ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಏಕೆ ಬರಬಾರದು?

Why Yeddyurappa should not be re-instated as CM of Karnataka?
ಬಿಜೆಪಿಯಲ್ಲಿನ ಆಂತರಿಕ ಯುದ್ಧದಿಂದಾಗಿ ಆಡಳಿತ ದಾರಿತಪ್ಪಿದೆ, ಅಭಿವೃದ್ಧಿ ಮಕಾಡೆ ಮಲಗಿದೆ. ಬಿಜೆಪಿಯ ಕಲಹದ ಲಾಭ ಪಡೆಯಲು ವಿರೋಧ ಪಕ್ಷಗಳು ಸಜ್ಜಾಗಿವೆ. ಆಡಳಿತ ಸರಾಗವಾಗಿ ಸಾಗುವುದು ಅವರಿಗೂ ಬೇಕಿಲ್ಲ, ಇವರಿಗೂ ಬೇಕಿಲ್ಲ. ಬೇಕಿರುವುದು ಅಧಿಕಾರ ಮಾತ್ರ. ಸಾರ್ವಜನಿಕರು ಇಡೀ ರಾಜಕಾರಣಿಗಳ ಸಮೂಹವನ್ನು ಅಸಹ್ಯದಿಂದ ನೋಡುತ್ತಿದ್ದಾರೆ. ರಾಜ್ಯಕ್ಕೆ ಒಬ್ಬ ದಕ್ಷ ರಾಜನಿಲ್ಲದಿದ್ದರೆ ಅರಾಜಕತೆ ಕಟ್ಟಿಟ್ಟ ಬುತ್ತಿ. ಕುರ್ಚಿ ಉಳಿಸಿಕೊಳ್ಳಲು ಸದಾನಂದ ಗೌಡ ಹೋರಾಡುತ್ತಿದ್ದರೆ, ಮರಳಿ ಪಡೆಯಲು ಯಡಿಯೂರಪ್ಪ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಖ್ಯಮಂತ್ರಿಯ ಬದಲಾವಣೆ ಆಗಬೇಕಾ? ಬೇಡವಾ? ಯಡಿಯೂರಪ್ಪ ಮತ್ತೆ ರಾಜ್ಯದ ಅತ್ಯುನ್ನತ ಹುದ್ದೆಗೆ ಮರಳಬಾರದು, ಗೌಡರೇ ಮುಂದುವರಿಯಬೇಕು ಎಂಬ ವಾದ ಇಲ್ಲಿದೆ.

ಅತ್ಯುನ್ನತ ಹುದ್ದೆಯಲ್ಲಿದ್ದೇ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ, ಭೂ ಕಬಳಿಕೆ, ಡಿನೋಟಿಫಿಕೇಷನ್ ಕುರಿತಂತೆ ಏಳೆಂಟು ಕ್ರಿಮಿನಲ್ ಮೊಕದ್ದಮೆಗಳು, ಅಧಿಕಾರಕ್ಕಾಗಿ ಎಂತಹ ರಾಜಕಾರಣಿಯೊಂದಿಗೂ ಕೈಜೋಡಿಸಲು ಹಿಂಜರಿಯರು, ಕುರ್ಚಿಗಾಗಿ ಉತ್ತಮ ಆಡಳಿತ ನೀಡುತ್ತಿದ್ದ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಎಂತಹ ಹೇಯ ಕೃತ್ಯಕ್ಕೂ ಸಿದ್ಧ.

ಇವರು ಮಾಜಿ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (69). ಇಷ್ಟೊಂದು ವಿಶಿಷ್ಟ ಬಿರುದುಬಾವಲಿಗಳನ್ನು ಹೆಗಲಿಗೇರಿಸಿಕೊಂಡವರನ್ನು ಮತ್ತೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂಡಿಸುವುದು ಹೇಗೆ ಸಾಧ್ಯ? ಅದೂ ಇನ್ನೊಬ್ಬರು ಕುರ್ಚಿಯ ಮೇಲೆ ವಿರಾಜಮಾನರಾಗಿರುವಾಗ? ಇಂಥ ರಾಜಕಾರಣಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜಕಾರಣ ಯಾವ ಮಟ್ಟಕ್ಕೆ ಕುಸಿಯುತ್ತದೆಂದು ಒಂದು ಬಾರಿ ಚಿಂತಿಸಬೇಕು.

ಕುಮಾರಸ್ವಾಮಿ ಜೊತೆ ಅನೈತಿಕ ಮೈತ್ರಿ ಸಾಧಿಸಿ ಧರಂ ಸಿಂಗ್ ಅವರನ್ನು ಕಿತ್ತುಬಿಸಾಡಿದ ಕ್ಷಣದಿಂದ ಮುಖ್ಯಮಂತ್ರಿ ಪದವಿ ಕಳೆದುಕೊಳ್ಳುವವರೆಗೆ ಮತ್ತು ತದನಂತರ ಒಂದಿಲ್ಲೊಂದು ವಿವಾದಗಳನ್ನು ಹುಟ್ಟುಹಾಕುತ್ತಲೇ ಯಡಿಯೂರಪ್ಪ ಬಂದಿದ್ದಾರೆ. 20 ತಿಂಗಳ ಒಪ್ಪಂದದ ನಂತರ ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಕುರ್ಚಿ ಬಿಟ್ಟುಕೊಡಬೇಕಾಗಿತ್ತಾದರೂ, ಕಾರಣವಿಲ್ಲದೆ ಕುಮಾರಸ್ವಾಮಿ ಕೈಕೊಡದಿರಲು ಸಾಧ್ಯವಿಲ್ಲ. ನಂತರ ಚುನಾವಣೆ ಎದುರಿಸಿ ಅನುಕಂಪದ ಅಲೆಯ ಮೇಲೆ ತೇಲಿ ಯಡಿಯೂರಪ್ಪ ಅಧಿಕಾರ ಪಡೆದದ್ದು ಇತಿಹಾಸ.

