ಯಡ್ಡಿ ವಿರುದ್ಧ ಅಡ್ವಾಣಿ ಸಿಡಿಮಿಡಿಗೊಳ್ಳುತ್ತಿರುವುದೇಕೆ?
'ಕೋರ್ಟ್ ತನ್ನನ್ನು ನಿರ್ದೋಷಿ ಎನ್ನುತ್ತಿದೆ. ಮತ್ತೆ ನಿಮ್ಮದೇನು?' ಎಂದು ಯಡಿಯೂರಪ್ಪ ಹೈಕಮಾಂಡಿಗೆ ಸಡ್ಡು ಹೊಡೆದಿದ್ದಾರಾದರೂ ಕೋರ್ಟಿಗಿಂತ ಹೆಚ್ಚಾಗಿ ಯಡಿಯೂರಪ್ಪನವರ ಇತ್ತೀಚಿನ ನಡುವಳಿಕೆಗಳು ಹೈಕಮಾಂಡಿಗೆ ಸಹ್ಯವಾಗಿಲ್ಲ.
ನಾಲ್ಕು ಪ್ರಮುಖ ಅಂಶಗಳು ಅಡ್ವಾಣಿ ಮತ್ತು ಯಡಿಯೂರಪ್ಪ ಮಧ್ಯೆ ಬೃಹದಾಕಾರವಾಗಿ ಕಾಡತೊಡಗಿವೆ. ಒಂದು, ಆಡ್ವಾಣಿ ಹಮ್ಮಿಕೊಂಡಿದ್ದ ಯಾತ್ರೆ ಸಂದರ್ಭ ಅದರಲ್ಲಿ ಪಾಲ್ಗೊಳ್ಳದಂತೆ ಯಡಿಯೂರಪ್ಪ ತಮ್ಮ ಬೆಂಬಲಿಗ ಸಚಿವರು ಹಾಗೂ ಶಾಸಕರಿಗೆ ಜೈಲಿನಿಂದಲೇ ಸೂಚಿಸಿದ್ದರು ಎನ್ನುವುದು.
ಎರಡು, ಪಕ್ಷಕ್ಕೆ ಪ್ರತಿಷ್ಠಯ ಕದನವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಉಲ್ಟಾ ಹೊಡೆದು ಪ್ರಚಾರದಿಂದ ಯಡಿಯೂರಪ್ಪ ದೂರ ಉಳಿದದ್ದು. ಅಂದರೆ ಯಡಿಯೂರಪ್ಪ ವಿರುದ್ಧ ಇನ್ನೂ ಅಷ್ಟ ಕೇಸುಗಳು ಬಾಕಿಯಿವೆ ಎಂದು ಮುಖ್ಯಮಂತ್ರಿ ಸದಾನಂದರು ಮುಂಬೈನಲ್ಲಿ ಹೇಳಿದ್ದನ್ನೇ ನೆಪವಾಗಿಸಿಕೊಂಡ ಯಡಿಯೂರಪ್ಪ, ಸರಿ ಹಾಗಾದರೆ ನಾನು ಕಳಂಕಿತ. ಅದಕ್ಕೋಸ್ಕರ ನಿಮ್ಮ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಮೊಂಡು ಹಿಡಿದರು.
ಮತ್ತೀಗ, ಬಜೆಟ್ ಅಧಿವೇಶನ ಸಮೀಪಿಸಿದ ಸಂದರ್ಭ ತಮ್ಮ ಸ್ಥಾನಮಾನಕ್ಕಾಗಿ ಆಗ್ರಹಿಸಿ ಬೆಂಬಲಿಗ ಶಾಸಕರನ್ನು ಯಡಿಯೂರಪ್ಪ ರೆಸಾರ್ಟ್ಗೆ ಕರೆದೊಯ್ದಿರುವುದು. ಕೊನೆಯದಾಗಿ, ನಿನ್ನೆ ಇದ್ದಕ್ಕಿದ್ದ ಹಾಗೆ ರಾಜ್ಯಸಭಾ ಚುನಾವಣೆಗೆ ತಮ್ಮ ಬೆಂಬಲಿಗ ಪುಟ್ಟಸ್ವಾಮಿಯನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು.