ಬೆಂ. ವಿಪ್ರೋ ಟೆಕ್ಕಿ ನಾಪತ್ತೆಯಾಗಿದ್ದು ಹೇಗೆ?
ದೂರಿನ ವಿವರ ಹೀಗಿತ್ತು: 25 ವರ್ಷದ ಸತೀಶ ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ವಾರಂಗಲ್ ನ ತನ್ನ ಗೆಳೆಯನ ಮದುವೆಗೆಂದು ಸತೀಶ ಫೆಬ್ರವರಿ 1ರಂದು ಹೈದರಾಬಾದಿಗೆ ಬಂದಿದ್ದ. ಬೆಂಗಳೂರಿನಿಂದ ಮದುವೆಗಾಗಿ ಬಂದಿದ್ದ ಸತೀಶ ಹೈದರಾಬಾದಿನಲ್ಲಿ ತನ್ನ ಗೆಳೆಯ ಮಹೆಂದರನ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ. ಆದರೆ ಸತೀಶ ಅತ್ತ ಮದುವೆಗೂ ಹೋಗಿಲ್ಲ; ಇತ್ತ ತನ್ನೂರಾದ ಕರೀಂನಗರಕ್ಕೂ ವಾಪಸಾಗಲಿಲ್ಲ. ಹೋಗ್ಲಿ ಕೆಲಸಕ್ಕೆಂದು ಬೆಂಗಳೂರಿಗೆ ಹೋದನಾ ಅಂದರೆ ಅಲ್ಲಿಗೂ ಹೋಗಿಲ್ಲ.
ಒಂದೆರಡು ದಿನ ಅಲ್ಲಿ ಇಲ್ಲಿ ಹುಡುಕಾಟ ನಡೆಸಿದ ಸತೀಶನ ಕಡೆಯವರು ಕೊನೆಗೆ (ಫೆ. 4) ಹೈದರಾಬಾದಿನ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಟ್ ನೀಡಿದರು. ಆದರೆ ಪೊಲೀಸರು ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಈ ಮಧ್ಯೆ, ಸತೀಶನ ತಂದೆ ಶಂಕರಯ್ಯ ಅವರಿಗೆ ತಮ್ಮ ಪುತ್ರನ ಪ್ರೀತಿ ಪ್ರೇಮದ ಬಗ್ಗೆ ಸುಳಿವು ಸಿಕ್ಕಿತು. ಸತೀಶ ಮತ್ತು ಲಾವಣ್ಯ ಜತೆಗಿರುವ ಫೋಟೋಗಳು ಸಿಕ್ಕಿದ್ದು ಆಗಲೇ. ಜತೆಗೆ ಸತೀಶ, ಲಾವಣ್ಯಳ ಸಂಬಂಧಿಕರ ಜತೆ ಇರುವ ಫೋಟೋಗಳೂ ಸಿಕ್ಕಿದ್ದವು.
ಅದರ ಬಗ್ಗೆ ಹೆಚ್ಚು ಕೆದಕಿದ ಶಂಕರಯ್ಯಗೆ ಆತಂಕಕಾರಿ ಮಾಹಿತಿಯೊಂದು ಸಿಕ್ಕಿತ್ತು. ಏನಪಾ ಅಂದರೆ ತಮ್ಮ ಮಗಳ ಜತೆ ಸತೀಶ ಓಡಾಡುವುದು ಲಾವಣ್ಯ ಪೋಷಕರಿಗೆ ಇಷ್ಟವಿರಲಿಲ್ಲ. ಆ ಬಗ್ಗೆ ಸತೀಶನಿಗೆ ವಾರ್ನಿಂಗ್ ಸಹ ಕೊಟ್ಟಿದ್ದರು. ಇಂತಹ ಆಘಾತಕಾರಿ ಮಾಹಿತಿ ಸಿಕ್ಕಿದ ತಕ್ಷಣ ಸತೀಶನ ತಂದೆ ಶಂಕರಪ್ಪ ಪೊಲೀಸರತ್ತ ಮತ್ತೆ ದೌಡಾಯಿಸಿದರು.
ಆದರೆ ಪೊಲೀಸರು ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಅನ್ಯ ಮಾರ್ಗವಿಲ್ಲದೆ ಶಂಕರಯ್ಯ APSHRC ಬಾಗಿಲು ಬಡಿದರು. ಆಯೋಗದಿಂದ ಎಚ್ಚರಿಕೆ ಮಿಶ್ರಿತ ಸೂಚನೆ ಬರುತ್ತಿದ್ದಂತೆ ಎದ್ದುಕುಳಿತ ಪೊಲೀಸರು ಪ್ರಕರಣವನ್ನು ಇದೀಗ ಬೇಧಿಸಿದ್ದು, ಸತೀಶನನ್ನು ಲಾವಣ್ಯ ಕಡೆಯವರು ಸುಟ್ಟು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.