ತಿಳಿ ಹಾಸ್ಯ: ರಾಷ್ಟ್ರದ ಸುರಕ್ಷಣೆ - ಅಂದು, ಇಂದು

ಮಹಾರಾಜ : ನಮ್ಮ ರಾಜ್ಯ ಸುರಕ್ಷಿತವಾಗಿದೆಯೇ, ಸೇನಾಧಿಪತಿಗಳೇ?
ಸೇನಾಧಿಪತಿ: ನಮ್ಮ ಮೇಲೆ ಯಾವ ರಾಜ್ಯದ ಕ್ರೂರದೃಷ್ಟಿಯೂ ಬೀಳುವ ಹಾಗಿಲ್ಲ,..ಒಂದು ಕೂದಲು ಎಳೆ ತಾಕಿದರೂ ನಮ್ಮ ಸೇನೆ ಅವರನ್ನು ನೀರುಗಾಯಿ ಹಣ್ಣುಗಾಯಿ ಮಾಡುತ್ತಾರೆ ಮಹಾರಾಜರೇ!
ಮಹಾರಾಜ: ಶಹಭಾಷ್ ಸೇನಾಧಿಪತಿಗಳೇ! ಇದೇ ಅಲ್ಲವೇ ನಮ್ಮ ಜನಗಳು ಬಯಸುವುದು..ಅಂದಹಾಗೆ ನಮ್ಮ ಪಡೆಗಳಿಗೆ ಸುಸಜ್ಜಿತವಾದ ಶಸ್ತ್ರಾಸ್ತ್ರಗಳು ಇದೆ ಅಲ್ಲವೇ?
ಸೇನಾಧಿಪತಿ: ಆಗಾಗ್ಗೆ ಹೊಸದನ್ನು ಕೊಂಡು ಕೊಳ್ಳುತ್ತೇವೆ ಮಹಾರಾಜರೇ.. ಖಜಾಂಚಿಗಳು ಖುದ್ದಾಗಿ ನಿಂತು ಅದಕ್ಕೆ ಹಣವನ್ನು ಒದಗಿಸುತ್ತಾರೆ.
ಮಹಾರಾಜ: ಸಂತೋಷ! ಮತ್ತೊಂದು ವಿಷಯ.. ಆಗಾಗ್ಗೆ ನಮ್ಮ ರಾಜಮಾತಾ ಅವರಿಗೂ ಈ ವಿಷಯಗಳನ್ನು ತಿಳಿಸಿರಿ.. ಅವರೇ ಅಲ್ಲವೆ ನಮಗೆಲ್ಲರಿಗೂ ಮಾರ್ಗದರ್ಶಿ.
ಸೇನಾಧಿಪತಿ: ಖಂಡಿತ ಪ್ರಭುಗಳೇ! ಅವರು ರಾಷ್ಟ್ರಕ್ಕೇ ಮಾತೆ. ಅವರೇ ಒಂದೊಂದು ಸಲ ಖುದ್ದಾಗಿ ಬಂದು ನಮ್ಮ ಕ್ಷೇಮವನ್ನು ವಿಚಾರಿಸಿ ಹೋಗುತ್ತಾರೆ.
ಮಹಾರಾಜ: ನಮ್ಮ ಸೇನೆಯ ತುಕಡಿಗಳು ಹೇಗಿವೆ? ಕಾವಲು ಪಡೆಯವರು ಮತ್ತು ಅವರ ಮನೆಯವರು ಕ್ಷೇಮವೇ?
ಸೇನಾಧಿಪತಿ: ದೇವರ ಅನುಗ್ರಹದಿಂದ ಮತ್ತು ತಮ್ಮ ಕೃಪೆಯಿಂದ ಎಲ್ಲರೂ ಸಂತೋಷ ಮತ್ತು ಉಲ್ಲಾಸದಿಂದ್ದಾರೆ ಪ್ರಭುಗಳೇ.
ಮಹಾರಾಜ : ನಮಗೆ ಅತೀವ ಸಂತೋಷವಾಗಿದೆ ಸೇನಾಧಿಪತಿಗಳೇ. .. ಹೀಗೆಯೇ ಮುಂದುವರಿಸಿ...
ಇಂದು:
ಪ್ರಧಾನ ಮಂತ್ರಿ: ನಮ್ಮ ರಾಜ್ಯ ಸುರಕ್ಷಿತವಾಗಿದೆಯೇ, ಸೇನಾಧಿಪತಿಗಳೇ?
ಸೇನಾಧಿಪತಿ: ಹೇಗೆ ಸುರಕ್ಷಿತವಾಗಿರುತ್ತೇ ಪ್ರಧಾನಿಗಳೇ? ನಮ್ಮ ಆಯುಧಗಳು ತೋಪುಗಳೂ ನಮ್ಮ ಅಜ್ಜಿಯಕಾಲದ್ದು!
ಪ್ರಧಾನ ಮಂತ್ರಿ: ನೀವು ಮೊದಲೇ ನಮಗೆ ಯಾಕೆ ಇದನ್ನು ತಿಳಿಸಲಿಲ್ಲ?
