ಬಡವರಿಗೆ ಗಂಜಿ ಕುಡಿಸುತ್ತಿರುವ ಮೌಲಾಲಿ ಹೊಟ್ಟೆ ತಣ್ಣಗಿರಲಿ

ಇಂತಹ ಕಷ್ಟಕರ ಪರಿಸ್ಥಿತಿಯ ನಡುವೆ, ನಗರದ ಬಸವೇಶ್ವರ ಗಂಜ್ ಪ್ರದೇಶದಲ್ಲಿ ಕಳೆದ 8 ದಿನಗಳಿಂದ ಆರಂಭವಾಗಿರುವ ಗಂಜಿ ಕೇಂದ್ರವೂಂದು ಸದ್ದಿಲ್ಲದೆ ಹೊಟ್ಟೆಯ ಹಸಿವು ಮತ್ತು ಬಾಯಾರಿಕೆಯನ್ನು ಒಂದೇ ಏಟಿಗೆ ನೀಗಿಸುವ ಕೆಲಸ ಮಾಡುತ್ತಿದೆ. ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಗುಡಿಸಲುಗಳಲ್ಲಿ ವಾಸಿಸುವ ಬಡ ಜನರು, ಸುತ್ತಲಿನ ಆಸ್ಪತ್ರೆಗಳಲ್ಲಿರುವ ಬಡ ರೋಗಿಗಳು ಸಂಬಂಧಿಕರು. ಹೀಗೆ ಹತ್ತು ಹಲವಾರು ಜನರಿಗೆ ಈ ಗಂಜಿ ಕೇಂದ್ರ ಹಸಿವನ್ನು ನೀಗಿಸುತ್ತಿದೆ.
ಇಲ್ಲಿಯ ಉದ್ಯಮಿ ಮೌಲಾಲಿ ಅನಪೂರ್ ಇಂತಹ ಒಂದು ಕಾರ್ಯವನ್ನು ಕಳೆದ ಐದು ವರ್ಷಗಳಿಂದ ಸದ್ದಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ನಿತ್ಯವೂ ಸುಮಾರು 500 ಲೀಟರ್ನಷ್ಟು ಗಂಜಿಯನ್ನು ಈ ಕೇಂದ್ರದ ಮೂಲಕ ವಿತರಣೆ ಮಾಡುತ್ತಿದ್ದಾರೆ. ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಭಗವಂತನು ನೀಡಿದ ಶಕ್ತಿಯನ್ನು ಬಡಜನರಿಗಾಗಿ ಧಾರೆ ಎರೆಯುತ್ತಿರುವುದು ಮೌಲಾಲಿ ಅನಪೂರ್ ಅವರ ಔದಾರ್ಯವೇ ಸರಿ. ಅವರ ಹೊಟ್ಟೆ ತಣ್ಣಗಿರಲಿ.
ಗಂಜಿಯ ಹಿಂದಿನ ಕಥೆ : ಐದು ವರ್ಷಗಳ ಹಿಂದೆ ಮೌಲಾಲಿ ಅನಪೂರ್ ಅವರ ಹೊಲದಲ್ಲಿ ಜೋಳವನ್ನು ಬೆಳೆಯಲಾಗಿತ್ತು. ಹೊಲದಲ್ಲಿ ಬರುತ್ತಿದ್ದ ಹಕ್ಕಿಗಳನ್ನು ಓಡಿಸುತ್ತಿರುವುದನ್ನು ಕಂಡ ಅನಪೂರ್ ಅವರಿಗೆ ಬೇಸರ ಮೂಡಿತು. ಹಕ್ಕಿಗಳನ್ನು ಓಡಿಸದಂತೆ ಸೂಚನೆಯನ್ನು ಕೊಟ್ಟರು. ಹಕ್ಕಿಗಳು ತಿಂದು ಹೋದ ನಂತರವೂ ಆ ವರ್ಷ ಸುಮಾರು 600 ಕ್ವಿಂಟಾಲ್ ಜೋಳ ಸಂಗ್ರಹವಾಯಿತು. ಆದರೆ ಆ ವರ್ಷ ಜೋಳದ ಬೆಲೆ ಕುಸಿದಿದ್ದರಿಂದ ಜೋಳವನ್ನು ಮಾರಾಟ ಮಾಡುವ ಗೋಜಿಗೆ ಹೋಗಲಿಲ್ಲ. ಹಾಗಾದರೇ ಈ ಜೋಳವನ್ನು ಏನು ಮಾಡುವುದು ಎಂಬ ಚಿಂತೆ ಆವರಿಸಿತು. ಆಗ ಹೊಳೆದಿದ್ದೇ ಈ ಗಂಜಿ ಕೇಂದ್ರದ ಸ್ಥಾಪನೆ.
