ಫುಟ್ಬಾಲ್ ಆಟಗಾರನ ಸಾವಿಗೆ ಲಕ್ಷ ರು ಪರಿಹಾರ ಸಾಕೇ?
ಬುಧವಾರ(ಮಾ.21) ನೈಋತ್ಯ ರೇಲ್ವೆ ಮತ್ತು ಬೆಂಗಳೂರು ಮಾರ್ಸ್ ತಂಡದ ನಡುವೆ ಮೊದಲ ಪಂದ್ಯ ನಡೆದಿತ್ತು. ಮಾರ್ಸ್ ತಂಡದ ಫುಟ್ಬಾಲ್ ಆಟಗಾರ ಡಿ ವೆಂಕಟೇಶ್ ಉತ್ತಮ ಮುಂಪಡೆ ಆಟಗಾರನಾಗಿ ಗುರುತಿಸಿಕೊಂಡಿದ್ದ. ಪಂದ್ಯದ 78ನೇ ನಿಮಿಷದಲ್ಲಿ ಇದ್ದಕ್ಕಿದ್ದಂತೆ ಎದೆ ಹಿಡಿದುಕೊಂಡು ನೆಲಕ್ಕೆ ಕುಸಿದ ವೆಂಕಟೇಶ್ ನೆರವಿಗೆ ಸಹ ಆಟಗಾರರು ಧಾವಿಸಿ ಬಂದಿದ್ದಾರೆ.
ಆದರೆ, ಅಷ್ಟರಲ್ಲಿ ವೆಂಕಟೇಶ್ ಬಾಯಿಂದ ರಕ್ತ ಕಾಣಿಸಿಕೊಂಡಿದೆ.ಫಿಟ್ಸ್ ಬಂದವರ ರೀತಿಯಲ್ಲಿ ವೆಂಕಟೇಶ್ ಬಿದ್ದಿರುವುದನ್ನು ಕಂಡು ಹತ್ತಿರದಲ್ಲಿರುವ ಅಶೋಕನಗರ ದ ಹೊಸ್ ಮ್ಯಾಟ್ ಆಸ್ಪತ್ರೆಗೆ ವೆಂಕಟೇಶ್ ರನ್ನು ದಾಖಲಿಸಲಾಗಿದೆ. ಆದರೆ, ಮಾರ್ಗ ಮಧ್ಯದಲ್ಲೇ ವೆಂಕಟೇಶ್ ಮೃತಪಟ್ಟಿದ್ದಾರೆ.
ವೆಂಕಟೇಶ್ ಅವರ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಇನ್ನೂ ಬಂದಿಲ್ಲ. ಆದರೆ, ಇದೊಂದು ಸಹಜ ಸಾವು ಎಂದು ವೈದ್ಯರು ತಿಳಿಸಿದ್ದಾರೆ.
ಕುಟುಂಬ ವರ್ಗದ ಆಕ್ರಂದನ: ಬೆಳಗ್ಗೆ ಮನೆ ಬಿಟ್ಟಾಗ ಚೆನ್ನಾಗಿದ್ದ ಯಾವುದೇ ರೀತಿ ನೋವು, ಕಾಯಿಲೆ ಅವನಲ್ಲಿ ಕಂಡು ಬಂದಿರಲಿಲ್ಲ. ಇದ್ದಕ್ಕಿದ್ದಂತೆ ಸಾಯುವಂಥದ್ದು ಏನಾಗಿತ್ತು ತಿಳಿಯುತ್ತಿಲ್ಲ ಎಂದು ಕುಟುಂಬದವರು ಕಣ್ಣೀರು ಹರಿಸಿದ್ದಾರೆ. ಗೌತಮ್ ಪುರದ ನಿವಾಸಿ ಧನರಾಜ್ ಅವರ ಪುತ್ರ ವೆಂಕಟೇಶ್ ಸಾವು ಎಲ್ಲರಿಗೂ ದಿಗ್ಬ್ರಮೆ ಉಂಟು ಮಾಡಿದೆ.
ಸರಿಯಾದ ವೈದ್ಯಕೀಯ ವ್ಯವಸ್ಥೆ ಒದಗಿಸದ ಫುಟ್ಬಾಲ್ ಮಂಡಳಿ ವಿರುದ್ಧ ಸಹ ಆಟಗಾರರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಆಟಗಾರರು ಇದ್ದಾಗ ಸರಿಯಾಗಿ ನೋಡಿಕೊಳ್ಳದೆ, ಸತ್ತ ಮೇಲೆ ಲಕ್ಷ ರು ನೀಡಿದರೆ ಏನು ಪ್ರಯೋಜನ ಎಂದು ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೂಡಾ ಇಂಥದ್ದೆ ಅನಾಹುತ ಸಂಭವಿಸಿತ್ತು. ಎಚ್ಎಎಲ್ನ ಐ ಲೀಗ್ ತಂಡದಲ್ಲಿ ಮೀಸಲು ಗೋಲ್ ಕೀಪರ್ ಆಗಿದ್ದ ಕೆಜಿಎಫ್ ಮೂಲದ ಅರುಣ್ ಕುಮಾರ್ (24) ಹೃದಯಾಘಾತದಿಂದ ಸಾವನ್ನಪ್ಪಿದ್ದರು. 2004ರಲ್ಲಿ ಬ್ರೆಜಿಲ್ ಮೂಲದ ಆಟಗಾರ ಕ್ರಿಶ್ಚಿಯಾನೋ ಡಿ ಲಿಮಾ ಜ್ಯೂ. ಕೂಡಾ ಮೈದಾನದಲ್ಲೇ ಸಾವನ್ನಪ್ಪಿದ್ದರು.