ಕೃಷ್ಣಯ್ಯ ಶೆಟ್ಟಿಗೆ ಮತ್ತೆ ಸಿಬಿಐ ಕಾಟ ಶುರು
ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಡಿ, ಎಸ್ ಬಿಎಂ ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಡಿ ಸುಧಾಕರ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಆದರೆ, ಸಿಬಿಐ ತನಿಖೆ ರದ್ದುಗೊಳಿಸುವಂತೆ ಕೃಷ್ಣಯ್ಯ ಶೆಟ್ಟಿ ಕೋರಿದ್ದರು. ಶೆಟ್ಟಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಸಿಬಿಐಗೆ ತನಿಖೆ ಮುಂದುವರೆಸುವಂತೆ ಸೂಚಿಸಿದೆ.
ಏನಿದು ಕೇಸ್ : ಮಾಜಿ ಸಚಿವರಾದ ಕೃಷ್ಣಯ್ಯ ಶೆಟ್ಟಿ ಹಾಗೂ ಡಿ ಸುಧಾಕರ್ ಅವರು ಬಾಲಜಿ ಕೃಪ ಎಸ್ಟೇಟ್ ಎಂಬ ಸಂಸ್ಥೆ ಮೂಲಕ ನಕಲಿ ದಾಖಲೆ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ನಿಂದ 7.17 ಕೋಟಿ ರು ಸಾಲ ಪಡೆದಿದ್ದರು. ಈ ಸಾಲದಿಂದ ವಸತಿ ನಿವೇಶನ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದರು.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕೃಷ್ಣಯ್ಯ ಶೆಟ್ಟಿ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದ ಕೋರ್ಟ್, ಆರೋಪಿಗಳನ್ನು ಬಂಧಿಸದಂತೆ ನಿರ್ಬಂಧ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಮಾ.3 ರಂದು ವಿಚಾರಣೆ ನಡೆದು ಮಾ.12ಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಸೋಮವಾರ(ಮಾ.12) ನಡೆದ ವಿಚಾರಣೆಯಲ್ಲಿ ಕೃಷ್ಣಯ್ಯ ಶೆಟ್ಟಿ ವಿರುದ್ಧ ತನಿಖೆಗೆ ಕೋರ್ಟ್ ಮತ್ತೆ ಗ್ರೀನ್ ಸಿಗ್ನಲ್ ನೀಡಿದೆ.