್ಣ ಆಶಯ ವ್ಯಕ್ತ ಪಡಿಸಿದ್ದಾರೆ.