ಬೆಂಗಳೂರು: ಯಡಿಯೂರಪ್ಪ ಮನೆಗೆ ಸಿಬಿಐ ದಾಳಿ

ತಾಜಾ ಬೆಳವಣಿಗೆಗಳು: ಯಡಿಯೂರಪ್ಪ ಅವರ ಅಳಿಯ ಸೋಹನ್ ಕುಮಾರ್ ಅವರ ನಿವಾಸಗಳ ಮೇಲೆ ಸಿಬಿಐ ಇದೀಗ ತಾನೆ ದಾಳಿ ಶುರು ಮಾಡಿದೆ. ಬೆಂಗಲೂರಿನ ವಿಜಯನಗರ ಮತ್ತು ಶ್ರೀನಗರದಲ್ಲಿ ನವರ ಮನೆಗಳಿವೆ. ಇನ್ನು, ಪ್ರವೀಣ್ ಚಂದ್ರ ಅವರ ಮನೆಯ ಮೇಲೂ ದಾಳಿ ನಡೆದಿದೆ. (ಬೆಳಗ್ಗೆ 9.30)
ಬೆಳಗ್ಗೆ 9.45:ಮಾಲೂರು ಶಾಸಕ, ಯಡಿಯೂರಪ್ಪನವರ ಬಂಟ ಕೃಷ್ಣಯ್ಯ ಶೆಟ್ಟಿ ಅವರ ನಿವಾದ ಮೇಲೂ ಸಿಬಿಐ ದಾಳಿಯಾಗಿರುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಕೃಷ್ಣಯ್ಯ ಶೇಟ್ಟಿ ಅವರ ಮನೆಯಿದೆ.
ಶಿವಮೊಗ್ಗ, ಶಿಕಾರಿಪುರ ಮತ್ತು ಬಳ್ಳಾರಿ ನಿವಾಸಗಳ ಮೇಲೂ ಏಕಕಾಲಕ್ಕೆ ಈ ದಾಳಿಗಳು ನಡೆದಿವೆ. ಇಂದು ಎಷ್ಟು ಸಮಯದವರೆಗೆ ಈ ದಾಳಿ ನಡೆಯಲಿದೆ ಎಂಬುದು ತಿಳಿದುಬಂದಿಲ್ಲ. ಈ ಮಧ್ಯೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಲ್ಲಿರುವ ಜಿಂದಾಲ್ ಸಂಸ್ಥೆಯ ಕಚೇರಿಗಳ ಮೇಲೆ ಸಹ ಸಿಬಿಐ ತಂಡ ದಾಳಿ ನಡೆಸಿದೆ.
CEC ಶಿಫಾರಸ್ಸುಗಳನ್ನು ಅನುಮೋದಿಸುತ್ತಾ CBI ತನಿಖೆಗೆ ಅಸ್ತು ಅನ್ನುವ ಮೂಲಕ ಕಳೆದ ಶುಕ್ರವಾರ ಯಡಿಯೂರಪ್ಪನವರಿಗೆ ಕರಾಳ ದಿನವನ್ನಾಗಿಸಿತ್ತು. ಆದರೆ ಸಿಬಿಐ ಇಂದು ಅವರಿಗೆ ಮತ್ತೊಂದು ಆಘಾತ ನೀಡಿದೆ. ಈ ಮಧ್ಯೆ, ಬುಧವಾರ ಕೋರ್ಟಿಗೆ ರಜೆಯಿದ್ದು, ಗುರುವಾರವಷ್ಟೇ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬೇಕಿದೆ. ಆದರೆ ಅಷ್ಟರಲ್ಲೇ ಬಿಎಸ್ವೈ ಮತ್ತು ಇತರೆ ಆರೋಪಿಗಳನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
5 ಅಧಿಕಾರಿಗಳ ಸಿಬಿಐ ತಂಡ ಈ ರೇಡ್ ಮಾಡಿದೆ. ಮೊದಲು ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ತಂಡ ನಂತರ, ಶೇಷಾದ್ರಿಪುರಂ ರಸ್ತೆಯಲ್ಲಿರುವ ಪ್ರೇರಣಾ ಟ್ರಸ್ಟ್ ಕಚೇರಿ ಮೇಲೆ ದಾಳಿ ನಡೆಸಿದೆ. ಆನಂತರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ನಿವಾಸದ ಮೇಲೂ ದಾಳಿ ನಡೆದಿದೆ.
ದಾಳಿ ಸಂದರ್ಭದಲ್ಲಿ ಯಡಿಯೂರಪ್ಪ ಎಲ್ಲಿದ್ದರು? ಅವರ ಪ್ರತಿಕ್ರಿಯೆ ಏನು? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸಿಬಿಐ ಅತಿ ಗೌಪ್ಯವಾಗಿ ಈ ದಾಳಿಗಳನ್ನು ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications