ಭರ್ಜರಿ ಬೇಟೆ : ಬೆಂಗಳೂರಲ್ಲಿ 13 ದರೋಡೆಕೋರರ ಬಂಧನ
ಆರು ಜನರಿದ್ದ ಒಂದು ತಂಡವನ್ನು ಪರಪ್ಪನ ಅಗ್ರಹಾರದ ವ್ಯಾಪ್ತಿಯಲ್ಲಿ ಬರುವ ರಾಮಸಂದ್ರದಲ್ಲಿ ಬಂಧಿಸಲಾಗಿದ್ದರೆ, ಏಳು ಜನರಿದ್ದ ಇನ್ನೊಂದು ತಂಡವನ್ನು ಕುಮಾರಸ್ವಾಮಿ ಬಡಾವಣೆ ವ್ಯಾಪ್ತಿಯ ಇಲಿಯಾಸ್ ನಗರದ ಪೈಪ್ ಲೈನ್ನ ಗಂಗಮ್ಮ ದೇವಸ್ಥಾನದ ಬಳಿ ದರೋಡೆಗೆ ಸಜ್ಜಾಗಿದ್ದವರನ್ನು ಬಂಧಿಸಿದ್ದಾರೆ.
ರಾಮಸಂದ್ರದ ಅಮೃತ್ ಕಾಲೇಜು ರಸ್ತೆಯಲ್ಲಿ ದರೋಡೆಗೆ ಸಿದ್ಧರಾಗಿದ್ದ ಮಲ್ಲಸಂದ್ರದ ಶ್ರೀನಿವಾಸ, ಪ್ಯಾಲೇಸ್ ಗುಟ್ಟಹಳ್ಳಿಯ ದಿಲೀಪ್, ಮಲ್ಲೇಶ್ವರದ ಉಮೇಶ್, ಮುನೇಶ್ವರ ಬ್ಲಾಕ್ನ ಪೆರುಮಾಳ್, ಮಲ್ಲೇಶ್ ಪೈಪ್ ಲೈನ್ನ ವೆಂಕಟೇಶ್, ಮಲ್ಲೇಶ್ವರ ಜಲಮಂಡಳಿ ಕ್ವಾರ್ಟರ್ಸ್ ನಿವಾಸಿ ರಾಜುಗೌಡ ಬಂಧಿತರಾಗಿದ್ದಾರೆ.
ಬಂಧಿತರಿಂದ ಚಾಕು, ಲಾಂಗ್, ಕಬ್ಬಿಣದ ರಾಡ್, ಮರದ ದೊಣ್ಣೆ ಮುಂತಾದ ಮಾರಕಾಸ್ತ್ರಗಳು, 7 ಮೊಬೈಲ್ ಫೋನ್ ಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಲ್ಲಿ ಶ್ರೀನಿವಾಸ ತಂಡದ ನಾಯಕನಾಗಿದ್ದು, ಮಲ್ಲೇಶ್ವರ, ಶೇಷಾದ್ರಿಪುರ, ವೈಯಾಲಿ ಕಾವಲ್ ಪ್ರದೇಶದಲ್ಲಿ ಅನೇಕ ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇಲಿಯಾಸ್ ನಗರದಲ್ಲಿ ಬಂಧಿತರಾಗಿರುವವರು ಉಲ್ಲಾಳ ಉಪನಗರದ ಕಾರ್ತಿಕ್, ಬನಶಂಕರಿ 2ನೇ ಹಂತದ ನಿವಾಸಿ ಮುಬಾರಕ್, ಆನಂದಮಣಿ, ನಾಯಂಡಹಳ್ಳಿಯ ದೀಪಕ್, ಪಂತರಪಾಳ್ಯದ ಗಿರೀಶ್, ಬನಶಂಕರಿ ಭವಾನಿ ನಗರದ ಅಮ್ಮು ಮತ್ತು ಯಾರಬ್ ನಗರದ ಹಸನ್ ಅಹ್ಮದ್ ಬಂಧಿತ ದರೊಡೆಕೋರರು. ಇವರು ಕೂಡ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದರು.