ಟೆಕ್ಕಿ ಸ್ಯಾಂ ಪಿತ್ರೋಡಾ ಮುಂದಿನ ಅರ್ಹ ರಾಷ್ಟ್ರಪತಿ?
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಪ್ರತಿಪಕ್ಷಗಳು ಬಹುತೇಕ ಎಲ್ಲ ವಿಷಯಗಳಲ್ಲೂ ಟಾಂಗ್ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಸ್ಯಾಂ, ಎಲ್ಲ ಪಕ್ಷಗಳಿಗೂ ಬೇಕಾದವರಾಗಿದ್ದು, ಸರ್ವಸಮ್ಮತ ರಾಷ್ಟ್ರಪತಿಯಾಗುವ ಎಣಿಕೆ ಆಡಳಿತಾರೂಢ ಯುಪಿಎ ದ್ದಾಗಿದೆ. ಜತೆಗೆ ಸ್ಯಾಂ, ಮೇಡಂ ಸೋನಿಯಾ ಮತ್ತು ಯುವರಾಜ ರಾಹುಲ್ ಗಾಂಧಿ ಅವರುಗಳ ಒಲವನ್ನೂ ಸಂಪಾದಿಸಿದ್ದಾರೆ.
ಈ ಮಧ್ಯೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಸ್ಪೀಕರ್ ಮೀರಾಕುಮಾರ್, ವಿತ್ತ ಸಚಿವ ಪ್ರಣಬ್ ಮುಖರ್ಜಿ ಅಥವಾ ಡಾ. ಕರಣ್ ಸಿಂಗ್ ಅವರನ್ನು ಪಕ್ಕಕ್ಕಿಟ್ಟು, ದಲಿತರು ಇತರೆ ಹಿಂದುಳಿದ ವರ್ಗದ ನಾಯಕರಿಗೆ ಮಣೆಹಾಕುವ ಇರಾದೆಯ ನಡುವೆಯೂ ರಾಜಕೀಯವನ್ನು ಪಕ್ಕಕ್ಕಿಟ್ಟು, ಒಬ್ಬ ಮುತ್ಸದ್ದಿ ಮತ್ತು ವಿಶ್ವಮಟ್ಟದಲ್ಲಿ ಭಾರತವನ್ನು ಸಮರ್ಥವಾಗಿ ಬಿಂಬಿಸುವಂತಹ ವ್ಯಕ್ತಿಯ ತುರ್ತು ಅಗತ್ಯ ಮನಗಂಡು ಸ್ಯಾಂಗೆ ಪಟ್ಟ ಕಟ್ಟುವ ಆಲೋಚನೆ ಮಾಡಲಾಗಿದೆ.
ಸ್ಯಾಂ ಪಿತ್ರೋಡಾ ಪೂರ್ಣ ಹೆಸರು ಸತ್ಯನಾರಾಯಣ ಗಂಗಾರಾಂ ಪಾಂಚಾಲ! ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಜತೆಗೂಡಿ ಗ್ರಾಮ ಗ್ರಾಮಕ್ಕೂ ಟೆಲಿಫೋನ್ ಕಾಯಿನ್ ಬೂತ್ ಪರಿಚಯಿಸಿದ ಹೆಗ್ಗಳಿಕೆಯ ಅಂಕಲ್ ಸ್ಯಾಂ ಅವರದು. ಅಹಮದಾಬಾದಿನ ಸುರೇಂದ್ರನಗರ ಜಿಲ್ಲೆಯ ಹಾಲ್ವಾಡಾ ತಾಲೂಕಿನ ಟಿಕಾರ್ ಗ್ರಾಮದ ಸ್ಯಾಂ, ಎಂಎಸ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಪದವೀಧರ. ಸ್ಯಾಂ ಪಿತ್ರೋಡಾ ಅವರ ತಂದೆ ಒರಿಸ್ಸಾದಲ್ಲಿ ಕಾರ್ಪೆಂಟರ್ ಆಗಿದ್ದವರು.