ಪ್ರಶ್ನೆಪತ್ರಿಕೆಯಲ್ಲಿ ಸಾಹಿತಿಗಳ ಹರಾಜು ಹಾಕಿದ ಬೆಂವಿವಿ

ವಿನಯ್ ನ ವರದಿ ಹೀಗಿದೆ: ವಾಣಿಜ್ಯಕ್ಕೂ ಸಾಹಿತಿಗಳಿಗೂ ಬೆಂವಿವಿ ನಿಕಟ ಸಂಪರ್ಕ ಕಲ್ಪಿಸಿದೆ. ಏ. 11ರಂದು ನಡೆದ ಬಿ.ಕಾಂ ವಾಣಿಜ್ಯ ಪರೀಕ್ಷೆಯ 6ನೇ ಸೆಮಿಸ್ಟರ್ ಪ್ರಶ್ನೆಪತ್ರಿಕೆಯನ್ನು (ಆದಾಯ ತೆರಿಗೆ- 2; ಪ್ರಶ್ನೆಪತ್ರಿಕೆ 6.2) ಗಮನಿಸಿ. ಆದಾಯ, ಆಸ್ತಿ, ಷೇರು, ಚಿನ್ನ/ವಜ್ರ ಖರೀದಿ, ಸ್ಥೂಲ ಆದಾಯ, ಆರೋಗ್ಯ ವಿಮೆಗಳ ಮಧ್ಯೆ ಕುವೆಂಪು, ಅ.ನ.ಕೃ, ಕಾರ್ನಾಡ್, ಕಾರಂತ, ತರಾಸು, ವಿ.ಕೃ. ಗೋಕಾಕ್, ಡಾ. ಕಂಬಾರರು ಕಳೆದು ಹೋಗಿದ್ದಾರೆ! ಬೆಂವಿವಿಯ ಬುದ್ಧಿವಂತಿಕೆಯ ಸ್ಯಾಂಪಲ್ ಹೀಗಿದೆ...
ಕಾರಂತರು ಮತ್ತು ಕುದುರೆ ಜೂಜು: ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕುವೆಂಪು ಮತ್ತು ಇತ್ತೀಚೆಗಷ್ಟೇ ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಡಾ.ಚಂದ್ರಶೇಖರ ಕಂಬಾರರು ಪ್ರಶ್ನೆಪತ್ರಿಕೆಯಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಗೊತ್ತೆ? 'ಕುವೆಂಪು ಅವರು ರಾಜಕೀಯ ಪಕ್ಷಕ್ಕೆ 12 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಜಾಹೀರಾತುಗಳಿಗೆ 24 ಸಾವಿರ ಖರ್ಚು ಮಾಡಿದ್ದಾರೆ. ಅವರ ಸ್ವಂತ ಬಂಡವಾಳದ ಮೇಲಿನ ಬಡ್ಡಿ 12 ಸಾವಿರ ರೂ...' ಹೀಗೆ ಸಾಗುತ್ತದೆ ಅಪಹಾಸ್ಯ. ಇನ್ನು '2010-11ರಲ್ಲಿ ಡಾ.ಕಂಬಾರರು ಈ ಕೆಳಕಂಡ ಆಸ್ತಿಯನ್ನು ಮಾರಿದ್ದಾರೆ...'. ಇನ್ನು, ಡಾ.ಕಾರಂತರು, 'ಕುದುರೆ ಓಟದಿಂದ 1.04 ಲಕ್ಷ ರೂ. ಆದಾಯ ಗಳಿಸಿದ್ದಾರೆ!
ಗೋಕಾಕ್ಗೆ ಲಾಟರಿ; ಕಾರ್ನಾಡ್ ವೈದ್ಯ: 'ಡಾ.ಕಾರ್ನಾಡರು ವೃತ್ತಿಪರ ವೈದ್ಯರು. ಇವರು ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದು, ಇದರ ಶೇ.1/4 ಭಾಗವನ್ನು ಚಿಕಿತ್ಸಾಲಯಕ್ಕೆ ಬಳಸಿಕೊಂಡಿದ್ದಾರೆ. ಇವರ ವೈದ್ಯಕೀಯ ಸಲಹಾ ಶುಲ್ಕ 2 ಲಕ್ಷ ರೂ. (ವಾರ್ಷಿಕ), ಔಷಧ ಖರೀದಿ 47 ಸಾವಿರ. ಈಗ ಅವರ ವೃತ್ತಿ ಆದಾಯವನ್ನು ತೆರಿಗೆ ವರ್ಷ 2011-12ಕ್ಕೆ ನಿರ್ಧರಿಸಿ...' ಇನ್ನು, ಕಂಪನಿಯ ಸಾಲಪತ್ರ ಕೊಳ್ಳಲು ಡಾ.ಗೋಕಾಕರು ಶೇ.12ರ ದರದಂತೆ 2.5 ಲಕ್ಷ ರೂ.ಗಳನ್ನು ಬ್ರಿಟನ್ ಗೆಳೆಯರಿಂದ ಸಾಲ ಪಡೆದಿದ್ದಾರೆ. ಈ ವರ್ಷದಲ್ಲಿ ಕರ್ನಾಟಕ ಲಾಟರಿಯಿಂದ 2.8 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಈಗ ಗೋಕಾಕರ 2010-11ನೇ ಸಾಲಿನ ಇತರೆ ಮೂಲಗಳ ಆದಾಯವನ್ನು ಕಂಡು ಹಿಡಿಯಿರಿ (ಪ್ರಶ್ನೆ 14)... ಹೀಗೆ ಸಾಗುತ್ತದೆ ಪ್ರಶ್ನೆಗಳು!












Click it and Unblock the Notifications