ನಾನು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ: ಶೋಭಾ ಮೇಡಂ

ಮೊದಲು 'ಎಣ್ಣೆ' ಮಂತ್ರಿಯನ್ನು ಶ್ಯಾನೆ ಪರೆಶಾನ್ ಮಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಂತರ ಮೊನ್ನೆ, ನೇರವಾಗಿ ಆ ಮಾಜಿ ಮುಖ್ಯಮಂತ್ರಿಯನ್ನೇ ಕೆಣಕಿದ್ದಾರೆ. ಅವರೋ ಕುಳಿತಲ್ಲಿಂದಲೇ ಮುಗುಳ್ನಕ್ಕು ಎಲ್ಲ ಹೈಕಮಾಂಡ್ ಪ್ರಭಾವ ಎಂದು 'ಕೈ' ಮುಗಿದಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿನ್ನೆ ಪ್ರತಿಪಕ್ಷದ ನಾಯಕಿ ಮೋಟಮ್ಮ ತಾವೇನು ಕಮ್ಮಿ ಅಂತ, ಆ ಮಾಜಿ ಮುಖ್ಯಮಂತ್ರಿಯ ಅತ್ಯಾಪ್ತರಾದ ಇಂಧನ ಸಚಿವೆಯನ್ನು ಕಿಚಾಯಿಸಿದರು. ಸಂದರ್ಭ: ಬಜೆಟ್ ಮೇಲಿನ ಚರ್ಚೆ- ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದ್ದು, ಕೇಂದ್ರದಿಂದ ಕಲ್ಲಿದ್ದಲು ಪಡೆಯುವುದಕ್ಕೆ ದಿಲ್ಲಿಗೆ ಸರ್ವಪಕ್ಷಗಳ ನಿಯೋಗ ಕೊಂಡಯ್ಯಬೇಕು ಎಂದು ಇಂಧನ ಸಚಿವೆಗೆ ಮೋಟಮ್ಮ ಸಲಹೆ ನೀಡಿದರು.
ಆದರೆ, ಇಂಧನ ಸಚಿವೆ ಅವರು ಸಚಿವರಿಗೆ ಮೀಸಲಿಟ್ಟಿದ್ದ ಆಸನಗಳನ್ನು ಬಿಟ್ಟು ಹಿಂದಿನ ಸಾಲಿನಲ್ಲಿ ಪಕ್ಕದ ಸದಸ್ಯರ ಜತೆಗೆ ಮಾತನಾಡುತ್ತಿದ್ದರು. ಅದನ್ನು ನೋಡಿದ ಕಾಂಗ್ರೆಸ್ ಸದಸ್ಯ ವಿ.ಆರ್. ಸುದರ್ಶನ್ ಸದನದ ಗಮನಕ್ಕೆ ತಂದರು.
'ಶೋಭಾ ಅವರು ಪವರ್ ಮಿನಿಸ್ಟರ್. ಇತ್ತೀಚೆಗೆ ಅವರ ಪವರ್ ಕಡಿಮೆ ಆಗಿದೆಯೇ? ನಮಗೆ ಈ ಸಂಶಯವಿದೆ. ಏಕೆಂದರೆ, ವಿದ್ಯುತ್ ಕೊರತೆ ಬಗ್ಗೆ ಚರ್ಚೆ ಆಗುತ್ತಿರಬೇಕಾದರೆ ಅವರು ಹಿಂದಿನ ಸಾಲಲ್ಲಿ ಕುಳಿತು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಸಚಿವರಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಅವರು ಕುಳಿತು ಕಲಾಪದಲ್ಲಿ ಗಂಭೀರವಾಗಿ ಪಾಲ್ಗೊಳ್ಳಬೇಕು. ಅದುಬಿಟ್ಟು ಈ ರೀತಿ ಹಿಂದೆ ಕುಳಿತುಕೊಳ್ಳುವುದು ಸದನದ ನಿಯಮಕ್ಕೆ ವಿರುದ್ಧ' ಎಂದರು.
ಅಷ್ಟೊತ್ತಿಗೆ ಮೋಟಮ್ಮ, ಶೋಭಾ ಅವರು ಕಲ್ಲಿದ್ದಲು ಪಡೆಯಲು ದಿಲ್ಲಿಗೆ ಹೋಗಲು ರೆಡಿ ಇಲ್ಲ. ಆದರೆ, ಇತ್ತೀಚೆಗೆ ಬೇರೆ ವಿಚಾರಗಳಿಗೆ (ಅದೊಂಥರಾ ಪವರ್ ಗಾಗಿ) ಒಬ್ಬರೇ ಬಹಳಷ್ಟು ಸಲ ದಿಲ್ಲಿಗೆ ಹೋಗಿ ಬರುತ್ತಿದ್ದಾರೆ' ಎಂದು ಲೇವಡಿ ಮಾಡಿದರು.
ಅದಕ್ಕೆ ದನಿಗೂಡಿಸಿದ ಜೆಡಿಎಸ್ನ ಎಂ.ಸಿ. ನಾಣಯ್ಯ, ಶೋಭಾ ಇಲ್ಲಿ ಪವರ್ ಲೆಸ್ ಆಗಿರಬಹುದು. ಆದರೆ, ದಿಲ್ಲಿಯಲ್ಲಿ ಪವರ್ ಫುಲ್ ಇದ್ದಾರೆಂದು ಅನಿಸುತ್ತದೆ' ಎಂದು ತಮಾಷೆ ಮಾಡಿದರು.
ಅನಂತರ ಹಿಂದಿನ ಸಾಲಿನಿಂದ ಮುಂದಿನ ಸಾಲಿನ ಆಸನಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ ಅವರು 'ನಾನು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ' ಎಂದಷ್ಟೇ ಪ್ರತಿಕ್ರಿಯೆ ನೀಡಿದರು.












Click it and Unblock the Notifications