ಹೇಗೆ ಚುನಾವಣೆ ಗೆದ್ದರು, ಯಾರ್ಯಾರಿಂದ ಸಹಾಯ ಪಡೆದರು, ಎಷ್ಟೆಷ್ಟು ಆಪರೇಷನ್ ಕಮಲ ಮಾಡಿದರು ಎಂಬುದು ತಿಳಿದ ವಿಚಾರ. ನಂತರ ಅವರಿಗೆ ಬಂದ ಅಡೆತಡೆಗಳು ಒಂದೆರಡಲ್ಲ. ರೆಡ್ಡಿ ಬ್ರದರ್ಸ್ ಯಡಿಯೂರಪ್ಪ ವಿರುದ್ಧ ದಂಗೆಯೆದ್ದು ಐವತ್ತಕ್ಕೂ ಹೆಚ್ಚು ಶಾಸಕರನ್ನು ಹೈದರಾಬಾದಿಗೆ ಹೈಜಾಕ್ ಮಾಡಿದರು. ಯಡಿಯೂರಪ್ಪ ಶೋಭಾರನ್ನು ಕೈಬಿಟ್ಟು ಕಣ್ಣೀರುಗರೆಯಬೇಕಾಯಿತು. ನಂತರ 2010ರಲ್ಲಿ ಹನ್ನೊಂದು ಶಾಸಕರು ಯಡಿಯೂರಪ್ಪ ನಾಯಕತ್ವ ವಿರುದ್ಧ ಸಿಡಿದೆದ್ದು, ವಿಧಾನಸಭೆಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಆಗ ವಿಶ್ವಾಸಮತ ಪಡೆಯಲು ಯಡಿಯೂರಪ್ಪ ಬೃಹನ್ನಾಟಕ ರಚಿಸಬೇಕಾಯಿತು.

ಅಕ್ರಮ ಗಣಿಗಾರಿಕೆಯಲ್ಲಿ ಅಂಟಿದ್ದ ಕಳಂಕ ಹೈಕೋರ್ಟ್ ತೀರ್ಮಾನದಿಂದ ಸಂಪೂರ್ಣವಾಗಿ ಅಳಿಸಲು ಸಾಧ್ಯವೆ? ಹೈಕೋರ್ಟ್ ಹೇಳಿರುವುದು ವಿಚಾರಣೆ ಸಂದರ್ಭದಲ್ಲಿ ಸ್ವಾಭಾವಿಕ ನ್ಯಾಯ ಒದಗಿಸಿಲ್ಲ ಅಂದಷ್ಟೇ. ಅದರರ್ಥ ಅವರು ಸಂಪೂರ್ಣವಾಗಿ ಮುಕ್ತರಾಗಿದ್ದಾರೆಂದೇನೂ ಅಲ್ಲ. ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಗೆ ಆದೇಶ ನೀಡಬಹುದು. ಅಲ್ಲದೆ, ಭೂಕಬಳಿಕೆಗೆ ಸಂಬಂಧಿಸಿದಂತೆ ಅವರ ಸುತ್ತ ಒಂದಲ್ಲ ಎಂಟು ಕ್ರಿಮಿನಲ್ ಮೊಕದ್ದಮೆಗಳು ಸುತ್ತಿಕೊಂಡಿವೆ. ಹೀಗಿರುವಾಗ, ಅವರನ್ನು ಶುದ್ಧಹಸ್ತರೆಂದು ಹೇಳುವುದು ಹೇಗೆ ಸಾಧ್ಯ?

ಇನ್ನು ಡಿವಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಅವರು ನಡೆಸುತ್ತಿರುವ ಯತ್ನಗಳು ಒಂದೆರಡಲ್ಲ. ಅವರನ್ನು ಮುಖ್ಯಮಂತ್ರಿ ಪದವಿಯ ಮೇಲೆ ಕೂಡಿಸಲು ಬಿಜೆಪಿ ಹೈಕಮಾಂಡಿಗೆ ಎಳ್ಳಷ್ಟೂ ಇಷ್ಟವಿಲ್ಲದಿದ್ದರೂ ಯಡಿಯೂರಪ್ಪ ಸಮಯ ಸಿಕ್ಕಾಗಲೆಲ್ಲ ಬೇಡಿಕೆ ಮುಂದಿಡುತ್ತಿದ್ದಾರೆ. ಅವರ ಬೆಂಬಲಲ್ಲಿ ಸಾಕಷ್ಟು ಅನುದಾನವನ್ನು ಪಡೆದಿರುವ ಮಠಗಳ ಸ್ವಾಮೀಜಿಗಳು ನಿಂತಿರುವುದು ನಿಜಕ್ಕೂ ನಾಚಿಕೆಗೇಡು. ಹೋಗಲಿ ಸಾಮಾನ್ಯ ಜನರಿಗಾದರೂ ಅವರು ಮರಳುವುದು ಬೇಕಾಗಿದೆಯಾ? ಅದೂ ಇಲ್ಲ. ಅಂತಿಮವಾಗಿ ತೀರ್ಮಾನ ನೀಡಬೇಕಾಗಿರುವವರು ಪ್ರಜೆಗಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+