ಸೇನಾಧಿಪತಿ: ನನಗೆ ಟೈಮ್ ಎಲ್ಲಿತ್ತು ಪ್ರಧಾನಿಯವರೇ? ನನ್ನ ಡೇಟ್ ಅಫ್ ಬರ್ಥ್ ಮೇಲೆ ನೀವು ಸುಪ್ರೀಮ್ ಕೋರ್ಟಿನಲ್ಲಿ ಕೇಸ್ ಹಾಕಿದ್ರಲ್ಲಾ... ತಿಂಗಳುಗಟ್ಟಲೆ ಕೇಸು ನಡೀತಲ್ಲ.. ನೀವು ಕೇಸ್ ಗೆದ್ರಿ ಕೂಡ. ಕಂಗ್ರ್ಯಾಜುಲೇಷನ್ಸ್!
ಪ್ರಧಾನ ಮಂತ್ರಿ: ನೀವು ನಮಗೆ ಬರೆದ ಕಾಗದ ಲೀಕ್ ಆಗಿದೆ. ಅದು ಬಹಳ ಗಂಭೀರವಾದ ಅಪರಾಧ. ಅದು ನಿಮಗೆ ಗೊತ್ತಿದೆಯೇ?
ಸೇನಾಧಿಪತಿ : ಚೆನ್ನಾಗಿ ಗೊತ್ತಿದೆ. ಐಪಿಸಿ ಕೋಡ್ ನಂಬರೂ ಗೊತ್ತಿದೆ. ಸಿಬಿಐಯನ್ನು ವಿಚಾರಣೆ ಮಾಡಲು ಹೇಳಿ.
ಪ್ರಧಾನ ಮಂತ್ರಿ : ರಕ್ಷಣಾಮಂತ್ರಿಗಳು ಹೇಳಿದರು..... ನಿಮಗೆ ನಿಮ್ಮ ಉಪ- ಸೇನಾಧಿ ಪತಿಗಳು ಲಂಚವನ್ನು ಕೊಡುವುದಕ್ಕೆ ಬಂದ್ರಂತಲ್ಲಾ....
ಸೇನಾಧಿಪತಿ: ಹೌದು. ನಾನೇ ಅದರ ವಿಷಯ ರಕ್ಷಣಾಮಂತ್ರಿಗಳಿಗೆ ಖುದ್ದಾಗಿ ಹೋಗಿ ತಿಳಿಸಿದೆ, ತನಿಖೆ ನಡೆಸಲೀಂತ. ಅವರು ನೀನೇ ತನಿಖೆ ಮಾಡು ಅಂದ್ರು. ನೀವೇ ಹೇಳಿ. ನಾನು ಯುಧ್ಧಕ್ಕೆ ಸಜ್ಜಾಗಿರಬೇಕೋ, ತನಿಖೆ ಮಾಡುತ್ತಾ ಕುತ್ಕೊಳ್ಲೋ? ಅವರೂ ಇದರ ವಿಚಾರ ಅಲ್ಲಿಗೇ ಬಿಟ್ರು..ಯಾಕೇ ಅಂತಾ ನನಗೂ ಗೊತ್ತಿಲ್ಲ...
ಪ್ರಧಾನ ಮಂತ್ರಿ: ನಮ್ಮ ರಾಷ್ಟ್ರಪತಿಗಳು ನಮ್ಮ ದೇಶದ ಸರ್ವಾಧಿಕಾರಿ. ಅವರಿಗೆ ಇಲ್ಲಿಯ ಆಗು ಹೋಗುಗಳನ್ನು ಅಗಾಗ್ಗೆ ಮಾಹಿತಿ ಕೊಡಿ.
ಸೇನಾಧಿಪತಿ: ಧಾರಾಳವಾಗಿ! ಅವರು ಯಾವಾಗ ನಮ್ಮ ದೇಶಕ್ಕೆ ಬರುತ್ತಾರೋ ಆಗ ಅವರನ್ನು ಸಂಪರ್ಕಿಸಿ, ಸ್ಥಿತಿಗತಿಗಳನ್ನು ಪರಿಚಯಮಾಡಿಕೊಡುತ್ತೇನೆ.
ಪ್ರಧಾನ ಮಂತ್ರಿ: ನಮ್ಮ ಸೇನೆಯ ಕಾಲುಪಡೆಯವರೂ ಅವರ ಕುಟುಂಬದವರೆಲ್ಲಾ ಹೇಗಿದ್ದಾರೆ? ಸಂತೋಷವಾಗಿದ್ದಾರೆಯೇ?
ಸೇನಾಧಿಪತಿ: ಸಂತೋಷವೆಲ್ಲಿ ಬಂತು? ನೀವು ಅವರಿಗೆ ಆಧುನಿಕ ಶಸ್ತ್ರ, ತುಸ್ಸೆನಿಸುವ ಗುಂಡು ಬದಲಾಯಿಸಿ, ಹಪ್ಪಳದ ಹಾಗೆ ತೆಳುವಿರುವ ವೆಸ್ಟ್ ಬದಲಾಯಿಸಿ ಮತ್ತು ಪೇಸ್ಕೇಲ್ ಬದಲಾಯಿಸಿ, ಸಂಬಳವೇರಿಸುವ ತನಕ ಸಂತೋಷ ಮತ್ತು ನೆಮ್ಮದಿ ಎಲ್ಲಿ ಬಂತು?












Click it and Unblock the Notifications