600 ಕ್ವಿಂಟಾಲ್ ಜೋಳ ಹಾಗೂ ಅಕ್ಕಿಯನ್ನು ಸೇರಿಸಿ ಗಂಜಿ ತಯಾರಿಸಿ ಬಡವರಿಗೆ ವಿತರಿಸುವ ಕಾರ್ಯವನ್ನು ಅಂದಿನಿಂದಲೇ ಆರಂಭಸಿದರು. ಇದು ಈಗಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಗಂಜಿ ವಿತರಿಸುವ ಪ್ರಮಾಣವೂ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಮೌಲಾಲಿ ಅನಪೂರ್. ಬೇಸಿಗೆ ಆರಂಭವಾಯಿತೆಂದರೆ ಮೌಲಾಲಿ ಅನಪೂರ್ ಅವರ ಗಂಜಿ ಕೇಂದ್ರವೂ ಆರಂಭವಾಗಿ ಮೃಗಶಿರಾ ಮಳೆ ಪ್ರಾರಂಭವಾಗುವವರೆಗೆ ನಿರಂತರವಾಗಿ ನಡೆದೇ ಇರುತ್ತದೆ.
ಮಾತಾ ಮಾಣಿಕೇಶ್ವರಿ ದೇವಿಯವರ ಆಶೀರ್ವಾದದಿಂದ ಇಂತಹ ಒಂದು ಕೆಲಸ ಮಾಡುತ್ತಿದ್ದೇನೆ. ಬೇಸಿಗೆಯಲ್ಲಿ ಜನರು ಬಳಲುವುದನ್ನು ನೋಡಲು ಆಗುವುದಿಲ್ಲ. ಮೇಲಾಗಿ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿಯಲ್ಲಿ ಅನೇಕ ಕೂಲಿ ಕಾರ್ಮಿಕರು ದುಡಿಯಲು ಬರುತ್ತಾರೆ. ಇಲ್ಲಿ ಹಲವಾರು ಗುಡಿಸಲುಗಳಿದ್ದು ಬಡ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸುತ್ತಲಿರುವ ಆಸ್ಪತ್ರೆಗಳಿಗೆ ಅನೇಕ ಬಡರೋಗಿಗಳು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಗಂಜ್ ಪ್ರದೇಶದಲ್ಲಿಯೇ ಗಂಜಿ ಕೇಂದ್ರವನ್ನು ಆರಂಭಿಸಲು ನಿರ್ಧರಿಸಿದೆ ಎನ್ನುವುದು ಮೌಲಾಲಿ ಅನಪೂರ್ ಅವರ ಮಾತು.
ನಿತ್ಯ ಮಧ್ಯಾಹ್ನ 12ರಿಂದ 1.30 ಗಂಟೆಯವರೆಗೆ ಈ ಗಂಜಿ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಇಲ್ಲಿಗೆ ಯಾರೇ ಬರಲಿ ಗಂಜಿ ನೀಡಲಾಗುತ್ತದೆ. ಇಷ್ಟೇ ಪ್ರಮಾಣದ ಗಂಜಿ ಎಂಬ ನಿರ್ಬಂಧವೂ ಇಲ್ಲ. ಹಾಗಾಗಿ ಹೊಟ್ಟೆ ತಣಿಯುವಷ್ಟು ಗಂಜಿ ಕುಡಿಯುವ ಅವಕಾಶ ಇಲ್ಲಿದೆ. ಬೇಸಿಗೆ ಮುಗಿಯುವವರೆಗೂ ಗಂಜಿ ವಿತರಿಸುವ ಮೂಲಕ ಹೊಟ್ಟೆಯ ಹಸಿವು ಬಾಯಾರಿಕೆಗಳನ್ನು ತಣಿಸುವ ಕೆಲಸ ಮಾಡುತ್ತಿರುವ ಮೌಲಾಲಿ ಅನಪೂರ್ ಅವರಿಗೆ ನಿತ್ಯವೂ ಗಂಜಿ ಕುಡಿಯುವ ನೂರಾರು ಜನರು ಹೊಟ್ಟೆ ತಣ್ಣಗಿರಲಿ ಎಂದು ಹಾರೈಸಿ ಹೋಗುತ್ತಿದ್ದಾರೆ.












Click it and Unblock the Notifications