ಸಿದ್ದು-ಯಡ್ಡಿ 20 ಕೋಟಿ ಡೀಲ್:ಇದು ಕುಮಾರ ಸಂಭವ
ವಿಜಾಪುರ ಜಿಲ್ಲೆ ಬರ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದಾನಂದ ಗೌಡರು ನಮ್ಮ ಮಾತು ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳುತ್ತಿರುವುದು ಶುದ್ಧ ಸುಳ್ಳು. ಸಿದ್ಧರಾಮಯ್ಯನವರು ಕಳೆದ ಎಂಟು ವಿಧಾನಸಭಾ ಉಪಚುನಾವಣೆಗಳ ವೇಳೆ ತಟಸ್ಥವಾಗಿರಲು 20 ಕೋಟಿ ರೂ. ಪ್ಯಾಕೇಜ್ ಡೀಲ್ ಕುದುರಿಸಿದ್ದು ಯಾರು ಎಂಬ ಬಗ್ಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಉಪಲೋಕಾಯುಕ್ತ ಚಂದ್ರಶೇಖರಯ್ಯ ನೇಮಕ: ಮುಖ್ಯಮಂತ್ರಿಯವರು ನಮ್ಮ ಕುಟುಂಬವಷ್ಟೇ ಅಲ್ಲ, ಜೆಡಿಎಸ್ ಶಾಸಕರು ಹೇಳಿದ ಒಂದೇ ಒಂದು ಕೆಲಸ ಮಾಡಿಕೊಟ್ಟಿದ್ದನ್ನು ತೋರಿಸಲಿ. ಉಪಲೋಕಾಯುಕ್ತ ಚಂದ್ರಶೇಖರಯ್ಯ ಅವರನ್ನು ಯಾರ ಸಲಹೆ ಮೇರೆಗೆ ತರಾತುರಿಯಲ್ಲಿ ನೇಮಿಸಲಾಗಿತ್ತು ಎಂಬುದಕ್ಕೆ ಮುಖ್ಯಮಂತ್ರಿಯವರನ್ನೇ ಕೇಳಿದರೆ ಸತ್ಯ ಗೊತ್ತಾಗುತ್ತದೆ ಎಂದರು.
ಇದು ಒಕ್ಕಲಿಗರು ಒಂದಾಗಿದ್ದಾರೆ ಎಂದು ಪದೇಪದೆ ಹೇಳಿ ವೀರಶೈವರ ಬೆಂಬಲ ಪಡೆಯಲು ಯಡಿಯೂರಪ್ಪ ಹೂಡಿರುವ ತಂತ್ರವಿದು. ಸಿದ್ಧರಾಮಯ್ಯನವರೂ ಇದೇ ಮಾತನ್ನು ಹೇಳಿದ್ದು ನೋಡಿದರೆ ಇವರಿಬ್ಬರ ಮಧ್ಯೆ ಒಳಒಪ್ಪಂದ ಏರ್ಪಟ್ಟಂತೆ ಕಾಣುತ್ತದೆ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿದ್ಧರಾಮಯ್ಯನವರ ಮಾತು ಕೇಳಿ ಅವರು ಕೆಲಸ ಮಾಡ್ತಾ ಇದ್ರಾ ಎಂಬುದನ್ನು ಸಿದ್ಧರಾಮಯ್ಯನವರೇ ಸ್ಪಷ್ಟಪಡಿಸಬೇಕು.
ಕಾಂಗ್ರೆಸ್ನವರು ಸಂಕಷ್ಟ ಬಂದಾಗ ಯಾರ ಕೈ ಬೇಕಾದ್ರೂ ಹಿಡೀತಾರೆ, ಯಾರ ಜೊತೆ ಬೇಕಾದರೂ ವ್ಯವಹಾರ ಕುದುರಿಸ್ತಾರೆ. ಅರ್ಜಿ ಹಾಕಿದ್ರೆ ಯಡಿಯೂರಪ್ಪನವರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ಪರಿಶೀಲಿಸುತ್ತೇವೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಈ ಹಿಂದೆ ಹೇಳಿದ್ದೇ ಇದಕ್ಕೆ ಸಾಕ್ಷಿ. ಆದರೆ ಜೆಡಿಎಸ್ ಮಾತ್ರ ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.