ಅಖಿಲೇಶ್ ಯಾದವ್ ಮೈಸೂರಿನ ಬಿಇ ಪದವೀಧರ

ಉತ್ತರಪ್ರದೇಶದಲ್ಲಿ ಇಂದು ಒಂದು ಯುವನೇತ ಉದಯಿಸಿದ್ದರೆ ಮತ್ತೊಬ್ಬ ಯುವನೇತ ಬೆಳ್ಳಂಬೆಳಗ್ಗೆಯೇ ಅಸ್ತಮಿಸಿದ್ದಾನೆ. ಇದು ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಕುರಿತಾದ ಒಂದು ವಾಕ್ಯದ ವಿಶ್ಲೇಷಣೆ. ಎಲ್ಲಿಯ ಅಖಿಲೇಶ್? ಎಲ್ಲಿಯ ರಾಹುಲ್ ಎಂದು ಮೂಗೆಳೆಯಬೇಡಿ. ಏಕೆಂದರೆ ಅಖಿಲೇಶರ ಮೂಗು ತುಸು ಉದ್ದವಾಗಿಯೇ ಇದೆ. ಅದು ಈಗ ಮತ್ತಷ್ಟು ಸುಂದರವಾಗಿ ಕಾಣುತ್ತಿದೆ.
ಉತ್ತರಪ್ರದೇಶದ ರಾಜಕೀಯ ಹವಾ ಬಲ್ಲವರಿಗೆ ಇಂದು ಅಖಿಲೇಶ್ ಉದಯ, ರಾಹುಲ್ ಸೋಲು ಇವರಿಬ್ಬರಿಗೂ ಮಹತ್ವದ್ದಾಗಿದೆ. 39 ವರ್ಷದ ಸಂಸದ ಅಖಿಲೇಶ್ ಅಪ್ಪನ ಸೈಕಲ್ಲಿಗೆ ಬಲವಾಗಿ ಗಾಳಿ ತುಂಬಿದ್ದರೆ 41 ವರ್ಷದ ಸಂಸದ ರಾಹುಲ್ ಕಾಂಗ್ರೆಸ್ ಹವಾವನ್ನು ಮೂರಾಬಟ್ಟೆ ಮಾಡಿದ್ದಾರೆ. ಇಬ್ಬರೂ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಪಕ್ಷದ ಗೆಲುವಿಗೆ ಅನ್ನ ನೀರು ಬಿಟ್ಟು ಹೋರಾಡಿದ್ದು ಹೌದು. ಆದರೆ ಅಂತಿಮವಾಗಿ ರಾಹುಕ್ ಸೋಲೊಪ್ಪಿದ್ದಾರೆ ಅಷ್ಟೇ.
ಇಬ್ಬರೂ ಅವರವರ ಪಕ್ಷಗಳಿಗೆ ಯುವ ಅಧಿನಾಯಕರೇ. ಅಪ್ಪ ರಾಜೀವರ ಅಮೇಥಿಯಲ್ಲಿ ರಾಹುಲ್ 2 ಬಾರಿ ಗೆದ್ದಿದ್ದರೆ ಅಖಿಲೇಶ್ ತನ್ನ ಅಪ್ಪ ಮುಲಾಯಂರ ಕನೌಜ್ ಕ್ಷೇತ್ರವನ್ನು ಇಸ್ವಿ 2000 ರಿಂದ ತಮ್ಮ ಭದ್ರ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಅಖಿಲೇಶ್, ಇದುವರೆಗೆ ಒಟ್ಟು ನಾಲ್ಕು ಬಾರಿ ಲೋಕಸಭೆ ಚುನಾವಣೆಗಳನ್ನು ಗೆದ್ದಿದ್ದಾರೆ.
ಮೂರು ಬಾರಿ ಸಿಎಂ ಪಟ್ಟ ಅಲಂಕರಿಸಿರುವ ಮುಲಾಯಂ ಈ ಬಾರಿ ಮಗನಿಗೆ ಸ್ಥಾನ ಬಿಟ್ಟುಕೊಡಬಹುದು. ಅಂದರೆ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದು ಖಚಿತ ಎಂಬುದು ರಾಜಕೀಯ ಪಂಡಿತರ ಅಭಿಮತ.
ಅಖಿಲೇಶ್ ಮೊದಲ ಸೋಲು: ಅಖಿಲೇಶರ ಪತ್ನಿ ಡಿಂಪಲ್ 2009ರಲ್ಲಿ ರಾಜ್ ಬಬ್ಬರ್ ವಿರುದ್ಧ ಫಿರೋಜಾಬಾದ್ ಲೋಕಸಭೆ ಚುನಾವಣೆಯಲ್ಲಿ ಅಪಜಯ ಅನುಭವಿಸಿದರು. ಗಮನಾರ್ಹವೆಂದರೆ ಅದಕ್ಕೂ ಮುನ್ನ ಅಖಿಲೇಶ್ 67 ಸಾವಿರ ಮತಗಳಿಂದ ಈ ಕ್ಷೇತ್ರ ಗೆದ್ದುಕೊಂಡಿದ್ದರು. ಕನೌಜ್ ಕ್ಷೇತ್ರದಿಂದಲೂ ಗೆಲುವು ಸಾಧಿಸಿದ್ದರಿಂದ ಈ ಕ್ಷೇತ್ರವನ್ನು ಬಿಟ್ಟುಕೊಟ್ಟು ಉಪಚುನಾವಣೆಗೆ ದಾರಿ ಮಾಡಿಕೊಟ್ಟಿದ್ದರು. ಆದರೆ ಮತದಾರ ಅಖಿಲೇಶರ ಪತ್ನಿಯತ್ತ ಒಲವು ಬೀರಲಿಲ್ಲ. ಅಖಿಲೇಶ್ ರಾಜಕೀಯವಾಗಿ ಸೋಲೊಪ್ಪಿದ್ದು ಇದೊಂದೇ ಎನ್ನಬಹುದು.
ಅತ್ತ ರಾಹುಲ್ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನವನ್ನು ಸಮಗ್ರವಾಗಿ ಬಳಸಿಕೊಂಡಿದ್ದರೆ ಅಖಿಲೇಶ್ ಮಣ್ಣಿನ ಮಗನಾಗಿ ರಾಜ್ಯದ ಉದ್ದಗಲಕ್ಕೂ ಸೈಕಲ್ ತುಳಿದಿದ್ದಾರೆ. ಕಳೆದ 6 ತಿಂಗಳಲ್ಲಿ 10,000 ಕಿ.ಮೀ. ರಥ ಯಾತ್ರೆ ಪೂರೈಸಿದ್ದಾರೆ. ಆಮ್ ಆದ್ಮಿ ತನ್ನ ಬಳಿಗೆ ಬಂದ ಯುವನೇತಾರನನ್ನು ಮನಸಾರೆ ಅಪ್ಪಿ ಮುದ್ದಾಡಿದ್ದಾರೆ. ರಾಹುಲ್ ತಾನು ತುಳಿದಿದ್ದೇ ಹಾದಿ ಎಂದು ಆನೆಯಂತೆ ಸವಾರಿ ಮಾಡಿದರೆ ಅಖಿಲೇಶ್ ತಣ್ಣಗೆ ಪ್ರತಿಕ್ರಿಯಿಸುತ್ತಾ ಮತದಾರನ ಮನ ಗೆದ್ದರು.












Click it and Unblock the Notifications