ಖೇಣಿಗೆ ಡಾಕ್ಟರೇಟ್, ಸಭೆ ಬಹಿಷ್ಕರಿಸಿದ ರಾಜ್ಯಪಾಲರು
ಬೆಂಗಳೂರು ವಿವಿ ಕುಲಪತಿ ಡಾ. ಪ್ರಭುದೇವ್ ಐವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿ ಪಟ್ಟಿಯ ಅನುಮೋದನೆಗೆ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು. ರಾಜ್ಯಪಾಲರು ಪಟ್ಟಿಗೆ ಅಂಕಿತ ಹಾಕಲು ನಿರಾಕರಿಸಿದ್ದರಿಂದ ಗುರುವಾರ (ಏ 12) ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಯಾರಿಗೂ ಪ್ರಧಾನ ಮಾಡಲಿಲ್ಲ.
ವಿವಿ ಅನುಮೋದಿಸಿದ ಐವರ ಪಟ್ಟಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ. ವೀರೇಂದ್ರ ಹೆಗ್ಗಡೆ, ಕ್ರಿಕೆಟಿಗ ಬೃಜೇಶ್ ಪಟೇಲ್, ಅಶೋಕ್ ಖೇಣಿ ಸೇರಿದಂತೆ ಐವರ ಹೆಸರಿತ್ತು. ಈ ಪಟ್ಟಿಯಲ್ಲಿ ಖೇಣಿ ಹೆಸರು ಇರುವುದರಿಂದ ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದರು ಎಂದು ಹೇಳಲಾಗಿದೆ.
ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ರಾಜ್ಯಪಾಲ ಭಾರದ್ವಾಜ್ ಘಟಿಕೋತ್ಸವದಲ್ಲಿ ಭಾಗವಹಿಸಲಿಲ್ಲ ಎನ್ನಲಾಗಿದೆ. ವಿವಿಧ ಪದವಿಗಳಲ್ಲಿ ಅತ್ಯಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವುದಾಗಿ ಬೆಂಗಳೂರು ವಿವಿ ಘೋಷಿಸಿತ್ತು. ಆದರೆ ಸಭೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡಲಿಲ್ಲ.
ಮುಖ್ಯಮಂತ್ರಿ ಸದಾನಂದ ಗೌಡ, ಡಾ. ಪ್ರಭುದೇವ್, ಕುಲಸಚಿವ ಪ್ರೊ. ಮೈಲಾರಪ್ಪ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಅನೇಕರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.