ಯಡಿಯೂರಪ್ಪ ಪೆಟ್ಟು ತಿಂದ ಮಗು ಥರಾ ಕಣ್ರಿ: ಈಶ್ವರಪ್ಪ

ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರ ಅಂತಿಮ. ಅವರು ಕರೆದಾಗ ನಾವು ಹೋಗಲೇಬೇಕು. ಪಕ್ಷದ ವಿರುದ್ಧ ಹೋಗುವುದು ಸರಿಯಲ್ಲ ಎಂದ ಈಶ್ವರಪ್ಪ ದೆಹಲಿಗೆ ಹೋಗದ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಕೆಣಕಿದರು.
ನಮ್ಮದು 30-35 ವರ್ಷಗಳ ಬಾಂಧವ್ಯ. ನಾನು ಈ ಸ್ಥಾನಕ್ಕೆ ಬೆಳೆಯಲು ತಾಯಿ ಸಮಾನವಾದ ನಮ್ಮ ಪಕ್ಷ ಹಾಗೂ ಯಡಿಯೂರಪ್ಪ ಅವರು ಕಾರಣ. ಅವರು ಎಂದೂ ಜಾತಿ ಪರ ಅಲ್ಲ. ರೈತರ ಪರ ಹೋರಾಟ ಮಾಡಿದ್ದಾರೆ. ತುಂಬಾ ಭಾವುಕ ಜೀವಿಯಾಗಿರುವ ಯಡಿಯೂರಪ್ಪ ಅವರ ಮಾತುಗಳು ಬದಲಾಗುತ್ತಿರುತ್ತದೆ. ನಾನು ಎಂದೂ ಅವರನ್ನು ಜೈಲಿಗೆ ಕಳುಹಿಸುವ ಯೋಚನೆ ಮಾಡಿದರೆ ನಾನು ಮನುಷ್ಯನಲ್ಲ ಎಂದು ಈಶ್ವರಪ್ಪ ಹೇಳಿದರು.
ಅಡ್ವಾಣಿ, ನರೇಂದ್ರ ಮೋದಿ, ಮದನ್ ಲಾಲ್ ಖುರಾನಾ, ಉಮಾಭಾರತಿ ಅವರ ಕಷ್ಟದ ಸಂದರ್ಭದಲ್ಲಿ ಪಕ್ಷ ನೀಡಿದ ಬೆಂಬಲವನ್ನು ಯಡಿಯೂರಪ್ಪ ಅವರಿಗೂ ನೀಡಲಾಗಿದೆ. ಆದರೂ ಯಾವ ಅರ್ಥದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದರೋ ಗೊತ್ತಿಲ್ಲ.
ಆದರೆ, ಸಿಬಿಐ ತನಿಖೆ ಘೋಷಣೆ ಮಾಡಿದ ತಕ್ಷಣ ಹೆದರುವುದು ಬೇಡ. ನೀವು ಇನ್ನೂ ಅಪರಾಧಿಯಾಗಿಲ್ಲ. ಆರೋಪಿ ಯಡಿಯೂರಪ್ಪ ಅವರಿಗೆ ನೋವಿದೆ. ಅವರ ಮನಸ್ಸಿನಲ್ಲಿ ಸಾಕಷ್ಟು ಗೊಂದಲವಿದೆ.
'ಶಾಸಕರನ್ನು ನಾನು ಕರೆಸಿಕೊಂಡಿಲ್ಲ. ಸಭೆ ಸೇರಿಸಿಲ್ಲ. ಶೆಟ್ಟರ್ ಹಾಗೂ ಯಡಿಯೂರಪ್ಪ ಮನೆಗೆ ಹೋಗಿದ್ದು ಹೌದು. ಕೆಲವರ ಜೊತೆ ಫೋನ್ ನಲ್ಲಿ ಮಾತಾಡಿದ್ದೇನೆ ಅಷ್ಟೇ. ಸುಮ್ಮನೆ ಏನೇನೋ ಹೇಳಿಕೊಳ್ಳಬೇಡಿ. ನಿಮ್ಮ ಇತಿ ಮಿತಿ ತಿಳಿದುಕೊಂಡು ಬರೆಯಿರಿ. ಒಬ್ಬರು ಶಾಸಕರು, ಮಂತ್ರಿಗಳು ಪಕ್ಷ ತೊರೆಯುವುದಿಲ್ಲ ರೀ.. ನಮ್ಮದು ಒಂದು ಕುಟುಂಬ. ನಮ್ಮ ಕುಟುಂಬದ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ' ಎಂದು ಮಾಧ್ಯಮಗಳ ಬಗ್ಗೆ ಈಶ್ವರಪ್ಪ ತಿರುಗಿಬಿದ್ದರು.












Click it and Unblock the Notifications